ಸಾಗರ: ಸಾಮಾಜಿಕ ಅನಿಷ್ಟವಾದ ಬಾಲ್ಯವಿವಾಹ ಪದ್ಧತಿಯ ನಿರ್ಮೂಲನೆಗೆ ಪ್ರತಿಯೊಬ್ಬರೂ ಕೈ ಜೋಡಿಸಬೇಕು ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ಹೇಳಿದರು.
ಇಲ್ಲಿನ ನಗರಸಭೆ ಬಯಲು ರಂಗಮಂದಿರದಲ್ಲಿ ಸೋಮವಾರ ನಡೆದ ಬಾಲ್ಯ ವಿವಾಹ ತಡೆ ಹಾಗೂ ಪೊಕ್ಸೋ ಕಾಯ್ದೆ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ಪ್ರತಿಜ್ಞಾ ವಿಧಿ ಸ್ವೀಕರಿಸಿ ಮಾತನಾಡಿದರು.
ವಿದ್ಯಾವಂತರ ಸಂಖ್ಯೆ ಹೆಚ್ಚಾಗುತ್ತಿದ್ದರೂ ಬಾಲ್ಯ ವಿವಾಹ ಇನ್ನೂ ಸಂಪೂರ್ಣವಾಗಿ ನಿಲ್ಲದಿರುವುದು ಅತ್ಯಂತ ಬೇಸರದ ಸಂಗತಿಯಾಗಿದೆ. ಪುರುಷರಿಗೆ 21, ಮಹಿಳೆಯರಿಗೆ 18 ವರ್ಷ ತುಂಬುವ ಮುನ್ನವೇ ನಡೆಯುವ ವಿವಾಹಕ್ಕೆ ಕಾನೂನಿನಲ್ಲಿ ಯಾವುದೇ ಮಾನ್ಯತೆ ಇಲ್ಲ. ಇದನ್ನು ಮೀರಿ ಮದುವೆ ಮಾಡಿದರೆ ಭವಿಷ್ಯದಲ್ಲಿ ಪತಿ– ಪತ್ನಿ ಮಾತ್ರವಲ್ಲದೆ ಪೋಷಕರೂ ಅನೇಕ ರೀತಿಯ ತೊಂದರೆಗೆ ಒಳಗಾಗಬೇಕಾಗುತ್ತದೆ ಎಂದರು.
ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಯುವ ನಿಟ್ಟಿನಲ್ಲಿ ಕಠಿಣವಾದ ಪೊಕ್ಸೋ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದಾಗ್ಯೂ ಅಲ್ಲಲ್ಲಿ ಮಕ್ಕಳ ಮೇಲೆ ದೌರ್ಜನ್ಯದ ಪ್ರಕರಣಗಳು ವರದಿಯಾಗುತ್ತಿವೆ. ಮಾನವೀಯತೆ ಮೀರಿ ವರ್ತಿಸುವ ಇಂತಹ ಪ್ರಕರಣಗಳಲ್ಲಿ ತಪ್ಪಿತಸ್ಥರ ವಿರುದ್ಧ ದೂರು ಕೊಡಲು ಯಾರೂ ಹಿಂಜರಿಯಬಾರದು ಎಂದು ಹೇಳಿದರು.
ನಗರಸಭೆ ಅಧ್ಯಕ್ಷೆ ಮೈತ್ರಿ ಪಾಟೀಲ್, ಉಪಾಧ್ಯಕ್ಷೆ ಸವಿತಾ ವಾಸು, ಸದಸ್ಯರಾದ ಗಣಪತಿ ಮಂಡಗಳಲೆ, ಎಲ್.ಚಂದ್ರಪ್ಪ, ಮಧುಮಾಲತಿ, ಸೈಯದ್ ಜಾಕೀರ್, ಉಮೇಶ್, ಅರವಿಂದ ರಾಯ್ಕರ್, ಕುಸುಮಾ ಸುಬ್ಬಣ್ಣ, ವಿ.ಮಹೇಶ್, ರವಿಕುಮಾರ್, ಮಾಜಿ ಸದಸ್ಯ ಐ.ಎನ್.ಸುರೇಶ್ ಬಾಬು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.