ADVERTISEMENT

ಶಿವಮೊಗ್ಗ | ಮತಪಟ್ಟಿ: ಹೊಸದಾಗಿ 25,426 ಅರ್ಜಿ

ರಾಜಕೀಯ ಪಕ್ಷಗಳೊಂದಿಗೆ ಸಭೆ: ಜ.5ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2022, 6:27 IST
Last Updated 20 ಡಿಸೆಂಬರ್ 2022, 6:27 IST
ಶಿವಮೊಗ್ಗದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಭೆ ನಡೆಸಿದರು
ಶಿವಮೊಗ್ಗದಲ್ಲಿ ಸೋಮವಾರ ಜಿಲ್ಲಾಧಿಕಾರಿ ಡಾ.ಆರ್.ಸೆಲ್ವಮಣಿ ಸಭೆ ನಡೆಸಿದರು   

ಶಿವಮೊಗ್ಗ: ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು ಹೊಸದಾಗಿ 25,426 ಅರ್ಜಿಗಳು ಬಂದಿವೆ. 2023 ರ ಜನವರಿ 5 ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್.ಸೆಲ್ವಮಣಿ ಹೇಳಿದರು.

ನಗರದಲ್ಲಿ ಸೋಮವಾರ ರಾಜಕೀಯ ಪಕ್ಷಗಳ ಮುಖಂಡರೊಂದಿಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, 2023ರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ವೇಳೆ ಜಿಲ್ಲೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳಲು (ನಮೂನೆ 6) 25,426 ಅರ್ಜಿಗಳು ಅರ್ಜಿ ಬಂದಿವೆ.

18 ಮತ್ತು 19 ವರ್ಷದ 10,667 ಯುವ ಮತದಾರರ ಅರ್ಜಿಗಳು ಬಂದಿವೆ. ನಮೂನೆ 7 ರಲ್ಲಿ ಮರಣ, ವಿಳಾಸ ಬದಲಾವಣೆ, ಸ್ಥಳ ಬದಲಾವಣೆಗೆ ಸಂಬಂಧಿಸಿದ 17,229 ಅರ್ಜಿಗಳು ಬಂದಿವೆ. ನವೆಂಬರ್ 9 ರಂದು ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಲಾಗಿದೆ. ನ.9 ರಿಂದ ಹಕ್ಕು ಮತ್ತು ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿದೆ. ಪ್ರಸ್ತುತ ಅವುಗಳ ಪರಿಶೀಲನೆ ನಡೆಸಲಾಗುತ್ತಿದೆ.

ADVERTISEMENT

ಡಿಸೆಂಬರ್ 26ರಂದು ಹಕ್ಕು ಮತ್ತು ಆಕ್ಷೇಪಣೆಗಳ ವಿಲೇವಾರಿ ಮಾಡಿ, ಜನವರಿ 5ರಂದು ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಹಾಗೂ ಚುನಾವಣೆ ಘೋಷಣೆಯಾಗಿ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸುವ ಅಂತಿಮ ದಿನದವರೆಗೆ ಮತದಾರರಿಂದ ಅರ್ಜಿಗಳ ಸ್ವೀಕರಿಸಲಾಗುವುದು ಎಂದರು.

ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದಲ್ಲಿ 247 ಮತಗಟ್ಟೆಗಳು, ಭದ್ರಾವತಿಯಲ್ಲಿ 253, ಶಿವಮೊಗ್ಗ 282, ತೀರ್ಥಹಳ್ಳಿ 258, ಶಿಕಾರಿಪುರ 232, ಸೊರಬ 239 ಮತ್ತು ಸಾಗರ 264 ಸೇರಿ ಒಟ್ಟು 1775 ಮತಗಟ್ಟೆಗಳಿದ್ದು, ಪ್ರತಿ ಮತಗಟ್ಟೆಗೆ ಒಬ್ಬರಂತೆ 1775 ಮತಗಟ್ಟೆ ಅಧಿಕಾರಿ (ಬಿಎಲ್‍ಓ)ಗಳನ್ನು ನೇಮಿಸಲಾಗಿದೆ. ಶೇ 83.1 ರಷ್ಟು ಮತದಾರರ ಗುರುತಿನ ಚೀಟಿಗೆ ಆಧಾರ್ ಲಿಂಕ್ ಆಗಿದೆ.

