ADVERTISEMENT

ಬದಲಾವಣೆಯ ತುಡಿತ ಬಿಂಬಿಸುವ ಕೃತಿ ‘ಗ್ಲಾನಿ’

ರಂಗ ನಿರ್ದೇಶಕ ವಿಜಯ ವಾಮನ್ ಅಭಿಮತ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2022, 4:50 IST
Last Updated 26 ನವೆಂಬರ್ 2022, 4:50 IST
ಸಾಗರದಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಲೇಖಕ ಜಿ.ಎಸ್.ಭಟ್ ಅವರ ‘ಗ್ಲಾನಿ’ ರಂಗ ಕೃತಿ ಕುರಿತು ಶುಕ್ರವಾರ ಕೃತಿಕಾರರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ವಿಜಯ ವಾಮನ್ ಮಾತನಾಡಿದರು.
ಸಾಗರದಲ್ಲಿ ಪರಸ್ಪರ ಸಾಹಿತ್ಯ ವೇದಿಕೆ ಲೇಖಕ ಜಿ.ಎಸ್.ಭಟ್ ಅವರ ‘ಗ್ಲಾನಿ’ ರಂಗ ಕೃತಿ ಕುರಿತು ಶುಕ್ರವಾರ ಕೃತಿಕಾರರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ವಿಜಯ ವಾಮನ್ ಮಾತನಾಡಿದರು.   

ಸಾಗರ: ಬದಲಾವಣೆ ಬಯಸುವ ಪ್ರಯತ್ನದೆಡೆಗಿನ ತುಡಿತವನ್ನು ಸಮರ್ಥವಾಗಿ ಬಿಂಬಿಸುವ ಕೃತಿ ‘ಗ್ಲಾನಿ’ ಎಂದು ರಂಗ ನಿರ್ದೇಶಕ ವಿಜಯ ವಾಮನ್ ಹೇಳಿದರು.

ಪರಸ್ಪರ ಸಾಹಿತ್ಯ ವೇದಿಕೆ ಲೇಖಕ ಜಿ.ಎಸ್.ಭಟ್ ಅವರ ‘ಗ್ಲಾನಿ’ ರಂಗ ಕೃತಿ ಕುರಿತು ಶುಕ್ರವಾರ ಲೇಖಕರರೊಂದಿಗೆ ಏರ್ಪಡಿಸಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಮಹಾಭಾರತಕ್ಕೆ ಹೋಲಿಸಿದರೆ ರಾಮಾಯಣದಲ್ಲಿ ನಾಟಕೀಯ ಅಂಶಗಳು ಕಡಿಮೆ. ಅಂತಹ ಅಂಶಗಳನ್ನೇ ಆಯ್ಕೆ ಮಾಡಿಕೊಂಡು ಯಕ್ಷಗಾನದ ಜೊತೆಗೆ ರಂಗವಸ್ತುವನ್ನು ಮೇಳೈಸಿರುವುದು ಗ್ಲಾನಿ ಕೃತಿಯ ವಿಶೇಷವಾಗಿದೆ. ಕೃತಿಯಲ್ಲಿ ಬಳಕೆಯಾಗಿರುವ ‘ರಾಜಧರ್ಮ’ ಪದದ ಹಿಂದೆ ಸಮಕಾಲೀನ ರಾಜಕೀಯವನ್ನು ವಿಶ್ಲೇಷಿಸುವ ಆಯಾಮವಿದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಸ್ಥಿರತೆಗಿಂತ ಎಲ್ಲವೂ ಚಲನಶೀಲವಾಗಿರಬೇಕು ಎಂಬ ಆಶಯದ ಧ್ವನಿಯ ಮೂಲಕ ಗ್ಲಾನಿ ರಂಗ ಕೃತಿಯು ವಿಶೇಷ ಅನುಭವ ನೀಡುತ್ತದೆ. ಮೇಲ್ನೋಟಕ್ಕೆ ಇದರ ವಸ್ತು ಸರಳವಾಗಿ ಕಂಡರೂ ಸಂಕೀರ್ಣ ಸಂಗತಿಗಳನ್ನು ಅದು ಒಳಗೊಂಡಿದೆ. ಹಲವು ಕಥನಗಳನ್ನು ಕಟ್ಟುವ ಮೂಲಕ ರಂಗದ ಮೇಲೆ ತರುವ ಸಾಧ್ಯತೆಯನ್ನು ಕೃತಿಯು ಒಳಗೊಂಡಿದೆ’ ಎಂದು ಬರಹಗಾರ ದೇವೇಂದ್ರ ಬೆಳೆಯೂರು ಹೇಳಿದರು.

