ADVERTISEMENT

‘ನೊಂದವರಿಗೂ ನ್ಯಾಯ’ ಭಾರತೀಯ ನ್ಯಾಯ ಸಂಹಿತೆ ಆಶಯ: ನ್ಯಾ. ವಿ.ಶ್ರೀಶಾನಂದ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ಡಿಸೆಂಬರ್ 2025, 3:08 IST
Last Updated 26 ಡಿಸೆಂಬರ್ 2025, 3:08 IST
ಶಿವಮೊಗ್ಗದಲ್ಲಿ ಶ್ರೀಗಂಧ ಸಂಸ್ಥೆ ಹಾಗೂ ಜಿಲ್ಲಾ ವಕೀಲರ ಸಂಘದಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾಯಾಧೀಶ ವಿ.ಶ್ರೀಶಾನಂದ ಉದ್ಘಾಟಿಸಿದರು
ಶಿವಮೊಗ್ಗದಲ್ಲಿ ಶ್ರೀಗಂಧ ಸಂಸ್ಥೆ ಹಾಗೂ ಜಿಲ್ಲಾ ವಕೀಲರ ಸಂಘದಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಹೈಕೋರ್ಟ್ ನ್ಯಾಯಾಧೀಶ ವಿ.ಶ್ರೀಶಾನಂದ ಉದ್ಘಾಟಿಸಿದರು   

ಶಿವಮೊಗ್ಗ: ಇಂಡಿಯನ್‌ ಪಿನಲ್‌ ಕೋಡ್‌ (ಐಪಿಸಿ–ಸಿಆರ್‌ಪಿಸಿ) ಬದಲಾಗಿ ಕೇಂದ್ರ ಸರ್ಕಾರ ಈಗ ರೂಪಿಸಿರುವ ಭಾರತೀಯ ನ್ಯಾಯ ಸಂಹಿತೆಯಲ್ಲಿ (ಬಿಎನ್‌ಎಸ್‌) ‘ನೊಂದವರಿಗೂ ನ್ಯಾಯ’ ಎಂಬ ಪರಿಕಲ್ಪನೆ ಹೊಸದಾಗಿ ಮಾಡಿದ್ದಾರೆ. ಇದಕ್ಕೆ ‘ರಾಜಾ ಪ್ರಕೃತಿ ರಂಜನಾಥ್’ ಎಂಬ ಧ್ಯೇಯದಡಿ ಸ್ಮೃತಿಯ ಆಧಾರವಿದೆ ಎಂದು ಹೈಕೋರ್ಟ್ ನ್ಯಾಯಾಧೀಶ ವಿ.ಶ್ರೀಶಾನಂದ ಹೇಳಿದರು.

ಇಲ್ಲಿನ ಶ್ರೀಗಂಧ ಸಂಸ್ಥೆ ಹಾಗೂ ಜಿಲ್ಲಾ ವಕೀಲರ ಸಂಘದಿಂದ ಗುರುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಪ್ರಾಚೀನ ಭಾರತದ ನ್ಯಾಯಾಂಗ ವ್ಯವಸ್ಥೆ’ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.

ಭಾರತೀಯರನ್ನು ಗುಲಾಮರನ್ನಾಗಿ ಇಟ್ಟುಕೊಂಡು ಬೆದರಿಸಿ ರಾಜ್ಯಭಾರ ಮಾಡಲು ಐಪಿಸಿ ಹಾಗೂ ಸಿಆರ್‌ಪಿಸಿಯನ್ನು ಬ್ರಿಟಿಷರು ರೂಪಿಸಿದ್ದರು. ಅಲ್ಲಿ ಅಪರಾಧ ಕೃತ್ಯ ನಡೆದಾಗ ಅಪರಾಧಿಗೆ ಶಿಕ್ಷೆ ಕಲ್ಪಿಸುವತ್ತ ಮಾತ್ರ ಗಮನ ಕೊಟ್ಟಿದ್ದರು. ನೊಂದವರನ್ನು ಮರೆತು ಬಿಡಲಾಗುತ್ತಿತ್ತು.

