ಭದ್ರಾವತಿ: ‘ಸಮಾಜದಲ್ಲಿ ಶೋಷಣೆ, ಅನ್ಯಾಯಕ್ಕೆ ಒಳಗಾದವರ ಪರವಾಗಿ ಹೋರಾಟ ರೂಪಿಸುವ ಅನಿವಾರ್ಯತೆ ಇದೆ’ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ನಗರದಲ್ಲಿ ಭಾನುವಾರ ನೂತನವಾಗಿ ಅಸ್ತಿತ್ವಕ್ಕೆ ಬಂದ ಕರ್ನಾಟಕ ದಲಿತ ಸಮನ್ವಯ ಸಮಿತಿಯ ಕೇಂದ್ರ ಕಾರ್ಯಾಲಯದ ಉದ್ಘಾಟನೆ, ರಾಜ್ಯ ಪದಾಧಿಕಾರಿಗಳ ಪದಗ್ರಹಣ ಮತ್ತು ನಾಮಫಲಕ ಉದ್ಘಾಟಿಸಿ ಮಾತನಾಡಿದರು.
‘ಸಮಾಜದಲ್ಲಿ ದಲಿತ ಸಮುದಾಯದವರು ಮಾತ್ರ ಶೋಷಣೆಗೆ ಒಳಗಾಗಿಲ್ಲ. ಎಲ್ಲಾ ಧರ್ಮ, ಜಾತಿ, ಸಮುದಾಯಗಳಲ್ಲೂ ಶೋಷಣೆ, ಅನ್ಯಾಯಕ್ಕೆ ಒಳಗಾದವರು ಇದ್ದಾರೆ. ಅವರ ಪರವಾಗಿ ಹೋರಾಟ ರೂಪಿಸುವ ಮೂಲಕ ಅವರಿಗೆ ನ್ಯಾಯ ಕಲ್ಪಿಸಿ ಕೊಡಬೇಕಾಗಿದೆ’ ಎಂದರು.
‘ಈ ಭೂಮಿ ಮೇಲೆ ಇರುವುದು ಒಂದೇ ಧರ್ಮ. ಮಾನವರಾದ ನಾವೆಲ್ಲರೂ ಒಂದೇ. ಆದರೆ, ಸಮಾಜದಲ್ಲಿ ಧರ್ಮ, ಜಾತಿ ಮತ್ತು ಸಮುದಾಯಗಳ ನಡುವೆ ವಿಷಬೀಜ ಬಿತ್ತುವ ಮೂಲಕ ಸಂಘರ್ಷ ಉಂಟು ಮಾಡಲಾಗುತ್ತಿದೆ. ಇದರ ವಿರುದ್ಧ ಹೋರಾಟ ನಡೆಸುವುದು ಅಗತ್ಯವಾಗಿದೆ’ ಎಂದು ನಗರಸಭೆ ಸದಸ್ಯ ಬಿ.ಕೆ. ಮೋಹನ್ ಹೇಳಿದರು.
ಶಿಕ್ಷಕ, ಜಾನಪದ ಕಲಾವಿದ ಎಂ.ಆರ್. ರೇವಣಪ್ಪ ಅವರಿಗೆ ‘ಕರ್ನಾಟಕ ಜಾನಪದ ರತ್ನ’ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಡಿಎಸ್ಎಸ್ ಸಂಸ್ಥಾಪಕ ಸದಸ್ಯ, ನಿವೃತ್ತ ಮುಖ್ಯ ಶಿಕ್ಷಕ ಡಿ.ಕರಿಯಪ್ಪ, ಶಿಕ್ಷಕರಾದ ಎಚ್.ಎನ್. ನರಸಿಂಹಮೂರ್ತಿ, ಸಿ. ಚನ್ನಪ್ಪ, ರಾಧಾಬಾಯಿ ಹಾಜ್ಯನಾಯ್ಕ, ಶಾರದ ಪ್ರೇಮ್ ಕುಮಾರ್ ಮತ್ತು ಎಸ್. ಭಾರತಿ ಅವರನ್ನು ಸನ್ಮಾನಿಸಲಾಯಿತು.
ನಗರಸಭೆ ಉಪಾಧ್ಯಕ್ಷ ಎಂ.ಮಣಿ ಎಎನ್ಎಸ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಭಾರತಿ ಗೋವಿಂದಸ್ವಾಮಿ, ಗಂಗಾಮತಸ್ಥ ಸಮುದಾಯದ ಪ್ರಧಾನ ಕಾರ್ಯದರ್ಶಿ ಬಿ.ಆರ್.ಯಲ್ಲಪ್ಪ, ಶಿಕ್ಷಕರ ಸಂಘದ ಮುಖಂಡ ಬಸವಂತರಾವ್ ದಾಳೆ, ಕೆಡಿಪಿ ಸದಸ್ಯ ರಾಜೇಂದ್ರ ಉಪಸ್ಥಿತರಿದ್ದರು.
ಸಮನ್ವಯ ಸಮಿತಿ ರಾಜ್ಯ ಘಟಕದ ಅಧ್ಯಕ್ಷ ವಿ.ವಿನೋದ್ ಅಧ್ಯಕ್ಷತೆ ವಹಿಸಿದ್ದರು. ದಲಿತ ನೌಕರರ ಮುಖಂಡ ಎನ್. ಮಂಜುನಾಥ್ ಪ್ರಾಸ್ತಾವಿಕ ನುಡಿದರು. ಶಿಕ್ಷಕರಾದ ಯು. ಮಹಾದೇವಪ್ಪ ಸ್ವಾಗತಿಸಿ, ದಯಾನಂದ್ ಸಾಗರ್ ನಿರೂಪಿಸಿ, ದಲಿತ ಮುಖಂಡ ಸುನಿಲ್ ಕೋರಿ ವಂದಿಸಿದರು.
ಬಿ.ಎಚ್.ರಸ್ತೆ, ಅಂಡರ್ ಬ್ರಿಡ್ಜ್ ಬಳಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಡೊಳ್ಳು ಕುಣಿತ, ಸುಗ್ಗಿ ಕುಣಿತ ಮತ್ತು ಕೋಲಾಟದೊಂದಿಗೆ ಮೆರವಣಿಗೆ ನಡೆಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.