
ಸೊರಬ: ರೈತಪರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬಿಜೆಪಿ ರೈತ ಮೋರ್ಚಾ ಸೊರಬ ಮಂಡಲ ವತಿಯಿಂದ ಸೋಮವಾರ ‘ಜನಪರ ನೋಟ ರೈತಪರ ಹೋರಾಟ ಪ್ರತಿಭಟನೆ ನಡೆಯಿತು.
ಪಟ್ಟಣದ ರಂಗನಾಥ ಸ್ವಾಮಿ ದೇವಸ್ಥಾನದ ಮುಂಭಾಗದಿಂದ ಬಸ್ ನಿಲ್ದಾಣದ ವರೆಗೆ ಮೆರವಣಿಗೆ ನಡೆಸಿ, ಪುರಸಭೆ ಮುಂಭಾಗದಲ್ಲಿ ಮಾನವ ಸರಪಳಿ ರಚಿಸಿ ಪ್ರತಿಭಟಿಸಲಾಯಿತು.
‘ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣವಾಗಿ ಕುಸಿದಿದೆ. ರಾಜ್ಯ ಸರ್ಕಾರ ಕುರ್ಚಿ ಜಂಜಾಟದಲ್ಲಿ ಕಾಲಹರಣ ಮಾಡುತ್ತಿದೆ. ರೈತರ ಜ್ವಲಂತ ಸಮಸ್ಯೆಗಳನ್ನು ಕೇಳುವವರು ಇಲ್ಲವಾಗಿದ್ದಾರೆ. ಕಾಂಗ್ರೆಸ್ನವರು ಐದು ಗ್ಯಾರಂಟಿ ನೀಡಿದ್ದೇವೆ ಎಂದು ಜನರನ್ನು ನಂಬಿಸಿ, ಖಜಾನೆಯನ್ನು ಲೂಟಿ ಮಾಡುತ್ತಿದ್ದಾರೆ’ ಎಂದು ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ ಹರತಾಳು ಹಾಲಪ್ಪ ಆರೋಪಿಸಿದರು.
‘ಕಬ್ಬಿಗೆ ಬೆಂಬಲ ಬೆಲೆ ನೀಡುವಂತೆ ಬಿ.ವೈ.ವಿಜಯೇಂದ್ರ ನೇತೃತ್ವದಲ್ಲಿ ಒತ್ತಾಯಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಮೆಕ್ಕೆಜೋಳ ಬೆಳೆದ ರೈತರಿಗೆ ಸರಿಯಾದ ಬೆಂಬಲ ಬೆಲೆ ಸಿಗುತ್ತಿಲ್ಲ. ಕೇಂದ್ರ ಸರ್ಕಾರ ಕ್ವಿಂಟಲ್ಗೆ ₹2400 ನಿಗದಿ ಮಾಡಿದ್ದರೂ, ಮಾರುಕಟ್ಟೆಯಲ್ಲಿ ₹1700 ರಿಂದ ₹1800 ಇದೆ. ಅದನ್ನು ಬೆಂಬಲ ಬೆಲೆ ಯೋಜನೆಯಡಿ ಖರೀದಿ ಮಾಡಬೇಕು. ಮೆಕ್ಕೆಜೋಳ ಖರೀದಿ ಕೇಂದ್ರ ತೆರೆಯಬೇಕು’ ಎಂದು ಆಗ್ರಹಿಸಿದರು.
‘ಭತ್ತ, ಜೋಳದ ಬೆಲೆಗೆ ಕನಿಷ್ಠ ಬೆಂಬಲ ಬೆಲೆ ಸಿಗುತ್ತಿಲ್ಲ. ಸರ್ಕಾರದ ಕನಿಷ್ಠ ಬೆಂಬಲ ಬೆಲೆಯಡಿ ರೈತರಿಂದ ಧಾನ್ಯಗಳನ್ನು ಖರೀದಿಸಲು ಸೂಕ್ತ ವ್ಯವಸ್ಥೆ ಮತ್ತು ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು. ಕೃಷಿಗೆ ನಿಗದಿತ ಸಮಯದಲ್ಲಿ ಕನಿಷ್ಠ 7 ಗಂಟೆ ಮತ್ತು ಗುಣಮಟ್ಟದ ತ್ರಿ ಫೇಸ್ ವಿದ್ಯುತ್ ಪೂರೈಕೆ ಮಾಡಲು ಮೆಸ್ಕಾಂ ಇಲಾಖೆಗೆ ಸೂಚನೆ ನೀಡಬೇಕು. ಅಡಿಕೆಗೆ ಹಳದಿ ಎಲೆ ರೋಗ ಮತ್ತು ಕೋಳೆರೋಗ ಹಾಗೂ ಶುಂಠಿಗೆ ಎಲೆಚುಕ್ಕೆ, ಕೊಳೆರೋಗ ಹೆಚ್ಚಾಗಿದ್ದರಿಂದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೂಡಲೇ ಇದಕ್ಕೆ ಪರಿಹಾರ ಘೋಷಿಬೇಕು’ ಎಂದು ಮುಖಂಡ ಎಚ್.ಈ. ಜ್ಞಾನೇಶ್ ಒತ್ತಾಯಿಸಿದರು.
ಮಂಡಲ ಅಧ್ಯಕ್ಷ ಪ್ರಕಾಶ್ ಅಗಸನಹಳ್ಳಿ, ಜಿಲ್ಲಾ ರೈತ ಮೋರ್ಚಾ ಅಧ್ಯಕ್ಷ ಶಿದ್ದಲಿಂಗಪ್ಪ ನಿಂಬೆಗೊಂದಿ, ಪ್ರಮುಖರಾದ ಟಿ.ಡಿ ಮೇಘರಾಜ್, ಪಾಣಿರಾಜಪ್ಪ, ಜಾನಕಪ್ಪ ಒಡೆಯರ್, ಸುರೇಶ್ ಉದ್ರಿ, ಸತೀಶ್ ಹೊಸಳ್ಳಿ, ಪ್ರಭು ಬೆಣ್ಣಿಗೇರಿ, ತುಕಾರಾಮ ಜಡ್ಡಿಹಳ್ಳಿ, ಗೀತ ಮಲ್ಲಿಕಾರ್ಜುನ, ಸುಧಾ ಶಿವಪ್ರಸಾದ್, ಹೊಳೆಯಮ್ಮ, ವಿಜೇಂದ್ರ ತಲಗುಂದ, ಉಮೇಶ ಉಡುಗಣಿ, ಮಣ್ಣತ್ತಿ ಪರಮೇಶ್ವರ, ರಾಜು ಮಾವಿನಬಳ್ಳಿಕೊಪ್ಪ, ವಿನಯ ಶೆರ್ವಿ, ಸಂದೀಪ ಯಲವಳ್ಳಿ, ಆಶಿಕ್ ನಾಗಪ್ಪ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.