ADVERTISEMENT

‘ದುಡಿಯುತ್ತಿದ್ದ ಗಂಡ ಕೊಲೆ ಆಗಿ ತೀರಿ ಹೋದರೆ ಆತನನ್ನು ನಂಬಿದ್ದ ಪತ್ನಿ ಹಾಗೂ ಮಕ್ಕಳ ರಕ್ಷಣೆ  ಐಪಿಸಿ ಹಾಗೂ ಸಿಆರ್‌ಪಿಸಿಯಲ್ಲಿ ಆದ್ಯತೆ ಆಗಿರಲಿಲ್ಲ. ಮನೆಯ ಯಜಮಾನ ಸತ್ತರೆ ಮಕ್ಕಳು ಅನಾಥರಾಗಿ, ಪತ್ನಿ ವಿಧವೆಯಾಗುತ್ತಿದ್ದಳು. ಅವರಿಗೆ ರಕ್ಷಣೆ ಕಲ್ಪಿಸುವುದು ಬ್ರಿಟಿಷರಿಗೆ ಬೇಕಿರಲಿಲ್ಲ. ಸಾಯಲಿ ಬಿಡು ಎಂಬ ಧೋರಣೆ ಅವರಲ್ಲಿತ್ತು. ಅದು ಐಪಿಸಿ, ಸಿಆರ್‌ಪಿಸಿ ಕೋಡ್‌ನಲ್ಲಿ ವ್ಯಕ್ತವಾಗಿತ್ತು. ಅದನ್ನೇ ಇಲ್ಲಿಯವರೆಗೂ ಇಟ್ಟುಕೊಂದು ಬಂದಿದ್ದೆವು’ ಎಂದರು.

ಸಂಸ್ಕೃತ ವಾಕ್ಯ ‘ರಾಜಾ ಪ್ರಕೃತಿ ರಂಜನಾಥ್’ ಅಂದರೆ ಪ್ರಜೆಗಳನ್ನು ಸಂತೋಷವಾಗಿ ಶಾಂತಿ–ಸುವ್ಯವಸ್ಥೆಯಿಂದ ಕಾಪಾಡಬೇಕಿರುವುದೇ ರಾಜಧರ್ಮ. ಸ್ಮತಿಯಲ್ಲಿನ ಅದರ ಆಶಯದಂತೆಯೇ ಬಿಎನ್‌ಎಸ್ ಅಡಿ ನೊಂದವರಿಗೆ ಪರಿಹಾರ ಕಲ್ಪಿಸಿ ರಕ್ಷಣೆ ನೀಡಲು ಅವಕಾಶ ಮಾಡಿಕೊಡಲಾಗಿದೆ ಎಂದು ಹೇಳಿದರು.

ನ್ಯಾಯಾಂಗ ವ್ಯವಸ್ಥೆಯಲ್ಲಿ ವಿಳಂಬ, ಅಪ್ರಾಮಾಣಿಕ ಹಾಗೂ ಜನರ ಆಶಯಕ್ಕೆ ವಿರುದ್ಧವಾದ ತೀರ್ಪುಗಳು ಬರಬಹುದು. ಅದಕ್ಕೆ ನ್ಯಾಯಾಧೀಶರು ಒಬ್ಬರೇ ಕಾರಣಕರ್ತರಲ್ಲ. ಅದಕ್ಕೆ ಸಮಾಜ ಒಪ್ಪಿರುವ ಮೌಲ್ಯಗಳೂ ಕಾರಣವಾಗುತ್ತವೆ. ಅನ್ಯಾಯದ ವಿರುದ್ಧ ಹೋರಾಡದವರು ಅದನ್ನು ಕೋರ್ಟಿನ ಕಟಕಟೆಗೆ ತಂದು ತಾರ್ಕಿಕ ಅಂತ್ಯ ಕಾಣಿಸದವರು ಮಹಾಭಾರತದಲ್ಲಿ ಭೀಷ್ಮ, ದ್ರೋಣರಂತಾಗುತ್ತಾರೆ. ಅದು ಸರಿಯಲ್ಲ ಎಂದು ಕಿವಿಮಾತು ಹೇಳಿದರು. 

