ADVERTISEMENT

ಅಂಬುತೀರ್ಥದಿಂದ ಕೂಗಳತೆಯ ದೂರದಲ್ಲೇ ಅತಿಮೋಹಕ ‘ಅಚ್ಚಕನ್ಯೆ’ ಜಲಪಾತ

ಶರಾವತಿಯ ಉಗಮದಲ್ಲೇ ಮನಮೋಹಕ ದೃಶ್ಯ; ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯ

ಹೊಸಕೊಪ್ಪ ಶಿವು
Published 30 ಜುಲೈ 2025, 3:02 IST
Last Updated 30 ಜುಲೈ 2025, 3:02 IST
ಅಚ್ಚಕನ್ಯೆ ಜಲಪಾತ
ಅಚ್ಚಕನ್ಯೆ ಜಲಪಾತ   

ಕೋಣಂದೂರು: ಶರಾವತಿ ನದಿಯ ಉಗಮ ಸ್ಥಾನ ಅಂಬುತೀರ್ಥದಿಂದ ಕೂಗಳತೆಯ ದೂರದಲ್ಲೇ ಮನಮೋಹಕವಾದ ‘ಅಚ್ಚಕನ್ಯೆ’ ಜಲಪಾತ ಇದೆ. ಈ ಸುಂದರ ತಾಣದ ಬಗ್ಗೆ ಪ್ರವಾಸಿಗರಿಗೆ ಮಾಹಿತಿ ಇಲ್ಲವಾಗಿದೆ.  

ಅರಳಸುರುಳಿ ಗ್ರಾಮದ ಮುಖ್ಯ ರಸ್ತೆಯಿಂದ ಕೇವಲ ಒಂದೂವರೆ ಕಿ.ಮೀ. ಡಾಂಬರು ರಸ್ತೆಯಲ್ಲಿ ಸಾಗಿ ಬಳಿಕ ಸ್ವಲ್ಪ ದೂರ ಮಣ್ಣು ರಸ್ತೆಯಲ್ಲಿ ಹೆಜ್ಜೆ ಹಾಕಿದರೆ ಈ ಜಲಪಾತವು ಮಲ್ಲಿಗೆಯಂತೆ ಕಂಗೊಳಿಸುತ್ತದೆ. 

ಮುಂಗಾರು ಪ್ರಾರಂಭವಾಗುತ್ತಿದ್ದಂತೆ ಅಚ್ಚಕನ್ಯೆ ಮೈದುಂಬಿ ಧುಮುಕುತ್ತಾಳೆ. ಈ ಸಂದರ್ಭದಲ್ಲಿ ಮಾತ್ರ ಕೆಲ ಪ್ರವಾಸಿಗರು ಕಾಣಸಿಗುತ್ತಾರೆ. ಅದರಲ್ಲೂ ಶನಿವಾರ, ಭಾನುವಾರ ಪ್ರವಾಸಿಗರ ಸಂಖ್ಯೆ ತುಸು ಹೆಚ್ಚಿರುತ್ತದೆ. ಆದರೆ, ಜಲಪಾತದ ಕುರಿತಾದ ಮಾಹಿತಿ, ಯಾವುದೇ ಸೂಚನಾ ಫಲಕ ಇಲ್ಲ. 

ADVERTISEMENT

ಇತಿಹಾಸ: 

ಸುಮಾರು 500 ವರ್ಷಗಳ ಹಿಂದೆ ಈ ಭಾಗದಲ್ಲಿ ಜೈನ ಮತ್ತು ಲಿಂಗಾಯತ ಕುಟುಂಬಗಳು ನೆಲೆಸಿದ್ದವು. ಜಲಪಾತದಲ್ಲಿ ಬಟ್ಟೆ ತೊಳೆಯಲು ಬಂದಿದ್ದ ಅಕ್ಕ ತಂಗಿಯರಿಬ್ಬರು ಆಕಸ್ಮಿಕವಾಗಿ ಕಾಲು ಜಾರಿ ಮುಳುಗಿ ಮೃತಪಟ್ಟರು. ಅದನ್ನು ಕಂಡ ದನಗಾಹಿಯೊಬ್ಬ ಅದಕ್ಕೆ ಅಕ್ಕ-ತಂಗಿಯರ ಗುಂಡಿ ಎಂದು ಕರೆದ. ನೈಸರ್ಗಿಕ ವಿಕೋಪಗಳಿಂದ ಈ ಭಾಗದಲ್ಲಿದ್ದ ಕುಟುಂಬಗಳು ಕ್ರಮೇಣ ನಾಶ ಹೊಂದಿದವು ಎಂಬುದು ಸ್ಥಳೀಯರ ಅಭಿಪ್ರಾಯ.  

