
ಶಿವಮೊಗ್ಗ: ‘ರಾಷ್ಟ್ರೀಯ ವೃದ್ಯಾಪ್ಯ ಪಿಂಚಣಿ ಯೋಜನೆ, ರಾಷ್ಟ್ರೀಯ ಕುಡಿಯುವ ನೀರಿನ ಮಿಷನ್, ಕುಟೀರ ಜ್ಯೋತಿ ಯೋಜನೆ ಸೇರಿದಂತೆ 450ಕ್ಕೂ ಹೆಚ್ಚು ಸರ್ಕಾರಿ ಯೋಜನೆಗಳಿಗೆ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಹೆಸರು ಇಡುವಾಗ ಕಾಂಗ್ರೆಸ್ ಪಕ್ಷಕ್ಕೆ ಮಹಾತ್ಮ ಗಾಂಧೀಜಿ ನೆನಪಾಗಿರಲಿಲ್ಲ. ಈಗ ನರೇಗಾ ವಿಚಾರದಲ್ಲಿ ಏಕಾಏಕಿ ದಿಢೀರ್ ಪ್ರೀತಿ ಬಂದು ಬಿಟ್ಟಿದೆ’ ಎಂದು ಸಂಸದ ಬಿ.ವೈ.ರಾಘವೇಂದ್ರ ವ್ಯಂಗ್ಯವಾಡಿದರು.
’ವಿಬಿ-ಜಿ ರಾಮ್ ಜಿ’ಯ ಸಂಕೇತಾಕ್ಷರದಲ್ಲಿ (ಅಬ್ರಿವೇಶನ್) ರಾಮನ ಹೆಸರು ಬಂದಿರುವುದಕ್ಕೆ ಕಾಂಗ್ರೆಸ್ನವರಿಗೆ ಸಹಿಸಿಕೊಳ್ಳಲು ಆಗುತ್ತಿಲ್ಲ. ಮಹಾತ್ಮಗಾಂಧೀಜಿ ಈಗ ಬದುಕಿದ್ದರೆ ಕಾಂಗ್ರೆಸ್ನವರು ಧೋರಣೆಯನ್ನು ವಿರೋಧಿಸುತ್ತಿದ್ದರು. ಏಕೆಂದರೆ ಅವರಿಗೆ ‘ರಘುಪತಿ ರಾಘವ ರಾಜಾರಾಂ’ ವಾಕ್ಯವೇ ಬೀಜ ಮಂತ್ರವಾಗಿತ್ತು ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.
ಕೇಂದ್ರ ಸರ್ಕಾರದ ‘ವಿಬಿ-ಜಿ ರಾಮ್ಜಿ’ ಯೋಜನೆಯು ವಿಕಸಿತ ಭಾರತದೆಡೆಗೆ ದೇಶದ ದಿಟ್ಟಹೆಜ್ಜೆಯಾಗಿದೆ. ಕಾಂಗ್ರೆಸ್ ಪಕ್ಷದವರು ಅದಕ್ಕೆ ರಾಜಕೀಯ ಬಣ್ಣ ಬೆರೆಸಬಾರದು ಎಂದು ಹೇಳಿದ ಬಿ.ವೈ.ರಾಘವೇಂದ್ರ, ಈ ಹಿಂದೆ ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿದ್ದ ನರೇಗಾದಲ್ಲಿದ್ದ ಲೋಪದೋಷಗಳ ಸರಿಪಡಿಸಿ ಅದನ್ನು ಇನ್ನಷ್ಟು ಗ್ರಾಮೀಣರ ಸ್ನೇಹಿಯಾಗಿಸಿ`ವಿಬಿ-ಜಿ ರಾಮ್ ಜಿ’ ಕಾಯ್ದೆ ಕೇಂದ್ರ ಸರ್ಕಾರ ಜಾರಿ ಮಾಡಿದೆ. ಆದರೆ ರಾಜಕೀಯ ಕಾರಣಕ್ಕಾಗಿ ಕಾಂಗ್ರೆಸ್ನವರು ವಿರೋಧಿಸುತ್ತಿರುವುದು ಅವರ ಬೌದ್ಧಿಕ ದಿವಾಳಿತನಕ್ಕೆ ಸಾಕ್ಷಿ ಎಂದು ಟೀಕಿಸಿದರು.
