ಆರಗ ಜ್ಞಾನೇಂದ್ರ
ಹೊಸನಗರ: ‘ಶಿವಮೊಗ್ಗ ಜಿಲ್ಲಾಧಿಕಾರಿ ಕಚೇರಿ ಮುಂಭಾಗದ ಜಾಗ ಆಟದ ಮೈದಾನವೇ ಹೊರತು, ಈದ್ಗಾ ಮೈದಾನವಲ್ಲ. ನಾನು ನನ್ನ ಕಾಲೇಜು ದಿನಗಳಿಂದ ಇದನ್ನು ಬಲ್ಲೆ. ಅಂದು ಅಲ್ಲಿ ಪ್ರಾರ್ಥನಾ ಗೋಡೆಯೇ ಇರಲಿಲ್ಲ. ಇತ್ತೀಚೆಗೆ ಇದು ವಕ್ಫ್ಗೆ ಸೇರಿದೆ ಎಂಬುದಾಗಿ ಸುದ್ದಿ ಹರಿದಾಡಿದೆ’ ಎಂದು ಶಾಸಕ ಆರಗ ಜ್ಞಾನೇಂದ್ರ ತಿಳಿಸಿದರು.
1995 ಹಾಗೂ 2013ರಲ್ಲಿ ವಕ್ಫ್ ಕಾಯ್ದೆಗೆ ಬಲ ಕೊಟ್ಟಿದ್ದು ಅಂದಿನ ಆಡಳಿತಾರೂಢ ಕಾಂಗ್ರೆಸ್ ಸರ್ಕಾರ. ವಕ್ಫ್ ಹೆಸರಿನಲ್ಲಿ ಸರ್ಕಾರದ ಭೂಮಿ ಕಬಳಿಸಲು ಕಾಯ್ದೆ ನೆರವಾಯಿತು. ಈಗಿನ ರಾಜ್ಯ ಕಾಂಗ್ರೆಸ್ ಸರ್ಕಾರ ಕೂಡ ಮುಸ್ಲಿಮರ ತುಷ್ಟೀಕರಣದಲ್ಲಿ ತೊಡಗಿದೆ. ವಕ್ಫ್ ಹೆಸರಿನಲ್ಲಿ ಸಿಕ್ಕಸಿಕ್ಕ ಭೂ ಕಬಳಿಕೆ ಮಾಡಿ ಅಕ್ರಮ ಬೇಲಿ ನಿರ್ಮಿಸಲು ಬಿಜೆಪಿ ಎಂದಿಗೂ ಅವಕಾಶ ನೀಡುವುದಿಲ್ಲ. ಅಕ್ರಮ ಜಾಗ ಕಬಳಿಕೆ ಖಂಡಿಸಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
‘ಮಡಿಕೇರಿ ಭಾಗದ ಪಕ್ಷದ ಕಾರ್ಯಕರ್ತ ವಿನಯ್ ಆತ್ಮಹತ್ಯೆಗೂ ಮುನ್ನ ಬರೆದಿದ್ದ ಮರಣಪತ್ರದಲ್ಲಿ ‘ತನ್ನ ಸಾವಿಗೆ ಕಾಂಗ್ರೆಸ್ ಪಕ್ಷದ ಇಬ್ಬರೂ ಶಾಸಕರೇ ನೇರ ಹೊಣೆ’ ಎಂಬ ಉಲ್ಲೇಖದ ಹಿನ್ನೆಲೆಯಲ್ಲಿ ತಕ್ಷಣವೇ ಅವರ ವಿರುದ್ಧ ಸೂಕ್ತ ತನಿಖೆ ಕೈಗೊಳ್ಳಬೇಕು’ ಎಂದು ಆರಗ ಆಗ್ರಹಿಸಿದರು.
ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿ ವಿವಿಧ ಇಲಾಖೆಗಳ ಅಧಿಕಾರಿಗಳು ಸರಣಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಲೆ ಏರಿಕೆ, ಬಾಣಂತಿಯರ ಸಾವು, ಹಾದಿ ಬೀದಿಗಳಲ್ಲಿ ಕೊಲೆ ನಿಂತಿಲ್ಲ. ಈ ಕುರಿತು ಸೂಕ್ತ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.