
ಭದ್ರಾವತಿ: ಹಳೇ ನಗರದ ನಿರ್ಮಲ ಆಸ್ಪತ್ರೆಯ ಧರ್ಮ ಭಗಿನಿಯರಿಂದ ಅಂಗವಿಕಲರೊಂದಿಗೆ ಕ್ರಿಸ್ಮಸ್ ಹಬ್ಬವನ್ನು ವಿಶೇಷ ರೀತಿಯಲ್ಲಿ ಆಚರಿಸಲಾಯಿತು.
ಹಬ್ಬದ ಪ್ರಯುಕ್ತ ಡಿ. 1ರಿಂದಲೇ ವಿವಿಧ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಅವರು
ಭಾನುವಾರ ನಿರ್ಮಲ ಆಸ್ಪತ್ರೆಯ ಆವರಣದಲ್ಲಿ ತಾಲ್ಲೂಕಿನ ವಿವಿಧ ಭಾಗಗಳಿಂದ ಆಗಮಿಸಿದ್ದ ಅಂಗವಿಕಲರಿಗೆ ಮತ್ತು ಅವರ ಪೋಷಕರಿಗೆ ಕ್ರಿಸ್ಮಸ್ ಹಬ್ಬದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
‘ಕ್ರಿಸ್ಮಸ್’ ಎಂದರೆ ಯೇಸುಕ್ರಿಸ್ತರು ದೀನರಾಗಿ ಗೋದಲಿಯಲ್ಲಿ ಜನಿಸಿ ಪ್ರೀತಿ, ಏಕತೆ, ದೀನತೆಯನ್ನು ಜಗತ್ತಿಗೆ ಸಾರಿದರು.
‘ಕ್ರಿಸ್ಮಸ್ ಆಚರಿಸುವವರು ಕೇವಲ ಸಂಭ್ರಮಿಸಿದರೆ ಸಾಲದು, ಇತರರ ಸೇವೆಯಲ್ಲಿ ಮುಂದಾಗಬೇಕು’ ಎಂದು ನಿರ್ಮಲ ಆಸ್ಪತ್ರೆಯ ಮ್ಯಾನೇಜರ್ ಸಿಸ್ಟರ್ ವಿಲ್ಮಾ ಕ್ರಿಸ್ಮಸ್ ಸಂದೇಶ ನೀಡಿದರು.
ನಿರ್ಮಲ ನರ್ಸಿಂಗ್ ಕಾಲೇಜ್ ವಿದ್ಯಾರ್ಥಿನಿಯರಿಂದ ನೃತ್ಯ, ನಿರ್ಮಲ ಆಸ್ಪತ್ರೆಯ ಸಿಬ್ಬಂದಿಯಿಂದ ಕ್ಯಾರಲ್ಸ್ ಗಾಯನ ನಡೆದವು.
ಅಂಗವಿಕಲರಿಗೆ ಕ್ರಿಸ್ಮಸ್ ಹಬ್ಬದ ಹುಡುಗೊರೆಗಳನ್ನು ನೀಡಿ, ಸಾಂಟಾ ಕ್ಲಾಸ್ ವೇಷಧಾರಿಯೊಂದಿಗೆ ನೃತ್ಯ ನಡೆಸಿ, ಧರ್ಮ ಭಗಿನಿಯರೊಂದಿಗೆ ಹಬ್ಬದ ಭೋಜನ ಸವಿಯಲಾಯಿತು.
ಅಂಗವಿಕಲರು ಮತ್ತು ಅವರ ಪೋಷಕರು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡು ಭಾವನಾತ್ಮಕವಾಗಿ ಹರ್ಷಿಸಿ, ತಮ್ಮ ಸಂತೋಷವನ್ನು ಹಂಚಿಕೊಂಡರು.
ಧರ್ಮಭಗಿನಿಯರು, ಸಿಬ್ಬಂದಿ, ನರ್ಸಿಂಗ್ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.