‘ಈ ದೇಶದ ಮೇಲೆ ಸಾಂಸ್ಕೃತಿಕ ಯುದ್ಧ ನಡೆಯುತ್ತಿದೆ. ದೇಶದ ಪ್ರಗತಿಯ ನಾಗಲೋಟವನ್ನು ಹಿಡಿದಿಟ್ಟುಕೊಳ್ಳಲು ನಮ್ಮ ಊಟ, ನೋಟ, ತಿಂಡಿ, ಜೀವನ ಶೈಲಿ, ನಡೆದುಕೊಳ್ಳುವ ರೀತಿ ಹೀಗೆ ಪ್ರತಿಯೊಂದರಲ್ಲಿ ಅನ್ಯ ದೇಶದವರು ಸಾಂಸ್ಕೃತಿಕ ಯುದ್ಧ ಮಾಡುತ್ತಿದ್ದಾರೆ. ಅದರ ಪರಿಣಾಮ ಸತ್ಯವೇ ನಮ್ಮ ತಾಯಿ ತಂದೆ ಎಂದು ಹೇಳಿಕೊಳ್ಳುವ ಗೋವಿನ ಹಾಡು ಬೇಕಾಗಿಲ್ಲ ಎಂಬ ಕಾಲದಲ್ಲಿ ಇಂದು ಇದ್ದೇವೆ. ಸತ್ಯ ಸತ್ತಿಲ್ಲ. ಅಲ್ಲಿಯೇ ಇದೆ. ಆದರೆ ಈ ಸಾಂಸ್ಕೃತಿಕ ಯುದ್ಧವನ್ನು ಗೆಲ್ಲಲು ಹಾಗೂ ಸತ್ಯವನ್ನು ಪೋಷಿಸಲು ನಮ್ಮ ಮಕ್ಕಳಲ್ಲಿ ಅಂತಃಕರಣ ಜಾಗೃತಿಯ ಜೊತೆಗೆ ಸರಿ–ತಪ್ಪಿನ ಮೌಲ್ಯಗಳ ಅರಿವು ಮೂಡಿಸಬೇಕಿದೆ ಎಂದು ಸಲಹೆ ನೀಡಿದರು.

ಸಮಾರಂಭದಲ್ಲಿ ಹಿರಿಯ ವೈದ್ಯ ಡಾ.‍ಪಿ.ನಾರಾಯಣ್ ಹಾಗೂ ಯೋಗಾಚಾರ್ಯ ಸಿ.ವಿ.ರುದ್ರಾರಾಧ್ಯ ಅವರನ್ನು ವಿ.ಶ್ರೀಶಾನಂದ ಸನ್ಮಾನಿಸಿದರು.

ಶ್ರೀಶಾನಂದ ಅವರ ಪತ್ನಿ ರಜನಿ, ಜಿಲ್ಲಾ ನ್ಯಾಯಾಧೀಶ ಮಂಜುನಾಥ, ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ರಾಘವೇಂದ್ರ ಸ್ವಾಮಿ, ಶ್ರೀಗಂಧ ಸಂಸ್ಥೆ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಸಂಚಾಲಕ ಉಮೇಶ್ ಆರಾಧ್ಯ, ಕೆ.ಈ.ಕಾಂತೇಶ್ ಸಮಾರಂಭದಲ್ಲಿ ಭಾಗಿಯಾಗಿದ್ದರು.

ನ್ಯಾಯದಾನದ ವೇಳೆ ಅನ್ಯಾಯ ನ್ಯಾಯವನ್ನು ಹಿಮ್ಮೆಟ್ಟಿಸಿದರೆ ಅದರ ಪಾಪಸಭಾ ಸದನರಾದ ನ್ಯಾಯಾಧೀಶರಿಗೂ ಬರುತ್ತದೆ. ಹೀಗಾಗಿ ಪ್ರತಿ ವಿಚಾರಣೆಯಲ್ಲೂ ನ್ಯಾಯ ಸತ್ಯ ಎತ್ತಿಹಿಡಿದು ನೊಂದವರ ಕಣ್ಣೀರು ಒರೆಸಿದರೆ ಆ ನ್ಯಾಯಾಧೀಶ ಭಗವಂತನ ಪ್ರೀತಿಗೆ ಪಾತ್ರರಾಗುತ್ತಾರೆ
ವಿ.ಶ್ರೀಶಾನಂದ ಹೈಕೋರ್ಟ್ ನ್ಯಾಯಾಧೀಶ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.