ADVERTISEMENT

ಶಿವಮೊಗ್ಗ | ಮತಗಳ್ಳತನದ ವಿರುದ್ಧ ಜಾಗೃತಿ ಆರಂಭ: ಆರ್. ಪ್ರಸನ್ನಕುಮಾರ್

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 6:30 IST
Last Updated 19 ಸೆಪ್ಟೆಂಬರ್ 2025, 6:30 IST
ಆರ್. ಪ್ರಸನ್ನಕುಮಾರ್
ಆರ್. ಪ್ರಸನ್ನಕುಮಾರ್   

ಶಿವಮೊಗ್ಗ: ಮತಗಳ್ಳತನದ ವಿರುದ್ಧ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ಸೆ.15ರಿಂದ ಪಕ್ಷದ ಅಭಿಯಾನ ಬೂತ್ ಮಟ್ಟದಲ್ಲಿ ಆರಂಭವಾಗಿದ್ದು, ಅಕ್ಟೋಬರ್ 15ರವರೆಗೆ ನಡೆಯಲಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಹೇಳಿದರು.

ನಗರದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಅಕ್ಟೋಬರ್ 22ರಂದು ಶಿವಮೊಗ್ಗದ ಖಾಸಗಿ ಬಸ್ ನಿಲ್ದಾಣದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ‍್ಪ ಸಾರ್ವಜನಿಕರಿಂದ ಸಹಿ ಸಂಗ್ರಹಿಸುವ ಮೂಲಕ ಅಭಿಯಾನಕ್ಕೆ ಚಾಲನೆ ನೀಡಲಿದ್ದಾರೆ ಎಂದರು.

ರಾಷ್ಟದ ಹಲವು ಕಡೆ ಮತ ಕಳುವಿನ ಬಗ್ಗೆ ಎಐಸಿಸಿ ನಾಯಕ ರಾಹುಲ್‌ಗಾಂಧಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಹಲವೆಡೆ ಮತದಾರರ ಹೆಸರನ್ನು ಪಟ್ಟಿಯಿಂದ ಕೈಬಿಟ್ಟಿರುವುದು ಕಂಡು ಬಂದಿದೆ. ಗ್ರಾಮೀಣ ಪ್ರದೇಶಕ್ಕಿಂತ ನಗರದ ಪ್ರದೇಶದಲ್ಲಿ ಇದು ಹೆಚ್ಚಾಗಿದೆ. ಈ ಬಗ್ಗೆ ಸಾರ್ವಜನಿಕರು ಜಾಗೃತಿ ವಹಿಸಲು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲೆಯ 14 ಬ್ಲಾಕ್ ಕಾಂಗ್ರೆಸ್ ಸಮಿತಿಗಳ ಮೂಲಕ ಅಭಿಯಾನ ನಡೆಸಲಿದೆ ಎಂದರು.

ADVERTISEMENT

‍‍ಪಕ್ಷದ ಬೂತ್‌ಮಟ್ಟದ ನಾಯಕರು ಮತಪಟ್ಟಿಯನ್ನು ಪಡೆದು ಪರಿಶೀಲಿಸಬೇಕು. ವ್ಯತ್ಯಾಸಗಳಿದ್ದರೆ ಬಿಎಲ್‌ಒ ಗಮನಕ್ಕೆ ತಂದು ಸರಿಪಡಿಸಬೇಕು. ಈ ಬಗ್ಗೆ ಮಾಹಿತಿ ನೀಡಲು ಈಗಾಗಲೇ ಹಲವು ಬ್ಲಾಕ್ ಸಮಿತಿ ಸಭೆ ನಡೆಸಿದ್ದೇವೆ ಎಂದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕಲೀಂಪಾಷಾ, ಶಿವಕುಮಾರ್, ಪ್ರಮುಖರಾದ ಶಿವಣ್ಣ, ಮಂಜುನಾಥ್ ಬಾಬು, ಅರ್ಚನಾ ನಿರಂಜನ, ನಳಿನಿ, ಪವನ್‌ಕುಮಾರ್, ಯು. ಶಿವಾನಂದ್, ಸೈಯದ್ ವಾಹಿದ್ ಅಡ್ಡು ಉಪಸ್ಥಿತರಿದ್ದರು.

