ಆನಂದಪುರ: ‘ಮತಾಂತರಕ್ಕೆ ನಮ್ಮಲ್ಲಿರುವ ಜಾತೀಯತೆಯೇ ಕಾರಣ. ಕೆಳವರ್ಗದ ವ್ಯಕ್ತಿಯೊಬ್ಬ ನಮ್ಮ ಮನೆಗೆ ಬಂದಾಗ ಸತ್ಕರಿಸದೆ ನಿರಾಕರಿಸಿದಾಗ ಅಂತಹ ವ್ಯಕ್ತಿಗಳು ಸಹಜವಾಗಿ ಮತಾಂತರವಾಗುತ್ತಾರೆ. ಇಂತಹ ಸೂಕ್ಷ್ಮ ವಿಚಾರಗಳನ್ನು ಅರ್ಥಮಾಡಿಕೊಂಡು ಜಾತ್ಯತೀತವಾಗಿ ಬದುಕುವಂತಾಗಬೇಕು’ ಎಂದು ಕೋಡಿಮಠದ ಶಿವಾನಂದ ಶಿವಯೋಗಿ ಸ್ವಾಮೀಜಿ ಹೇಳಿದರು.
ಸಮೀಪದ ಮುರುಘಾ ಮಠಕ್ಕೆ ಶನಿವಾರ ಭೇಟಿ ನೀಡಿ ಮಾತನಾಡಿದರು.
‘ರಾಜಕೀಯವಾಗಿ ಮಠಾಧೀಶರ ಬಗ್ಗೆ ಸಾಕಷ್ಟು ಆಪಾದನೆ ಇದೆ. ಇವರು ಮಠಾಧಿಪತಿಗಳೋ ಅಥವಾ ಮತಾಧಿಪತಿಗಳೋ ಎನ್ನುವ ಪ್ರಶ್ನೆ ಮೂಡುತ್ತದೆ. ವೀರಶೈವ ಮತ್ತು ಲಿಂಗಾಯತ ಪದಗಳು ಬೇರೆ ಬೇರೆ. ಆದರೆ ಅವರ ನಡವಳಿಕೆಗಳು ಒಂದೇಆಗಿದೆ. ಅವರವರ ಹಕ್ಕುಗಳಿಗಾಗಿಹೋರಾಡುವುದರಲ್ಲಿ ತಪ್ಪೇನಿಲ್ಲ. ಲಿಂಗಾಯತರು ಬಸವತತ್ವಗಳನ್ನು ಪ್ರತಿಪಾದಿಸಿದರೆ, ವೀರಶೈವರು ಶೈವ ತತ್ವಗಳನ್ನು ಅನುಸರಿಸುತ್ತಾರೆ. ವಾಸ್ತವದಲ್ಲಿ ಲಿಂಗಾಯತ ಮತ್ತು ವೀರಶೈವ ಒಂದೇ ಆಗಿದ್ದು ಮೂಲ ರೂಪದಲ್ಲಿಬೇರ್ಪಡಿಸಲು ಆಗದು. ಪ್ರತ್ಯೇಕ ಧರ್ಮದ ಮೀಸಲಾತಿಗೆ ನಡೆಯುತ್ತಿರುವ ಹೋರಾಟ ಸರಿಯಿದೆ. ಹೋರಾಟ ವಿಲ್ಲದೆ ಯಾವುದೇ ಸ್ಥಾನಮಾನ ದೊರಕುವುದಿಲ್ಲ’ ಎಂದರು.
ಸಂಸ್ಕಾರಯುತ ಶಿಕ್ಷಣ ಅತ್ಯಂತ ಅಗತ್ಯವಾಗಿದ್ದು, ಧಾರ್ಮಿಕ ಕೇಂದ್ರಗಳು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕಾಗಿದೆ ಎಂದರು.
ಮುರುಘಾ ಮಠದ ಮಲ್ಲಿಕಾರ್ಜುನ ಮುರುಘಾ ರಾಜೇಂದ್ರ ಸ್ವಾಮೀಜಿ, ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮೀಜಿ, ಕೋಣಂದೂರು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ಜಡೆ ಮಠದ ಯೋಗಾಚಾರ್ಯ ಮಹಾಂತ ಸ್ವಾಮೀಜಿ, ತೋಗರ್ಸಿ ಮಠದ ಮಹಾಂತ ಶಿವಾಚಾರ್ಯ ಸ್ವಾಮೀಜಿ, ಹಾರನಹಳ್ಳಿ ಮಠದ ನೀಲಕಂಠ ಸ್ವಾಮೀಜಿ
ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.