
ಶಿವಮೊಗ್ಗ: ‘ಸಂಸದ ಬಿ.ವೈ.ರಾಘವೇಂದ್ರ ವಿರುದ್ಧ ವೈಯಕ್ತಿಕ ಟೀಕೆಯ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಪದೇ ಪದೇ ರಾಜಕೀಯ ಸಭ್ಯತೆ ಮೀರುತ್ತಿದ್ದಾರೆ. ವ್ಯಕ್ತಿಗತ ಟೀಕೆ ಬಿಟ್ಟು ಅಭಿವೃದ್ಧಿ ವಿಚಾರದಲ್ಲಿ ಅವರು ಬಹಿರಂಗ ಚರ್ಚೆಗೆ ಬರಲಿ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೆ ವಿಧಾನಪರಿಷತ್ ಸದಸ್ಯ ಡಿ.ಎಸ್.ಅರುಣ್ ಪಂಥಾಹ್ವಾನ ನೀಡಿದರು.
ನಗರದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಎರಡೂವರೆ ವರ್ಷಗಳಲ್ಲಿ ಶಿವಮೊಗ್ಗ ಜಿಲ್ಲೆಯಲ್ಲಿ ಏನೇನು ಅಭಿವೃದ್ಧಿ ಕಾರ್ಯ ಕೈಗೊಳ್ಳಲಾಗಿದೆ. ಜಿಲ್ಲೆಗೆ ನಿಮ್ಮ ಕೊಡುಗೆ ಏನು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಿ’ ಎಂದು ಆಗ್ರಹಿಸಿದರು.
‘ಲೋಕಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಲು ಬಿ.ವೈ.ರಾಘವೇಂದ್ರ ಅವರು ಪೊಲೀಸ್ ವಾಹನ ಹಾಗೂ ಆಂಬುಲೆನ್ಸ್ನಲ್ಲಿ ಹಣ ಸಾಗಿಸಿದ್ದರು ಎಂದು ಜಿಲ್ಲಾ ಉಸ್ತುವಾರಿ ಸಚಿವರು ಆರೋಪ ಮಾಡಿದ್ದಾರೆ. ಹೀಗೆ ಪೊಲೀಸ್ ಇಲಾಖೆ ಬಗ್ಗೆ ಹಗುರವಾಗಿ ಮಾತಾಡುವುದು ಸರಿಯಲ್ಲ. 2013ರಿಂದ 2018ರವರೆಗೆ ಕಾಂಗ್ರೆಸ್ ಸರ್ಕಾರವೇ ರಾಜ್ಯದಲ್ಲಿ ಅಧಿಕಾರದಲ್ಲಿ ಇತ್ತು. ಆಗ ಏಕೆ ಈ ಬಗ್ಗೆ ತನಿಖೆ ನಡೆಸಲಿಲ್ಲ’ ಎಂದು ಪ್ರಶ್ನಿಸಿದರು.
‘ಶಿಕಾರಿಪುರ ಪುರಸಭೆ ಸದಸ್ಯರಾಗಿದ್ದ ರಾಘವೇಂದ್ರ ಅವರಿಗೆ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ಯಾವ ಅರ್ಹತೆ ಇತ್ತು ಎಂದು ಮಧು ಬಂಗಾರಪ್ಪ ಪ್ರಶ್ನಿಸಿದ್ದಾರೆ. ಸಂಘಟನೆಯಲ್ಲಿ ತೊಡಗಿದ್ದ ಕಾರಣ ಹೈಕಮಾಂಡ್ ರಾಘವೇಂದ್ರ ಅವರಿಗೆ ಲೋಕಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡಿತ್ತು. ಹಾಗಿದ್ದರೆ ಮೊದಲ ಬಾರಿ ಬಿಜೆಪಿ ಟಿಕೆಟ್ನಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ವೇಳೆ ಮಧು ಬಂಗಾರಪ್ಪ ಅವರಿಗೆ ಯಾವ ಅರ್ಹತೆ ಇತ್ತು’ ಎಂದು ಡಿ.ಎಸ್.ಅರುಣ್ ತಿರುಗೇಟು ನೀಡಿದರು.
ರಾಜಕೀಯ ಆರೋಪ–ಪ್ರತ್ಯಾರೋಪಗಳ ಹೊರತಾಗಿ ಸಚಿವರು ವ್ಯಕ್ತಿಗತವಾಗಿ ಟೀಕೆ ಮಾಡಿದಲ್ಲಿ ಬಿಜೆಪಿಯಿಂದಲೂ ಅದೇ ರೀತಿ ಉತ್ತರ ನೀಡಬೇಕಾಗುತ್ತದೆ ಎಂದರು.
ಜಿಎಸ್ಟಿ ವಿಚಾರದಲ್ಲೂ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕರು ಅನಗತ್ಯವಾಗಿ ಟೀಕೆ ಮಾಡುತ್ತಿದ್ದಾರೆ. ಜಿಎಸ್ಟಿ ಮಂಡಳಿಯಿಂದ ರಾಜ್ಯಕ್ಕೆ ಹೆಚ್ಚುವರಿ ಅನುದಾನ ಪಡೆಯುವಾಗ ಕೇಂದ್ರದೊಂದಿಗೆ ರಾಜ್ಯಗಳು ಹೊಂದಿರುವ ಸಾಮರಸ್ಯವೂ ಗಣನೆಗೆ ಬರುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಮಧು ಬಂಗಾರಪ್ಪ, ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಮಾಡುತ್ತಿರುವ ಟೀಕೆಗಳಿಂದ ರಾಜ್ಯದ ಪಾಲಿಗೆ ನಷ್ಟವೇ ಹೆಚ್ಚು ಎಂದು ಅರುಣ್ ಮಾರ್ಮಿಕವಾಗಿ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಕೆ.ವಿ. ಅಣ್ಣಪ್ಪ, ಚಂದ್ರಶೇಖರ್, ಮಾಲತೇಶ್, ಪ್ರಶಾಂತ್ ಪಂಡಿತ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.