ರಾಜಕೀಯ ಪಕ್ಷಗಳಿಗೆ ಸಂಬಂಧಿಸಿದಂತೆ ಬಿಜೆಪಿಯ ಒಟ್ಟು 1773, ರಾಷ್ಟ್ರೀಯ ಕಾಂಗ್ರೆಸ್ ಪಕ್ಷ 1632 ಮತ್ತು ಜೆಡಿಎಸ್ ಪಕ್ಷದವರು 1270 ಮತಗಟ್ಟೆ ಏಜೆಂಟ್ (ಬಿಎಲ್‍ಎ) ಗಳನ್ನು ನೇಮಿಸಿದ್ದಾರೆ. ಜೆಡಿಎಸ್ ನವರು ಭದ್ರಾವತಿ ಮತ್ತು ತೀರ್ಥಹಳ್ಳಿಯಲ್ಲಿ ಬಿಎಲ್‍ಎಗಳನ್ನು ನೇಮಿಸಬೇಕಿದೆ ಎಂದರು.
ರಾಜಕೀಯ ಪಕ್ಷದ ಮುಖಂಡರು ಮತದಾರರ ಪಟ್ಟಿಗೆ ಹೊಸ ಸೇರ್ಪಡೆಗೆ ಹೆಚ್ಚಿನ ಗಮನ ಹರಿಸುವಂತೆ ಕೋರಿದರು. ಸಭೆಯಲ್ಲಿ ಕಾಂಗ್ರೆಸ್ ಪಕ್ಷದ ಚಂದನ್ ಎಂ., ಬಿಜೆಪಿಯ ಪ್ರಭಾಕರ್ ಎಂ, ವಿನ್ಸೆಂಟ್ ರೋಡ್ರಿಗಸ್, ಜೆಡಿಎಸ್ ನ ಎಚ್.ತ್ಯಾಗರಾಜ್, ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ನಾಗೇಂದ್ರ ಎಫ್ ಹೊನ್ನಳ್ಳಿ, ಚುನಾವಣಾ ತಹಶೀಲ್ದಾರ್ ಮಂಜುಳಾ ಭಜಂತ್ರಿ ಹಾಜರಿದ್ದರು.

ಜೆಡಿಎಸ್: ಶಿವಮೊಗ್ಗ ಗ್ರಾಮೀಣ, ಭದ್ರಾವತಿಗೆ ‘ಶಾರದಾ’ತ್ರಯರು

ಮುಂಬರುವ ವಿಧಾನಸಭೆ ಚುನಾವಣೆಗೆ ಜಿಲ್ಲೆಯಲ್ಲಿ ಶಿವಮೊಗ್ಗ ಗ್ರಾಮಾಂತರ, ಭದ್ರಾವತಿ ಹಾಗೂ ತೀರ್ಥಹಳ್ಳಿ ಕ್ಷೇತ್ರಗಳಿಗೆ ಪಕ್ಷದ ಅಭ್ಯರ್ಥಿಯನ್ನು ಜೆಡಿಎಸ್ ಅಂತಿಮಗೊಳಿಸಿದೆ.

ಪಕ್ಷದ ನಾಯಕ ಎಚ್.ಡಿ. ಕುಮಾರಸ್ವಾಮಿ ಸೋಮವಾರ ಬೆಂಗಳೂರಿನಲ್ಲಿ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದಾರೆ.

ಶಿವಮೊಗ್ಗ ಗ್ರಾಮೀಣ ಕ್ಷೇತ್ರಕ್ಕೆ ಮಾಜಿ ಶಾಸಕಿ ಶಾರದಾ ಪೂರ‍್ಯಾನಾಯ್ಕ, ಭದ್ರಾವತಿಗೆ ಶಾರದಾ ಅಪ್ಪಾಜಿಗೌಡ ಹಾಗೂ ತೀರ್ಥಹಳ್ಳಿ ಕ್ಷೇತ್ರಕ್ಕೆ ರಾಜಾರಾಮ್ ಹೆಸರು ಅಂತಿಮಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.