ADVERTISEMENT

ಹಂಚಿನ ಸಿದ್ದಾಪುರ ಹಲ್ಲೆ ಪ್ರಕರಣ: 10 ಅಪರಾಧಿಗಳಿಗೆ ಒಂದು ವರ್ಷ ಜೈಲು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 2 ಮಾರ್ಚ್ 2026, 3:14 IST
Last Updated 2 ಮಾರ್ಚ್ 2026, 3:14 IST
<div class="paragraphs"><p>ಜೈಲು (ಪ್ರಾತಿನಿಧಿಕ ಚಿತ್ರ)</p></div>

ಜೈಲು (ಪ್ರಾತಿನಿಧಿಕ ಚಿತ್ರ)

   

ಹೊಳೆಹೊನ್ನೂರು: ಆರು ವರ್ಷಗಳ ಹಿಂದೆ ಸಮೀಪದ ಹಂಚಿನ ಸಿದ್ದಾಪುರ ಗ್ರಾಮದಲ್ಲಿ ಮಹಿಳೆಯನ್ನು ಕಿಚಾಯಿಸಿ, ಅವರ ಕುಟುಂಬದವರ ಮೇಲೆ ಹಲ್ಲೆ ನಡೆಸಿದ್ದ ಪ್ರಕರಣದ 10 ಅಪರಾಧಿಗಳಿಗೆ ಭದ್ರಾವತಿಯ ಒಂದನೇ ಸೆಷನ್ಸ್‌ ಹಾಗೂ ಜೆಎಂಎಫ್‌ಸಿ ನ್ಯಾಯಾಲಯ ಒಂದು ವರ್ಷ ಜೈಲು ಶಿಕ್ಷೆ ಹಾಗೂ ₹ 8,000 ದಂಡ ಮತ್ತು ಗಾಯಾಳುಗಳಿಗೆ ₹80,000 ಪರಿಹಾರ ನೀಡುವಂತೆ ಆದೇಶಿಸಿದೆ. 

ಗ್ರಾಮದ ರುದ್ರೇಶ್, ವಿಶ್ವ, ಶಿವು, ಗಿರೀಶ್, ಶಶಿಧರ್, ಮಧು, ಶೇಖರಪ್ಪ, ರಾಜಪ್ಪ, ಮಲ್ಲಿಕಾ, ಹರೀಶ ಶಿಕ್ಷೆಗೊಳಗಾದವರು.   

ADVERTISEMENT

ಗ್ರಾಮದ ಸಾಕ್ಷಿ ಅಭಿಲಾಷ್ ಅವರು ಶಿವರಾತ್ರಿ ಹಬ್ಬದ ಅಂಗವಾಗಿ ದೇವಸ್ಥಾನಕ್ಕೆ ಹೋದಾಗ ರುದ್ರೇಶ್ ಹಾಗೂ ಇತರರು ಅವರನ್ನು ಕಿಚಾಯಿಸಿ, ಅವಹೇಳನ ಮಾಡಿದ್ದರು. 

ಗುಂಪು ಕಟ್ಟಿಕೊಂಡು ಸಾಕ್ಷಿ ಅವರ ಮನೆಗೆ ನುಗ್ಗಿ ಕುಟುಂಬದವರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಿದ್ದರು. ಸಾಕ್ಷಿ ಅವರ ತಾಯಿ, ಅಜ್ಜಿ ಮತ್ತು ಅಕ್ಕನ ಮೈ ಕೈ ಮುಟ್ಟಿ ಎಳೆದಾಡಿದ್ದರು. ಓಮ್ನಿಯ ಹಿಂಭಾಗದ ಗ್ಲಾಸ್ ಜಖಂಗೊಳಿಸಿ, ಮನೆಯ ಹೊರಗೆ ಇದ್ದ ಸಿ.ಸಿ.ಟಿ.ವಿ ಕ್ಯಾಮೆರಾವನ್ನೂ ಕಿತ್ತು ಹಾಕಿದ್ದರು.

ಗಲಾಟೆ ಬಿಡಿಸಲು ಹೋದ ಪಕ್ಕದ ಮನೆಯ ರಾಜಪ್ಪ ಅವರ ಮೇಲೂ ಹಲ್ಲೆ ನಡೆಸಿ ತೀವ್ರವಾಗಿ ಗಾಯಗೊಳಿಸಿದ್ದರು. ಈ ಬಗ್ಗೆ ಪಟ್ಟಣದ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಎಎಸ್‍ಐ ಕೃಷ್ಣ ನಾಯ್ಕ ಪ್ರಕರಣದ ತನಿಖೆ ನಡೆಸಿ ದೋಷಾರೋಪಪಟ್ಟಿ ಸಲ್ಲಿಸಿದ್ದರು. ಸರ್ಕಾರದ ಪರವಾಗಿ ವಕೀಲ ತಿಪ್ಪೇಶ್ ರಾವ್ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.