ADVERTISEMENT

ಚಂದ್ರಗುತ್ತಿ | ಬನದ ಹುಣ್ಣಿಮೆ ಸಂಭ್ರಮ: ರೇಣುಕಾಂಬಾ ದರ್ಶನಕ್ಕೆ ಭಕ್ತ‌ಸಾಗರ

​ಪ್ರಜಾವಾಣಿ ವಾರ್ತೆ
Published 4 ಜನವರಿ 2026, 4:44 IST
Last Updated 4 ಜನವರಿ 2026, 4:44 IST
ಸೊರಬ ತಾಲ್ಲೂಕಿ‌ನ ಚಂದ್ರಗುತ್ತಿಯಲ್ಲಿ ಬನದ ಹುಣ್ಣಿಮೆ ನಿಮಿತ್ತ ರೇಣುಕಾಂಬಾ ದೇವಸ್ಥಾನಕ್ಕೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು
ಸೊರಬ ತಾಲ್ಲೂಕಿ‌ನ ಚಂದ್ರಗುತ್ತಿಯಲ್ಲಿ ಬನದ ಹುಣ್ಣಿಮೆ ನಿಮಿತ್ತ ರೇಣುಕಾಂಬಾ ದೇವಸ್ಥಾನಕ್ಕೆ ವಿವಿಧ ಭಾಗಗಳಿಂದ ಭಕ್ತರು ಆಗಮಿಸಿದ್ದರು   

ಸೊರಬ: ತಾಲ್ಲೂಕಿನ‌ ಚಂದ್ರಗುತ್ತಿತ ರೇಣುಕಾಂಬಾ ದೇವಸ್ಥಾನಕ್ಕೆ ಶನಿವಾರ ಬನದ ಹುಣ್ಣಿಮೆ ನಿಮಿತ್ತ ರಾಜ್ಯದ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಆಗಮಿಸಿ ವಿಶೇಷ ಪೂಜೆ ಸಲ್ಲಿಸಿದರು.

ಬೆಳಿಗ್ಗೆಯಿಂದಲೇ ದೇವಸ್ಥಾನದ ಆವರಣದಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿತ್ತು. ಕಣ್ಣು ಹಾಯಿಸಿದಲ್ಲೆಲ್ಲಾ ಭಕ್ತರ ದಂಡೆ ಕಂಡು ಬಂದಿತು. ಭಕ್ತರು ಪಡ್ಡಲಿಗೆಯಲ್ಲಿ ದೇವಿಯ ರೂಪದ ಮೂರ್ತಿಯನ್ನು ಇಟ್ಟು ಭಕ್ತಿಯಿಂದ ತಲೆಯ ಮೇಲೆ ಹೊತ್ತು, ಸಾಲು ಸಾಲಾಗಿ ದೇಗುಲದ ಮೆಟ್ಟಿಲುಗಳನ್ನು ಏರುತ್ತಾ ಉಧೋ, ಉಧೋ... ರೇಣುಕಾ ಯಲ್ಲಮ್ಮ ನಿನ್ನಾಲ್ಕು ಉಧೋ, ಉಧೋ... ಎಂಬ ಘೋಷಣೆಗಳನ್ನು ಮೊಳಗಿಸಿದರು.

ಭಕ್ತಿಯ ಜಯಘೋಷಗಳು ಗುತ್ತಿಯ ಬೆಟ್ಟದಾದ್ಯಂತ ಪ್ರತಿಧ್ವನಿಸಿದವು. ಇಷ್ಟಾರ್ಥ ಸಿದ್ಧಿಗಾಗಿ ಅನೇಕ ಭಕ್ತರು ರಸ್ತೆಯುದ್ದಕ್ಕೂ ದೀಡ್ ನಮಸ್ಕಾರ ಹಾಕುವ ಮೂಲಕ ತಮ್ಮ ಹರಕೆಯನ್ನು ಸಮರ್ಪಿಸಿದರು.

