ರಿಪ್ಪನ್ಪೇಟೆ: ‘ರಾಜ್ಯದಲ್ಲಿ ಬಿಜೆಪಿ ಸರ್ಕಾರ ಮತೀಯ ಭಾವನೆ ಕೆರಳಿಸಿ, ಕೋಮುವಾದ ಸೃಷ್ಟಿಸುತ್ತಿದ್ದು, ಸಮಾನತೆ, ಸಹೋದರತ್ವ, ಸಹಬಾಳ್ವೆಗಾಗಿ ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆತರಬೇಕು’ ಎಂದು ಮಾಜಿ ಸಚಿವಕಿಮ್ಮನೆ ರತ್ನಾಕರ ಹೇಳಿದರು.
ಕೋಡೂರು ಶಂಕರೇಶ್ವರ ದೇವಸ್ಥಾನದ ಸಭಾಭವನದಲ್ಲಿ ಆಯೋಜಿಸಿದ್ದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿಯಾಗಿ ಆಯ್ಕೆಯಾದ ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕಲಗೋಡು ರತ್ನಾಕರ ಅವರಿಗೆ ಕಾರ್ಯಕರ್ತರು ಮತ್ತು ಅಭಿಮಾನಿ ಬಳಗ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಲಗೋಡು ರತ್ನಾಕರ ಅವರನ್ನು ಕಾಂಗ್ರೆಸ್ ಪಕ್ಷ ಗುರುತಿಸಿ ಉನ್ನತ ಹುದ್ದೆ ನೀಡಿರುವುದು ಶ್ಲಾಘನೀಯ ಎಂದರು.
‘ರಾಜ್ಯ ಮತ್ತು ದೇಶದಲ್ಲಿ ರಾಮನ ಹೆಸರಿನಲ್ಲಿ ರಾವಣರು ಆಳ್ವಿಕೆ ಮಾಡುತ್ತಿದ್ದು, ಹಿಂದೂ ಹೆಸರಿನಲ್ಲಿ ಒಡೆದು ಆಳುತ್ತಿರುವ ಬಿಜೆಪಿ ಸರ್ಕಾರದಿಂದ ದೇಶಕ್ಕೆ ಗಂಡಾಂತರ ಕಾದಿದೆ’ ಎಂದರು.
ಕಾಂಗ್ರೆಸ್ ಪಕ್ಷವನ್ನು ಬಲಿಷ್ಠಗೊಳಿಸುವಲ್ಲಿ ನಿಟ್ಟಿನಲ್ಲಿ ಯುವ ಸಮೂಹ ಮುಂದಾಗಬೇಕು ಎಂದು ಸಲಹೆ ನೀಡಿದರು.
ಕಮಿಷನ್ ಹೆಸರಿನಲ್ಲಿ ಅಮಾಯಕ ಗುತ್ತಿಗೆದಾರ ಸಂತೋಷ್ ಪಾಟೀಲ ಅವರ ಆತ್ಮಹತ್ಯೆ ಸಂಬಂಧ ಕೆ.ಎಸ್. ಈಶ್ವರಪ್ಪ ಅವರನ್ನು ಬಂಧಿಸಬೇಕು ಸರ್ಕಾರ ಹಿಂದೇಟು ಹಾಕಿದಲ್ಲಿ ಕಾಂಗ್ರೆಸ್ ಪ್ರತಿಭಟನೆ ನಡೆಸಲಿದೆ ಎಂದು ಎಚ್ಚರಿಸಿದರು.
ಅಭಿನಂದನೆ ಸ್ವೀಕರಿಸಿದ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕಲಗೋಡು ರತ್ನಾಕರ, ‘ರಾಜಕೀಯ ನಿಂತ ನೀರಾಗದೆ ಹರಿಯುವ ನೀರಾಗಲಿ.ಪಕ್ಷ ನೀಡಿದ ಹುದ್ದೆಯನ್ನು ಸಮರ್ಪಕವಾಗಿ ನಿರ್ವಹಿಸುವ ಮೂಲಕ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ’ ಎಂದು ತಿಳಿಸಿದರು.
ಕಾಂಗ್ರೆಸ್ ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಜಿ. ನಾಗರಾಜ್, ಕೋಣಂದೂರು ಬ್ಲಾಕ್ ಅಧ್ಯಕ್ಷ ಮುಡುಬ ರಾಘವೇಂದ್ರ, ಎಐಸಿಸಿ ಸಮಿತಿಯ ಆದರ್ಶ,ಮುಖಂಡರಾದ ಬಿ.ಜೆ. ಚಂದ್ರಮೌಳಿ ಗೌಡ, ಬಿ.ಪಿ. ರಾಮಚಂದ್ರ ಬಂಡಿ, ಎನ್.ಇ.ಎಸ್. ಸಂಸ್ಥೆಯ ಅಧ್ಯಕ್ಷ ನಾರಾಯಣರಾವ್, ಹುಂಚ ಘಟಕದ ಅಧ್ಯಕ್ಷ ಗುರುರಾಜ ಸುಣ್ಣಕಲ್, ಕೆ.ವೈ. ಜಯವಂತ್, ವಾಸುದೇವ್, ಸುಬ್ರಹ್ಮಣ್ಯ, ಬಿ.ಎಸ್.ಈಶ್ವರಪ್ಪಗೌಡ, ಅಮ್ರಪಾಲಿ ಸುರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.