ADVERTISEMENT

ಸದೃಢ ದೇಶ ನಿರ್ಮಾಣಕ್ಕೆ ಮುಂದಾಗಿ: ಮಹಾಂತ ದೇಶಿಕೇಂದ್ರ ಸ್ವಾಮೀಜಿ

ದಿನಸಿ ಕಿಟ್ ವಿತರಣೆ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 24 ಅಕ್ಟೋಬರ್ 2021, 4:14 IST
Last Updated 24 ಅಕ್ಟೋಬರ್ 2021, 4:14 IST
ಶಿಕಾರಿಪುರದಲ್ಲಿ ಶನಿವಾರ ಎಚ್.ಕೆ. ಫೌಂಡೇಶನ್ ಆಶ್ರಯದಲ್ಲಿ ನಡೆದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ತೊಗರ್ಸಿ ಮಳೆ ಹಿರೇಮಠದ ಪೀಠಾಧ್ಯಕ್ಷ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಕಿಟ್‌ ವಿತರಿಸಿದರು.
ಶಿಕಾರಿಪುರದಲ್ಲಿ ಶನಿವಾರ ಎಚ್.ಕೆ. ಫೌಂಡೇಶನ್ ಆಶ್ರಯದಲ್ಲಿ ನಡೆದ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ತೊಗರ್ಸಿ ಮಳೆ ಹಿರೇಮಠದ ಪೀಠಾಧ್ಯಕ್ಷ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಕಿಟ್‌ ವಿತರಿಸಿದರು.   

ಶಿಕಾರಿಪುರ:ಜಾತಿ, ಧರ್ಮ ಭೇದವಿಲ್ಲದೇ ಎಲ್ಲರೂ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಮುಂದಾಗಬೇಕು ಎಂದು ತೊಗರ್ಸಿ ಮಳೆ ಹಿರೇಮಠದ ಪೀಠಾಧ್ಯಕ್ಷ ಮಹಾಂತ ದೇಶಿಕೇಂದ್ರ ಸ್ವಾಮೀಜಿ ಸಲಹೆ ನೀಡಿದರು.

ಪಟ್ಟಣದ ಜುಬೇದಾ ವಿದ್ಯಾಸಂಸ್ಥೆ ಆವರಣದಲ್ಲಿ ಶನಿವಾರ ಎಚ್.ಕೆ. (ಹಾಫೀಜ್ ಕರ್ನಾಟಕಿ) ಫೌಂಡೇಶನ್ ಆಶ್ರಯದಲ್ಲಿ ನಡೆದ ದಿನಸಿ ವಸ್ತುಗಳ ಕಿಟ್ ವಿತರಣೆ ಹಾಗೂ ಸನ್ಮಾನ ಕಾರ್ಯಕ್ರಮದ ನೇತೃತ್ವ ವಹಿಸಿ ಅವರು ಮಾತನಾಡಿದರು.

ಹಿಂದೂ, ಮುಸ್ಲಿಂ ಸೇರಿ ಎಲ್ಲಾ ಧರ್ಮಗಳು ಮಾನವನ ಒಳಿತಿಗಾಗಿ ಸಂದೇಶ ನೀಡಿವೆ. ಪರಸ್ಪರ ದ್ವೇಷ ಅಸೂಯೆ ತೊರೆದು ಎಲ್ಲರೂ ಸಾಮರಸ್ಯದ ಜೀವನ ನಡೆಸಬೇಕು. ಧರ್ಮ ಧರ್ಮಗಳ ಮಧ್ಯೆ ಸೌಹಾರ್ದ ಬೆಳೆಯಬೇಕು. ಸಾಹಿತ್ಯ ಕ್ಷೇತ್ರಕ್ಕೆ ಡಾ.ಹಾಫೀಜ್ ಕರ್ನಾಟಕಿ ಉತ್ತಮ ಕೊಡುಗೆ ನೀಡಿದ್ದಾರೆ. ಎಚ್.ಕೆ. ಫೌಂಡೇಶನ್ ಮೂಲಕ ದಿನಸಿ ಕಿಟ್ ವಿತರಿಸು
ತ್ತಿರುವುದು ಶ್ಲಾಘನೀಯ ಎಂದರು.

ADVERTISEMENT

‘ಯುವ ಪೀಳಿಗೆ ಶಿಕ್ಷಣಕ್ಕೆ ಆದ್ಯತೆ ನೀಡಬೇಕು. ಮಾಜಿ ರಾಷ್ಟ್ರಪತಿ ಡಾ.ಅಬ್ದುಲ್ ಕಲಾಂ ಮಾದರಿಯಾಗಬೇಕು. ತಾಯಂದಿರು ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ರಾಷ್ಟ್ರದ ಅಭಿವೃದ್ಧಿಗೆ ಕೊಡುಗೆ ನೀಡಬೇಕು. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಂಡಿರುವ ಜುಬೇದಾ ವಿದ್ಯಾಸಂಸ್ಥೆ ಸರ್ವತೋಮುಖ ಬೆಳವಣಿಗೆಯಾಗಲಿ’ ಎಂದು ಹಾರೈಸಿದರು.

ಎಚ್.ಕೆ. ಫೌಂಡೇಶನ್ ಅಧ್ಯಕ್ಷ ಫಯಾಜ್ ಆಹಮದ್ ಅಧ್ಯಕ್ಷತೆ ವಹಿಸಿದ್ದರು. ಮಳೆ ಹಿರೇಮಠದ ಪೀಠಾಧ್ಯಕ್ಷ ಮಹಾಂತ ದೇಶಿಕೇಂದ್ರ ಸ್ವಾಮೀಜಿ, ತಾಲ್ಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಆರ್. ರಾಘವೇಂದ್ರ, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಮಠದ್, ಪಟ್ಟಣ ಪಿಎಸ್‌ಐ ರಾಜುರೆಡ್ಡಿ ಹಾಗೂ ಕೊರೊನಾ ವಾರಿಯರ್‌ಗಳನ್ನು ಸನ್ಮಾನಿಸಲಾಯಿತು.

ಜುಬೇದಾ ವಿದ್ಯಾಸಂಸ್ಥೆ ಸಂಸ್ಥಾಪಕ ಡಾ. ಮೌಲಾನಾ ಅಮ್ಜದ್ ಹುಸೇನ್ ಹಾಫೀಜ್ ಕರ್ನಾಟಕಿ, ಅನಸ್ ವಿದ್ಯಾಸಂಸ್ಥೆ ಸಂಸ್ಥಾಪಕ ಜಾವೀದ್ ಪಾಷಾ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾ ಗ್ರಾಮಾಂತರ ಕಾರ್ಯದರ್ಶಿ ಕೆ.ಎಸ್. ಹುಚ್ಚರಾಯಪ್ಪ,ಬಾಪೂಜಿ ವಿದ್ಯಾಸಂಸ್ಥೆ ಅಧ್ಯಕ್ಷ ಬಿ. ಪಾಪಯ್ಯ, ಮುಖಂಡ ಮಹಮದ್ ಹನೀಫ್, ಜುಬೇದಾ ವಿದ್ಯಾಸಂಸ್ಥೆ ಕಾರ್ಯದರ್ಶಿ ಅನೀಸ್, ಆಡಳಿತಾಧಿಕಾರಿ ಆಹ್ಮದ್, ಸಿಬ್ಬಂದಿ ಎನ್.ಎ. ಮಡ್ಡಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.