ADVERTISEMENT

‘ಆಯುಷ್ಮಾನ್ ಭವ’ ಕಾರ್ಡ್ ವಿತರಣೆ: ವಂಚನೆಗೆ ಯತ್ನ

​ಪ್ರಜಾವಾಣಿ ವಾರ್ತೆ
Published 14 ಮೇ 2019, 20:34 IST
Last Updated 14 ಮೇ 2019, 20:34 IST

ಹೊಸನಗರ: ಕೇಂದ್ರ ಸರ್ಕಾರದ ಯೋಜನೆಯಾದ ‘ಆಯುಷ್ಮಾನ್ ಭವ’ ಯೋಜನೆಯ ಹೆಲ್ತ್ ಕಾರ್ಡ್ ವಿತರಿಸುವುದಾಗಿ ಹೇಳಿ ಗ್ರಾಮಸ್ಥರಿಗೆ ದೂರವಾಣಿ ಕರೆ ಮಾಡಿ ವಂಚಿಸಲು ಯತ್ನಿಸುತ್ತಿದ್ದ ಸಂಚು ಬಯಲಾಗಿದೆ.

ತಾಲ್ಲೂಕಿನ ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ವಿವಿಧ ಗ್ರಾಮಗಳಲ್ಲಿ ಈ ದೂರವಾಣಿ ಕರೆಗಳು ವಾರದಿಂದ ಹರಿದಾಡಿವೆ. ‘ನಾವು ಇಲ್ಲಿನ ಗ್ರಾಮ ಪಂಚಾಯಿತಿಯಿಂದ ಕರೆ ಮಾಡುತ್ತಿದ್ದೇವೆ. ಕೇಂದ್ರ ಸರ್ಕಾರ ಮಹತ್ವದ ಆಯುಷ್ಮಾನ್ ಹೆಲ್ತ್ ಕಾರ್ಡ್ ಅಂಚೆ ಮೂಲಕ ನಿಮ್ಮ ಮನೆ ಬಾಗಿಲಿಗೆ ಕಳಿಸುವ ಎರ್ಪಾಡು ಮಾಡಲಾಗಿದೆ. ನೀವು ₹ 320 ಕಟ್ಟಿ ಬಿಡಿಸಿಕೊಳ್ಳಬೇಕು’ ಎಂದು ದೂರವಾಣಿ ಕರೆಯಲ್ಲಿ ಹೇಳಿದ್ದಾರೆ.

ಈ ಬಗ್ಗೆ ಅನುಮಾನಗೊಂಡ ಗ್ರಾಮಸ್ಥರು ಸ್ಥಳೀಯ ಗ್ರಾಮ ಪಂಚಾಯಿತಿಗೆ ಭೇಟಿ ನೀಡಿ ವಿಚಾರಿಸಿದಾಗ ಸಂಚು ಬಯಲಾಗಿದೆ. ‘ನಮ್ಮ ಗ್ರಾಮ ಪಂಚಾಯಿತಿ ವತಿಯಿಂದ ಯಾವುದೇ ಹೆಲ್ತ್ ಕಾರ್ಡ್ ವಿತರಿಸುವ ಯೋಜನೆ ಇಲ್ಲ’ ಎಂದು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜ್ ತಿಳಿಸಿದ್ದಾರೆ.‘ಈ ಬಗ್ಗೆ ನಗರ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಆಯುಷ್ಮಾನ್ ಭವ ಆರೋಗ್ಯ ಕಾರ್ಡ್ ಪಡೆಯಲು ಯಾವುದೇ ಶುಲ್ಕವಿಲ್ಲ. ಇದು ಸಾಮಾನ್ಯ ಅಂಚೆಯ ಮೂಲಕ ಫಲಾನುಭವಿಗಳ ವಿಳಾಸಕ್ಕೆ ಬರುತ್ತವೆ. ಯಾವುದೇ ಕರೆಗಳನ್ನು ನಂಬಿ ಮೋಸ ಹೋಗಬಾರದು’ ಎಂದು ಅವರು ಗ್ರಾಮಸ್ಥರಲ್ಲಿ ಮನವಿ ಮಾಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.