ADVERTISEMENT

ಹೊಸ್ತಿಲು ಹುಣ್ಣಿಮೆಯಿಂದ ಒಂದು ತಿಂಗಳ ಕಾಲ ದೇವಿಯು ವೈಧವ್ಯದಲ್ಲಿ ಇರುತ್ತಾರೆ ಎಂಬ ಸಂಪ್ರದಾಯದ ಹಿನ್ನೆಲೆಯಲ್ಲಿ ಭಕ್ತರು ಹಸಿರು ಬಳೆ, ಕುಪ್ಪಸ ಹಾಗೂ ಪಡ್ಲಿಗೆ ತುಂಬುವುದು ಹಾಗೂ ಮುತ್ತೈದೆ ಸಾಮಗ್ರಿಗಳನ್ನು ಪೂಜೆಗೆ ಸಲ್ಲಿಸುವಂತಿರಲಿಲ್ಲ. ಆದರೆ ಬನದ ಹುಣ್ಣಿಮೆಯು ಮುತ್ತೈದೆಯರ ಹುಣ್ಣಿಮೆ ಎಂದು ಪ್ರಸಿದ್ಧಿ ಪಡೆದಿದ್ದು, ಸಾವಿರಾರು ಮಹಿಳಾ ಭಕ್ತರು ಸಡಗರ ಸಂಭ್ರಮದಿಂದ ಹೊಸ ಹಸಿರು ಬಳೆಗಳನ್ನು ತೊಟ್ಟು ಪಡ್ಲಿಗೆ ತುಂಬಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಆಚರಿಸಿದರು. ದೇವಿಯ ಹೆಸರಿನಲ್ಲಿ ವಿಶೇಷ ಖಾದ್ಯಗಳನ್ನು ತಯಾರಿಸಿ ದೇವಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಬಂಧು- ಬಳಗದೊಂದಿಗೆ ಭೋಜನ ಮಾಡುವ ದೃಶ್ಯ ಅಲ್ಲಲ್ಲಿ ಕಂಡು ಬಂದಿತು.

ದೇವಸ್ಥಾನದ ಆವರಣದಲ್ಲಿರುವ ಪರಿವಾರ ದೇವರುಗಳಾದ ಕಾಲಭೈರವ, ನಾಗದೇವತೆ, ಮಾತಂಗಿ, ಪರಶುರಾಮ ಹಾಗೂ ತ್ರಿಶೂಲದ ಭೈರಪ್ಪ ದೇವರುಗಳಿಗೆ ವಿಶೇಷ ಪೂಜೆ ನೆರವೇರಿದವು. ದೇವಸ್ಥಾನದಿಂದ ಆರಂಭವಾದ ಶ್ರೀ ರೇಣುಕಾಂಬಾ ದೇವಿಯ ಪಲ್ಲಕ್ಕಿ ಉತ್ಸವ ಮೆರವಣಿಗೆಯು ಸಕಲ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಯಲ್ಲಿ ವಿಜೃಂಭಣೆಯಿಂದ ಜರುಗಿತು.

ಶಿವಮೊಗ್ಗ ಸೇರಿದಂತೆ ಹಾವೇರಿ, ಧಾರವಾಡ, ಬೆಳಗಾವಿ, ದಾವಣಗೆರೆ, ರಾಯಚೂರು, ಚಿತ್ರದುರ್ಗ ಮತ್ತು ಉತ್ತರ ಕರ್ನಾಟಕ ಹಾಗೂ ಬಯಲು ಸೀಮೆ ಭಾಗಗಳಿಂದ ಭಕ್ತ ಸಾಗರವೇ ಹರಿದು ಬಂದಿತ್ತು.

ಭಾರಿ ಜನದಟ್ಟಣೆಯ ಹಿನ್ನೆಲೆಯಲ್ಲಿ ಕ್ಷೇತ್ರದಲ್ಲಿ ಪೋಲಿಸ್ ಇಲಾಖೆಯಿಂದ ಬಿಗಿ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ಸೊರಬ ತಾಲ್ಲೂಕಿ‌ನ ಚಂದ್ರಗುತ್ತಿಯಲ್ಲಿ ಬನದ ಹುಣ್ಣಿಮೆ ನಿಮಿತ್ತ ಮಹಿಳೆಯರು ರೇಣುಕಾಂಬಾ ದೇವಿಗೆ ಪಡ್ಲಿಗೆ ಸಮರ್ಪಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.