‘ರಾಮನ ಸದ್ಗುಣಗಳ ಜೊತೆಗೆ ಅವಗುಣಗಳನ್ನು ಕೂಡ ವಿಶ್ಲೇಷಣೆ ಮಾಡಿರುವುದು ಕೃತಿಯ ವಿಶೇಷತೆಯಾಗಿದೆ. ವ್ಯಕ್ತಿಯನ್ನು ದೇವರನ್ನಾಗಿ ಮಾಡುವ ಪ್ರಕ್ರಿಯೆ ಸ್ವತಃ ರಾಮನಿಗೂ ಇಷ್ಟವಿರಲಿಲ್ಲ ಎಂಬ ಧ್ವನಿಯನ್ನು ಕೃತಿಯಲ್ಲಿ ವ್ಯಕ್ತಪಡಿಸುವ ಮೂಲಕ ಈ ಬಗೆಯ ರಾಜಕಾರಣದಲ್ಲಿ ತೊಡಗಿರುವ ಬಲಪಂಥದ ಮಾದರಿ ಕೊನೆಯಾಗಬೇಕು ಎಂಬ ಆಶಯ ಲೇಖಕರಲ್ಲಿ ಇರುವಂತೆ ಕಾಣುತ್ತದೆ’ ಎಂದು ಉಪನ್ಯಾಸಕಿ ಎಂ.ಎಸ್.ಸರೋಜ ಅಭಿಪ್ರಾಯಪಟ್ಟರು.

ಲೇಖಕ ಜಿ.ಎಸ್.ಭಟ್, ‘ದೃಶ್ಯದ ನಿರಂತರತೆಯನ್ನು ಕಾಪಾಡಿಕೊಳ್ಳುವ ಸಲುವಾಗಿಯೇ ಕೃತಿ ಲಕ್ಷ್ಮಣ ಹಾಗೂ ಸ್ತ್ರೀ ಪಾತ್ರಗಳನ್ನು ಒಳಗೊಂಡಿಲ್ಲ. ಇದಕ್ಕೊಂದು ಸಾಂಕೇತಿಕ ಅರ್ಥವಿದೆ. ಯಕ್ಷಗಾನದ ಚಲನಶೀಲತೆ ಮತ್ತು ನಾಟಕ ಪ್ರಯೋಗದ ನಿರ್ಬಂಧತೆಯ ನಡುವೆ ಸಮನ್ವಯತೆ ತರುವ ಪ್ರಯತ್ನ ಮಾಡಿದ್ದೇನೆ’ ಎಂದು ವಿವರಿಸಿದರು.

ಪರಸ್ಪರ ಸಾಹಿತ್ಯ ವೇದಿಕೆ ಅಧ್ಯಕ್ಷ ಡಾ.ಸರ್ಫ್ರಾಜ್ ಚಂದ್ರಗುತ್ತಿ, ಎಸ್.ಎಂ.ಗಣಪತಿ ಇದ್ದರು. ಸಿ.ಟಿ.ಬ್ರಹ್ಮಾಚಾರ್, ಡಾ.ಟಿ.ಎಸ್.ರಾಘವೇಂದ್ರ, ರಾಧಾಕೃಷ್ಣ ಬಂದಗದ್ದೆ, ಮೃತ್ಯುಂಜಯ, ಎಲ್.ಎಂ.ಹೆಗಡೆ, ಕೆ.ಜಿ.ರಾಮರಾವ್, ಡಾ.ದೇವೇಂದ್ರ ಕೆ.ಎಸ್, ಎಂ.ಎಸ್.ಕೃಷ್ಣಯ್ಯ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.