ಹಣ ವಂಚನೆ (ಪ್ರಾತಿನಿಧಿಕ ಚಿತ್ರ)
ಸಾಗರ: ಅತಿಥಿ ಉಪನ್ಯಾಸಕರ ಸೇವೆಯನ್ನು ಕಾಯಂಗೊಳಿಸುವುದಾಗಿ ನಂಬಿಸಿ, ಹಣ ಪಡೆದು ವಂಚಿಸಿದ ಆರೋಪದ ಮೇರೆಗೆ ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಹಾಗೂ ಇತರ ಪದಾಧಿಕಾರಿಗಳ ವಿರುದ್ಧ ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ವಂಚನೆ ಪ್ರಕರಣ ದಾಖಲಾಗಿದೆ.
ಅತಿಥಿ ಉಪನ್ಯಾಸಕ ಸಂಘದ ಅಧ್ಯಕ್ಷ ಗದಗದ ಹನುಮಂತ ಗೌಡ ಕಲ್ಮನಿ, ಕಾರ್ಯದರ್ಶಿ ಹುಬ್ಬಳ್ಳಿಯ ಪೀಟರ್ ವಿನೋದ್ ಚಂದ್, ಸಾಗರ ತಾಲ್ಲೂಕಿನ ಮರತ್ತೂರು ಗ್ರಾಮದ ಶಾಲಿನಿ ಕೆ. ವಿರುದ್ಧ ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇಲ್ಲಿನ ವಿವಿಧ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಎಸ್.ಎಂ.ಗಣಪತಿ, ಕೌಶಿಕ್ ಕಾನುಗೋಡು, ಭವ್ಯ ವಿ., ಅಶೋಕ ಎ., ಅನುಷಾ ಎಲ್.ವಿ. ಅವರ ಸೇವೆ ಕಾಯಂಗೊಳಿಸುವುದಾಗಿ ಹೇಳಿ ಆರೋಪಿಗಳು ಒಟ್ಟು ₹ 17.50 ಲಕ್ಷವನ್ನು ಬ್ಯಾಂಕ್ ಖಾತೆ ಮೂಲಕ ಪಡೆದುಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
‘ಅತಿಥಿ ಉಪನ್ಯಾಸಕರ ಸಂಘದ ಪದಾಧಿಕಾರಿಯಾಗಿರುವ ಕಾರಣ ಸರ್ಕಾರದ ಉನ್ನತ ಶಿಕ್ಷಣ ಸಚಿವರು ಹಾಗೂ ಶಿಕ್ಷಣ ಇಲಾಖೆಯ ಆಯುಕ್ತರ ಜೊತೆ ನಿರಂತರ ಸಂಪರ್ಕದಲ್ಲಿದ್ದೇವೆ. ನಿಮ್ಮ ಸೇವೆಯನ್ನು ಶೀಘ್ರವಾಗಿ ಕಾಯಂಗೊಳಿಸುತ್ತೇವೆ ಎಂದು ದೂರುದಾರರನ್ನು ನಂಬಿಸಿ ಹಣ ಪಡೆದು ನಂತರ ಹಣವನ್ನು ವಾಪಸ್ ನೀಡದೆ ವಂಚಿಸಲಾಗಿದೆ’ ಎಂದು ದೂರುದಾರರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.