ಭಾರತ-ಪಾಕಿಸ್ತಾನದ ನಡುವೆ ಈಗ ಕ್ರಿಕೆಟ್ ಆಡಿಸುವ ಅಗತ್ಯವೇನಿತ್ತು. ಅಮಿತ್‌ ಶಾ ಪುತ್ರ ಬಿಸಿಸಿಐ ಅಧ್ಯಕ್ಷ ಜಯ್ ಶಾ ಭಾರತ ತಂಡದ ಆಟಗಾರರ ಮೇಲೆ ಒತ್ತಡ ಹಾಕಿ ಆಟ ಆಡಿಸಿದ್ದಾರೆ.
ಆರ್.ಪ್ರಸನ್ನಕುಮಾರ್ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ
ವಿಮಾನ ನಿಲ್ದಾಣಕ್ಕೆ ₹6.5 ಕೋಟಿ ಬಿಡುಗಡೆ
ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ನೈಟ್‌ ಲ್ಯಾಂಡಿಂಗ್ ವ್ಯವಸ್ಥೆಯ ಉಪಕರಣಗಳ ಅಳವಡಿಕೆಗೆ ಅಗತ್ಯವಿರುವ ₹6.5 ಕೋಟಿ ಹಣವನ್ನು ರಾಜ್ಯ ಸರ್ಕಾರ ಬಿಡುಗಡೆ ಮಾಡಿದೆ ಎಂದು ಪ್ರಸನ್ನಕುಮಾರ್ ಹೇಳಿದರು. ವಿಮಾನ ನಿಲ್ದಾಣದ ನಿರ್ವಹಣೆ ಹೊಣೆ ರಾಜ್ಯ ಸರ್ಕಾರಕ್ಕೆ ವಹಿಸಿ ತಪ್ಪು ಮಾಡಿದ್ದೇವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಅರ್ಥವಿಲ್ಲದ ಮಾತು ಆಡಿದ್ದಾರೆ. ಅವರಿಗೆ ಗೊತ್ತಿರಲಿ. ವಿಮಾನ ನಿಲ್ದಾಣ ರಾಜ್ಯ ಸರ್ಕಾರದ ಹಣದಲ್ಲಿ ಕಟ್ಟಲಾಗಿದೆ ಹೊರತು ಅವರ ಮನೆಯಿಂದ ದುಡ್ಡು ತಂದು ಕಟ್ಟಿಲ್ಲ. ರಾಜ್ಯ ಸರ್ಕಾರಕ್ಕೆ ಬಿಟ್ಟುಕೊಡದೆ ಅವರೇನು ತಮ್ಮ ಜೇಬಿನಲ್ಲಿಟ್ಟುಕೊಳ್ಳುತ್ತಿದ್ದಾರಾ ಎಂದು ಟೀಕಿಸಿದರು. ಡಿಸಿಎಂ ಆಗಿದ್ದಾಗ ರಾಯಣ್ಣ ಬ್ರಿಗೇಡ್‌ ಮೂಲಕ ಕುರುಬ ಸಮಾಜಕ್ಕೆ ಎಸ್‌ಟಿ ಮೀಸಲಾತಿ ಕೊಡಿಸುವುದಾಗಿ ಓಡಾಡಿ ಏನೂ ಮಾಡದ ಡಿಸಿಎಂ ಕೆ.ಎಸ್.ಈಶ್ವರಪ್ಪ‌ ಜಾತಿ ಗಣತಿ ಹಿಂದೂ ಸಮಾಜ ಒಡೆಯುವ ಕೆಲಸ ಎಂದು ಅರ್ಥವಿಲ್ಲದ ಮಾತನಾಡುತ್ತಿದ್ದಾರೆ ಎಂದು ಪ್ರಸನ್ನಕುಮಾರ್ ಛೇಡಿಸಿದರು. ಏನಾದರೂ ಒಳ್ಳೆಯ ಕೆಲಸ ಮಾಡಬೇಕು ಎಂದಾಗ ಈಶ್ವರಪ್ಪನವರದ್ದು ಅಡ್ಡಮಾತು ಇದ್ದೇ ಇರುತ್ತದೆ. ಸಿದ್ಧರಾಮಯ್ಯ ಅವರಿಗೆ ಬೈದರೆ ಮಾತ್ರ ರಾಜಕೀಯದಲ್ಲಿ ಚಾಲ್ತಿಯಲ್ಲಿರಬಹುದು ಅಂದು ಕೊಂಡಿದ್ದಾರೆ ಎಂದು ವ್ಯಂಗ್ಯವಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.