ADVERTISEMENT

ಡಿಸಿಸಿ ಬ್ಯಾಂಕ್ ಅಧ್ಯಕ್ಷ ಚನ್ನವೀರಪ್ಪ ಸರ್ವಾಧಿಕಾರಿಯಲ್ಲ: ಚುರ್ಚಿಗುಂಡಿ ಶಶಿಧರ್

​ಪ್ರಜಾವಾಣಿ ವಾರ್ತೆ
Published 13 ಏಪ್ರಿಲ್ 2021, 5:11 IST
Last Updated 13 ಏಪ್ರಿಲ್ 2021, 5:11 IST
ಚುರ್ಚಿಗುಂಡಿ ಶಶಿಧರ್
ಚುರ್ಚಿಗುಂಡಿ ಶಶಿಧರ್   

ಶಿಕಾರಿಪುರ: ‘ಡಿಸಿಸಿ ಬ್ಯಾಂಕ್‌ನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನೌಕರರನ್ನು ವರ್ಗಾವಣೆ ಮಾಡುವ ವಿಷಯದಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಸರ್ವಾಧಿಕಾರಿಯಂತೆ ವರ್ತಿಸಿಲ್ಲ’ ಎಂದು ಟಿಎಪಿಸಿಎಂಎಸ್ ಅಧ್ಯಕ್ಷ ಚುರ್ಚಿಗುಂಡಿ ಶಶಿಧರ್ ಸಮರ್ಥಿಸಿಕೊಂಡರು.

ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉತ್ತಮ ಆಡಳಿತದ ಹಿತದೃಷ್ಟಿಯಿಂದ ಒಂದೇ ಸ್ಥಳದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿರುವ ಡಿಸಿಸಿ ಬ್ಯಾಂಕಿನ 23 ನೌಕರರನ್ನು ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ವರ್ಗಾವಣೆ ಮಾಡಿದ್ದಾರೆ. ಆದರೆ ವರ್ಗಾವಣೆ ವಿಷಯದಲ್ಲಿ ಅಧ್ಯಕ್ಷ ಚನ್ನವೀರಪ್ಪ ಸರ್ವಾಧಿಕಾರಿ ಧೋರಣೆ ಅನುಸರಿಸಿದ್ದಾರೆ ಎಂದು ನಿರ್ದೇಶಕ ದುಗ್ಗಪ್ಪಗೌಡ ಮಾಡಿದ ಆರೋಪ ಸತ್ಯಕ್ಕೆ ದೂರ’ ಎಂದರು.

‘ಮಾಜಿ ಅಧ್ಯಕ್ಷ ಆರ್.ಎಂ. ಮಂಜುನಾಥಗೌಡ ಅವರು ₹ 60 ಕೋಟಿ ಬಂಗಾರದ ಹಗರಣ ಮಾಡಿದ ಸಂದರ್ಭದಲ್ಲಿ ದುಗ್ಗಪ್ಪಗೌಡ ಏಕೆ ಅಂದಿನ ಅಧ್ಯಕ್ಷರ ವಿರುದ್ಧ ಮಾತನಾಡಲಿಲ್ಲ? ಸಭೆಯ ಗಮನಕ್ಕೆ ತಾರದೇ ₹ 90ಕೋಟಿ ಬೇರೆ ಜಿಲ್ಲೆಯ ಸಕ್ಕರೆ ಕಾರ್ಖಾನೆಗಳಿಗೆ ಸಾಲ ನೀಡಿರುವ ಬಗ್ಗೆ ಏಕೆ ಮಾತನಾಡಲಿಲ್ಲ’ ಎಂದು ಪ್ರಶ್ನಿಸಿದರು.

ADVERTISEMENT

‘ದುಗ್ಗಪ್ಪಗೌಡ ಕಾಂಗ್ರೆಸ್ ಸೇರಿದ ಮೇಲೆ ಸಹಕಾರಿ ಸಂಘದಲ್ಲಿ ರಾಜಕೀಯ ಬೆರೆಸಲು ಹೊರಟಿದ್ದಾರೆ. ಅಧ್ಯಕ್ಷ ಎಂ.ಬಿ. ಚನ್ನವೀರಪ್ಪ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾದ ಮೇಲೆ ಉತ್ತಮವಾಗಿ ಅಧಿಕಾರ ನಿರ್ವಹಿಸುತ್ತಿದ್ದಾರೆ. ಬ್ಯಾಂಕ್
ಅನ್ನು ಲಾಭದ ದಾರಿಯಲ್ಲಿ ಕೊಂಡೊಯ್ದಿದ್ದಾರೆ. ಅಧ್ಯಕ್ಷರ ಬಗ್ಗೆ ದುಗ್ಗಪ್ಪಗೌಡ ಅವರ ಹೇಳಿಕೆ ಖಂಡಿಸುತ್ತೇವೆ’ ಎಂದರು.

ಹಾಪ್‌ಕಾಮ್ಸ್ ರಾಜ್ಯ ನಿರ್ದೇಶಕ ಚಾರಗಲ್ಲಿ ಪರಶುರಾಮ್, ‘ಎಂ.ಬಿ. ಚನ್ನವೀರಪ್ಪ ಯಾವುದೇ ಕಪ್ಪುಚುಕ್ಕೆ ಬಾರದಂತೆ ಅಧಿಕಾರ ನಡೆಸುತ್ತಿದ್ದಾರೆ. ದುಗ್ಗಪ್ಪಗೌಡ ಗಾಳಿ ಬಂದ ಕಡೆ ತೂರಿಕೊಳ್ಳುವ ವ್ಯಕ್ತಿ’ ಎಂದು ಹೇಳಿದರು.

ಶಿಮುಲ್ ನಿರ್ದೇಶಕ ನಿಂಬೆಗೊಂದಿ ಸಿದ್ಧಲಿಂಗಪ್ಪ, ಜಿಲ್ಲಾ ಸಹಕಾರ ಯೂನಿಯನ್ ನಿರ್ದೇಶಕ ನಾಗರಾಜಸ್ವಾಮಿ, ಕಸಬಾ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಗೋಪಾಲ್, ಉಪಾಧ್ಯಕ್ಷ ಪರಮೇಶ್ವರಪ್ಪ, ಎಪಿಎಂಸಿ ನಿರ್ದೇಶಕ ಎ.ಬಿ. ಸುಧೀರ್, ತಾಲ್ಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ತಡಸನಹಳ್ಳಿ ಶಿವಕುಮಾರ್, ಹರಗುವಳ್ಳಿ ಶಾಂತವೀರಪ್ಪ, ತೊಗರ್ಸಿ ಗಿರೀಶ್ ಗೌಡ, ಈಸೂರು ಲೋಕೇಶ್, ನಿರ್ದೇಶಕ ಹುಚ್ಚರಾಯಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.