ಮೈದುಂಬಿ ಅಚ್ಚ ಮಲ್ಲಿಗೆಯ ರೀತಿಯಲ್ಲಿ ಎರಡು ಕವಲಾಗಿ ಧುಮುಕುತ್ತಿದ್ದ ಜಲಪಾತದಿಂದ ಸ್ಫೂರ್ತಿ ಪಡೆದು ಸಾಹಿತ್ಯ ಕೃಷಿಯಲ್ಲಿ ತೊಡಗಿಕೊಂಡಿದ್ದ ಅರಳಸುರುಳಿ ಸುಬ್ರಹ್ಮಣ್ಯ ಅಡಿಗರು 1960ರ ಸುಮಾರಿನಲ್ಲಿ ಈ ಜಲಪಾತಕ್ಕೆ ಅಚ್ಚಕನ್ಯೆ ಎಂದು ಹೆಸರಿಟ್ಟರು.

60 ಅಡಿಗಳ ಎತ್ತರದಿಂದ ಧುಮುಕುವ ಜಲಪಾತ ಮಳೆಗಾಲದಲ್ಲಿ ಕೆಮ್ಮಣ್ಣಿನಂತಹ ಮಣ್ಣು ಮಿಶ್ರಿತ ನೀರಿನಿಂದ ಕಂಗೊಳಿಸುತ್ತದೆ. ಮಳೆಗಾಲ ಕಡಿಮೆಯಾಗುತ್ತಿದ್ದಂತೆ ಬಿಳಿಯ ಮಲ್ಲಿಗೆ ಹೂವಿನಂತೆ ತಿಳಿ ನೀರಿನಿಂದ ಜಲಪಾತ ಕಾಣಿಸುತ್ತದೆ. 

ಜಲಪಾತ ವೀಕ್ಷಣೆಗೆ ಬರಲು ಡಾಂಬರು ರಸ್ತೆಯ ಅವಶ್ಯಕತೆ ಇದೆ. ಶರಾವತಿಯ ಒಡಲಲ್ಲಿ, ಎಲೆಮರೆಯ ಕಾಯಿಯಂತೆ ಇರುವ ಜಲಪಾತದ ತಾಣವು ಮೂಲ ಸೌಕರ್ಯಗಳಿಲ್ಲದೆ ಸೊರಗಿದೆ. ಸೂಕ್ತ ರಸ್ತೆ, ಸೂಚನಾ ಫಲಕ, ಪಾರ್ಕಿಂಗ್ ವ್ಯವಸ್ಥೆ, ಕುಡಿಯುವ ನೀರಿನ ಸೌಲಭ್ಯವನ್ನು  ಕಲ್ಪಿಸುವ ಮೂಲಕ ಇದನ್ನು ಉತ್ತಮ ಪ್ರವಾಸಿ ತಾಣವನ್ನಾಗಿಸಬೇಕಿದೆ. ಈ ಜಲಪಾತ ನೋಡಲು ಬರುವವರಿಗೆ ತಂಗಲು ಯಾವುದೇ ಅನುಕೂಲತೆಗಳಿಲ್ಲ.

ಶರಾವತಿ ಉಗಮದ ಜಲಪಾತ ಹೊರ ಜಗತ್ತಿಗೆ ಗೋಚರಿಸದಿರಲು ಪ್ರವಾಸೋದ್ಯಮ ಇಲಾಖೆಯ ನಿರ್ಲಕ್ಷ್ಯವೇ ಕಾರಣ. ಮೂಲಸೌಕರ್ಯ ಕಲ್ಪಿಸಬೇಕು
ಸತೀಶ್ಚಂದ್ರ ಅಡಿಗ ಸ್ಥಳೀಯ ನಿವಾಸಿ
ಆಗತಾನೇ ಅಭ್ಯಂಜನ ಸ್ನಾನ ಮಾಡಿದ ಮಲೆನಾಡಿನ ತರುಣಿಯಂತೆ ಜಲಧಾರೆಯಲ್ಲಿ ಗೋಚರಿಸುತಿದ್ದುದರಿಂದ ಅಚ್ಚಕನ್ಯೆ ಜಲಪಾತ ಎಂದು ಕರೆಯಲಾಗಿದೆ
ಟಿ.ಎಲ್.ಸುಬ್ರಹ್ಮಣ್ಯ ಅಡಿಗ ಸಾಹಿತಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.