ಜನವರಿ ಅಂತ್ಯಕ್ಕೆ ಮಲೆನಾಡಿನಲ್ಲಿ ಮುಗಿದ ಅಡಿಕೆ ಕೊಯ್ಲು
ಎಲೆಚುಕ್ಕಿ, ಕೊಳೆ ರೋಗದಿಂದ ಅಡಿಕೆ ಬೆಳೆ ಇಳುವರಿ ಕುಂಠಿತ
ಬೇಡಿಕೆಯಷ್ಟು ಆವಕ ಆಗದಿರುವುದೇ ಬೆಲೆ ಏರಿಕೆಗೆ ಕಾರಣ
ಶಿವಮೊಗ್ಗ: ಅಡಿಕೆ ಬೆಲೆ ಗಗನಮುಖಿ ಆಗಿದೆ. ಶಿವಮೊಗ್ಗ ಎಪಿಎಂಸಿಯಲ್ಲಿ ಸೋಮವಾರ ಸರಕು (ಹಸ) ಅಡಿಕೆ ಕ್ವಿಂಟಲ್ಗೆ ಗರಿಷ್ಠ ₹92,740, ಬೆಟ್ಟೆ ಕ್ವಿಂಟಲ್ಗೆ ₹59,299 ಹಾಗೂ ರಾಶಿ ಅಡಿಕೆ ₹59,199ಕ್ಕೆ ಮಾರಾಟವಾಗಿದೆ. ಆದರೆ ಮಲೆನಾಡಿನಲ್ಲಿ ಜನವರಿ ಅಂತ್ಯಕ್ಕೆ ಅಡಿಕೆ ಕೊಯ್ಲು ಮುಗಿದಿದೆ. ಹೀಗಾಗಿ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯ ಲಾಭ ಪೂರ್ಣ ಪ್ರಮಾಣದಲ್ಲಿ ಬೆಳೆಗಾರರಿಗೆ ಸಿಗುವುದಿಲ್ಲ.
ಸಣ್ಣ ಹಾಗೂ ಮಧ್ಯಮ ರೈತರಲ್ಲಿ ಬಹಳಷ್ಟು ಮಂದಿ ಈಗಾಗಲೇ ಅಡಿಕೆ ಮಾರಾಟ ಮಾಡಿದ್ದಾರೆ. ಕೆಲವರು ಮಾತ್ರ ಸಂಗ್ರಹಿಸಿಟ್ಟಿದ್ದಾರೆ. ಕಳೆದ ಹಂಗಾಮಿನಲ್ಲಿ ಅಡಿಕೆ ಖರೀದಿಸಿ ಸಂಗ್ರಹಿಸಿ ಇಟ್ಟುಕೊಂಡಿರುವ ವ್ಯಾಪಾರಸ್ಥರು ಬೆಲೆ ಏರಿಕೆಯ ಲಾಭ ಪಡೆಯುತ್ತಿದ್ದಾರೆ.
ಸೋಮವಾರದಂದು ಶಿವಮೊಗ್ಗ ಎಪಿಎಂಸಿಗೆ 50 ಕ್ವಿಂಟಲ್ ಸರಕು ಅಡಿಕೆ, 2,722 ಕ್ವಿಂಟಲ್ ರಾಶಿ ಅಡಿಕೆ, 687 ಕ್ವಿಂಟಲ್ ಗೊರಬಲು ಹಾಗೂ 151 ಕ್ವಿಂಟಲ್ ಬೆಟ್ಟೆ ಅಡಿಕೆ ಆವಕವಾಗಿದೆ.
ಬೇಡಿಕೆಯಷ್ಟು ಪೂರೈಕೆ ಇಲ್ಲ:
‘ಮಲೆನಾಡು ಭಾಗದಲ್ಲಿ ಸರಕು, ಬೆಟ್ಟೆ ಅಡಿಕೆ ಜಾಸ್ತಿ. ಈ ಬಾರಿ ಎಲೆಚುಕ್ಕಿ ರೋಗ ಹಾಗೂ ಕೊಳೆ ರೋಗದಿಂದ ಅಡಿಕೆ ಬೆಳೆಯ ಇಳುವರಿ ಕಡಿಮೆ ಆಗಿದೆ. ಕಳೆದ ವರ್ಷ ಮ್ಯಾಮ್ಕೋಸ್ನಿಂದ 3.03 ಲಕ್ಷ ಕ್ವಿಂಟಲ್ ಅಡಿಕೆ ಖರೀದಿಸಿದ್ದೆವು. ಈ ಬಾರಿ ಅಡಿಕೆ ಆವಕದ ಪ್ರಮಾಣ ಹಿಂದಿನ ವರ್ಷಕ್ಕೆ ಹೋಲಿಸಿದರೆ 45,000 ಕ್ವಿಂಟಲ್ನಷ್ಟು ಕಡಿಮೆ ಆಗಿದೆ. ಮಾರುಕಟ್ಟೆಯಲ್ಲಿ ಬೇಡಿಕೆಯಷ್ಟು ಆವಕ ಆಗದಿರುವುದೇ ಬೆಲೆ ಏರಿಕೆಗೆ ಕಾರಣ’ ಎಂದು ಶಿವಮೊಗ್ಗದ ಮಲೆನಾಡು ಅಡಿಕೆ ಮಾರಾಟದ ಸಹಕಾರ ಸಂಘದ (ಮ್ಯಾಮ್ಕೋಸ್) ವ್ಯವಸ್ಥಾಪಕ ನಿರ್ದೇಶಕ ಶ್ರೀಕಾಂತ ಬರುವಾ ಹೇಳುತ್ತಾರೆ.
ಮ್ಯಾಮ್ಕೋಸ್ ಸಂಸ್ಥೆ ಶಿವಮೊಗ್ಗ, ಚಿಕ್ಕಮಗಳೂರು ಹಾಗೂ ದಾವಣಗೆರೆ ಜಿಲ್ಲೆಯ ನ್ಯಾಮತಿ, ಚನ್ನಗಿರಿ, ಹೊನ್ನಾಳಿ ತಾಲ್ಲೂಕುಗಳ ವ್ಯಾಪ್ತಿಯ ಬೆಳೆಗಾರರನ್ನು ಒಳಗೊಂಡಿದೆ.
ಬರ್ಮಾ ಭೂತಾನ್ ದೇಶಗಳಿಂದ ಭಾರತಕ್ಕೆ ಅಡಿಕೆ ಕಳ್ಳಸಾಗಣೆ ಆಗುತ್ತಿದೆ. ಅದಕ್ಕೆ ಸಂಪೂರ್ಣ ಕಡಿವಾಣ ಹಾಕಿದರೆ ಮಾರುಕಟ್ಟೆಯಲ್ಲಿ ಬೆಲೆ ಇನ್ನೂ ಏರಿಕೆಯಾಗಲಿದೆರಮೇಶ್ ಹೆಗ್ಡೆ, ಶಿವಮೊಗ್ಗ ಜಿಲ್ಲಾ ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.