ಎನ್ಆರ್ಜಿಎ 2004ರಲ್ಲಿ ಜಾರಿಗೆ ತಂದಿದ್ದ ಯುಪಿಎ ಸರ್ಕಾರ ಆರಂಭದಲ್ಲಿಯೇ ಅದಕ್ಕೆ ಮಹಾತ್ಮ ಗಾಂಧೀಜಿ ಹೆಸರು ಇಟ್ಟಿರಲಿಲ್ಲ. 2009ರ ಲೋಕಸಭಾ ಚುನಾವಣೆಯಲ್ಲಿ ಲಾಭ ಪಡೆಯಲು ಆ ಹೆಸರನ್ನು ಸೇರಿಸಲಾಯಿತು. ಕಾಂಗ್ರೆಸ್ ಆಡಳಿತದಲ್ಲಿದ್ದಾಗ ಸರ್ಕಾರಿ ಯೋಜನೆಗಳಿಗೆ ಅದೇ ಪಕ್ಷದ ನಾಯಕರ ಹೆಸರು ಇಟ್ಟಿದೆ. ಆದರಲ್ಲೂ ಮುಖ್ಯವಾಗಿ ಜವಾಹರಲಾಲ್ ನೆಹರೂ, ಇಂದಿರಾಗಾಂಧಿ ಮತ್ತು ರಾಜೀವ್ಗಾಂಧಿಯವರ ಹೆಸರನ್ನೇ ಇತಿಹಾಸದುದ್ದಕ್ಕೂ ಮರು ಸೃಷ್ಟಿಸಿದೆ ಎಂದು ಟೀಕಿಸಿದರು.
ಅಷ್ಟಕ್ಕೂ ವಿಬಿಜಿ ರಾಮ್-ಜಿ ಕಾಯ್ದೆಯಲ್ಲಿ ಹಲವು ಒಳ್ಳೆಯ ಅಂಶಗಳ ಸೇರಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆ ಭ್ರಷ್ಟಾಚಾರದ ಕೂಪವಾಗಿತ್ತು. ಹೊಸ ಕಾಯ್ದೆ ಪ್ರಕಾರ ಅದಕ್ಕೆ ಕಡಿವಾಣ ಹಾಕಲಾಗಿದೆ. ಬಡವರಿಗೆ ಕೆಲಸ ಕೊಡುವ ಬದಲು ಜೆಸಿಬಿ ಬಳಸಿ ಕಾಮಗಾರಿ ಮಾಡುತ್ತಿದ್ದರು. ಬಡವರ ಕೈಗೆ ಹಣ ಸೇರುತ್ತಿರಲಿಲ್ಲ. ಮಧ್ಯವರ್ತಿಗಳೇ ಹಣ ನುಂಗುತ್ತಿದ್ದರು. ಹೊಸ ಕಾಯ್ದೆಯಲ್ಲಿ ಇದೆಲ್ಲದ್ದಕ್ಕೂ ಕಡಿವಾಣ ಹಾಕಲಾಗಿದೆ. ಇನ್ನು ಹಣ ನೇರವಾಗಿ ದುಡಿಯುವವರ ಕೈಗೆ ಸಿಗುತ್ತದೆ ಎಂದು ಹೇಳಿದರು.
ನೂತನ ಕಾಯ್ದೆಯಡಿ ಕೃಷಿ ಋತುವಿನಲ್ಲಿ ಕಾರ್ಮಿಕರಿಗೆ 60 ದಿನಗಳ ವಿರಾಮ ಕಡ್ಡಾಯವಾಗಿದೆ. ಇದರಿಂದ ಕೃಷಿ ಕೆಲಸ ಮಾಡಿಕೊಳ್ಳಲು ಅವರಿಗೆ ಸಹಾಯಕವಾಗುತ್ತದೆ. ಒಂದು ಪಕ್ಷ ಕೆಲಸ ಸಿಗದಿದ್ದರೆ ಅವರಿಗೆ ನಿರುದ್ಯೋಗ ಭತ್ಯೆಯನ್ನು ಕೂಡ ನೀಡಲಾಗುವುದು ಎಂದು ಸ್ಪಷ್ಟನೆ ನೀಡಿದರು.
ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಕೆ. ಜಗದೀಶ್, ಶಾಸಕರಾದ ಎಸ್.ಎನ್. ಚನ್ನಬಸಪ್ಪ, ಡಾ.ಧನಂಜಯ ಸರ್ಜಿ, ಪ್ರಮುಖರಾದ ಮಾಲತೇಶ್, ಹರಿಕೃಷ್ಣ, ಶಿವರಾಜ್, ರಾಜೇಶ್ ಕಾಮತ್, ಎ.ಮಂಜುನಾಥ್ , ಮಲ್ಲಿಕಾರ್ಜುನ ಹಕ್ರೆ, ಎಸ್. ಚಂದ್ರಶೇಖರ್ ಇದ್ದರು.
ವಿಬಿ–ಜಿ–ರಾಮ್ ಜಿಯಲ್ಲಿ ಉದ್ಯೋಗದ ಖಾತರಿ ಅವಧಿಯನ್ನು 100 ರಿಂದ 125 ದಿನಗಳಿಗೆ ಹೆಚ್ಚಿಸಲಾಗಿದೆ. ಕಾಂಗ್ರೆಸ್ನವರು ಆರೋಪಿಸುವಂತೆ ಯಾವುದೇ ಕಾರಣಕ್ಕೂ ಗ್ರಾಮ ಪಂಚಾಯ್ತಿಯ ಅಧಿಕಾರವನ್ನು ಮೊಟಕುಗೊಳಿಸುವುದಿಲ್ಲಬಿ.ವೈ.ರಾಘವೇಂದ್ರ, ಶಿವಮೊಗ್ಗ ಸಂಸದ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.