ADVERTISEMENT

ಷರೀಫಾ, ಬಾಬು, ತಲ್ವಾಡಿ ಪ್ರಶಸ್ತಿಗೆ ಆಯ್ಕೆ

​ಪ್ರಜಾವಾಣಿ ವಾರ್ತೆ
Published 8 ಜನವರಿ 2020, 16:32 IST
Last Updated 8 ಜನವರಿ 2020, 16:32 IST
ಡಾ.ಕೆ.ಷರೀಫಾ.
ಡಾ.ಕೆ.ಷರೀಫಾ.   

ಸಾಗರ: ಕವಯಿತ್ರಿ ಡಾ.ಕೆ. ಷರೀಫಾ, ಲೇಖಕ ಬಾಬು ಶಿವಪೂಜಾರಿ, ಸಂಶೋಧಕ ಡಾ.ಬಿ.ಎಸ್. ತಲ್ವಾಡಿ ಅವರಿಗೆ ಇಲ್ಲಿನ ಪರಸ್ಪರ ಸಾಹಿತ್ಯ ವೇದಿಕೆ ನೀಡುವ ರಾಜ್ಯಮಟ್ಟದ ಪ್ರಶಸ್ತಿ ಘೋಷಿಸಲಾಗಿದೆ.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಪರಸ್ಪರ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ನಾ.ಡಿಸೋಜ, ಪ್ರಶಸ್ತಿಯು ತಲಾ ₹ 10 ಸಾವಿರ ನಗದನ್ನು ಒಳಗೊಂಡಿದೆ. ಜ. 12ರಂದು ಬೆಳಿಗ್ಗೆ 10.30ಕ್ಕೆ ಇಲ್ಲಿನ ವರದಶ್ರೀ ಸಭಾಂಗಣದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಬಾಬು ಶಿವಪೂಜಾರಿ ಅವರಿಗೆ ಜಾನಪದ ವಿದ್ವಾಂಸ ಎನ್. ಹುಚ್ಚಪ್ಪ ಮಾಸ್ತರ್ ಪ್ರಶಸ್ತಿ, ಡಾ.ಕೆ.ಷರೀಫಾ ಅವರಿಗೆ ಶಿಶುನಾಳ ಷರೀಫಾ ಸಾಹೇಬ ಭಾವೈಕ್ಯ ಪ್ರಶಸ್ತಿ, ಡಾ.ಬಿ.ಎಸ್. ತಲ್ವಾಡಿ ಅವರಿಗೆ ರೆವರೆಂಡ್ ಕಿಟೆಲ್ ಸಾಹೇಬ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದು ತಿಳಿಸಿದರು.

ADVERTISEMENT

ಪರಸ್ಪರ ಸಾಹಿತ್ಯ ವೇದಿಕೆಯ ಅಧ್ಯಕ್ಷ ಡಾ.ಸರ್ಫ್ರಾಜ್ ಚಂದ್ರಗುತ್ತಿ, 2004ರಲ್ಲಿ ಆರಂಭಗೊಂಡ ವೇದಿಕೆ ಪ್ರತಿವರ್ಷ ಕನ್ನಡ ಭಾಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಪುರಸ್ಕರಿಸುತ್ತಿದೆ. ನಾಡಿನ ಹತ್ತು ಹಲವು ಸಾಹಿತಿ, ವಿದ್ವಾಂಸರನ್ನು ಇಲ್ಲಿಗೆ ಕರೆಸಿ ಉಪನ್ಯಾಸ ಆಯೋಜಿಸಿದೆ. ಈ ವರ್ಷದಿಂದ ಮೂರು ಸಾಧಕರಿಗೆ ಪ್ರಶಸ್ತಿ ನೀಡುವ ಕೆಲಸಕ್ಕೆ ವೇದಿಕೆ ಮುಂದಾಗಿದೆ ಎಂದರು.

ಪರಸ್ಪರ ಸಾಹಿತ್ಯ ವೇದಿಕೆಯ ಗೌರವಾಧ್ಯಕ್ಷ ಡಾ.ಜಿ.ಎಸ್. ಭಟ್, ಎಸ್.ಎಂ. ಗಣಪತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.