ಶಿವಮೊಗ್ಗ: ಜಿಲ್ಲೆಯಲ್ಲಿ ಮಂಗಳವಾರ ಒಂದೇ ದಿನ 10 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, ಕೋವಿಡ್ ರೋಗಿಗಳ ಸಂಖ್ಯೆ 24ಕ್ಕೇರಿದೆ. ಇಬ್ಬರ ಸೋಂಕಿನ ಮೂಲ ಪತ್ತೆಗೆಜಿಲ್ಲಾಡಳಿತ ಇಡೀ ದಿನ ಹರಸಾಹಸ ಮಾಡಿದೆ.
10 ಕೋವಿಡ್ ಪೀಡಿತರಲ್ಲಿ ಐವರು ಮುಂಬೈನಿಂದ, ಇಬ್ಬರು ಕೇರಳದಿಂದ, ಒಬ್ಬರು ಆಂಧ್ರ ಪ್ರದೇಶದಿಂದ ಬಂದವರು. ಇಬ್ಬರಿಗೆಪ್ರಯಾಣದ ಇತಿಹಾಸ ಇಲ್ಲದಿದ್ದರೂ ಸೋಂಕು ಹರಡಿರುವುದು ಜಿಲ್ಲೆಯ ಜನರಲ್ಲಿ ಆತಂಕ ಮೂಡಿಸಿದೆ.
ಸೋಂಕಿತರಲ್ಲಿ ಐವರು ಪುರುಷರು, ಇಬ್ಬರು ಮಹಿಳೆಯರು, ಇಬ್ಬರು ಬಾಲಕರು, ಒಬ್ಬ ಬಾಲಕಿ ಇದ್ದಾರೆ. ಎಲ್ಲರೂ ಕೋವಿಡ್ ರೋಗಿಗಳ ಸಂಖ್ಯೆ ಪಿ–1297ರಿಂದ ಪಿ–1305 ಹಾಗೂ ಪಿ–1308 ಸಂಖ್ಯೆ ನೀಡಲಾಗಿದೆ. 63 ವರ್ಷದ ಪುರುಷ ಹೊರತುಪಡಿಸಿದರೆ ಉಳಿದವರು 20ರಿಂದ 39 ವರ್ಷ ಒಳಗಿನವರು. ನಾಲ್ವರು ತೀರ್ಥಹಳ್ಳಿ, ಇಬ್ಬರು ಶಿವಮೊಗ್ಗ ನಗರ, ಇಬ್ಬರು ಶಿವಮೊಗ್ಗ ತಾಲ್ಲೂಕು ಹಾಗೂ ತಲಾ ಒಬ್ಬರು ತೀರ್ಥಹಳ್ಳಿ, ಹೊಸನಗರ ತಾಲ್ಲೂಕಿನವರು.
ಇಬ್ಬರ ಮೂಲವೇ ಪತ್ತೆಯಾಗಿಲ್ಲ:ಶಿವಮೊಗ್ಗ ತಾಲ್ಲೂಕು ಬಾಳೆಕೊಪ್ಪದ 63 ವರ್ಷದ ಪುರುಷ ಹಾಗೂ ಶಿಕಾರಿಪುರ ತಾಲ್ಲೂಕು ತರಲಘಟ್ಟದ 15ರ ಬಾಲಕಿ ಸೋಂಕಿನ ಮೂಲ ಪತ್ತೆಯಾಗಿಲ್ಲ.ಇದೇ ಮೊದಲ ಬಾರಿ ಪ್ರಯಾಣದ ಇತಿಹಾಸ ಇಲ್ಲದ ಇಬ್ಬರಿಗೆ ಜಿಲ್ಲೆಯಲ್ಲಿ ಸೋಂಕು ತಗುಲಿರುವುದು ಸಮುದಾಯಕ್ಕೆ ಹಬ್ಬಿರುವ ಶಂಕೆಗೆ ದಾರಿ ಮಾಡಿಕೊಟ್ಟಿದೆ. ಮೂಲ ಪತ್ತೆಗೆ ಸ್ವತಃ ಜಿಲ್ಲಾಧಿಕಾರಿ ಎರಡು ಗ್ರಾಮಗಳಿಗೆ ಭೇಟಿ ನೀಡಿ ಮಾಹಿತಿ ಕಲೆಹಾಕಿದರು.ಬಾಳೆಕೊಪ್ಪ, ತರಲಘಟ್ಟ ಹಾಗೂ ತೀರ್ಥಹಳ್ಳಿಯಮೂರು ಗ್ರಾಮಗಳನ್ನುಕಂಟೈನ್ಮೆಂಟ್ ಜೋನ್ಗಳಾಗಿಪರಿವರ್ತಿಸಲಾಗಿದೆ.
ನಗರಕ್ಕೂ ಆತಂಕ ತಂದ ಬಾಳೆಕೊಪ್ಪ:ಬಾಳೆಕೊಪ್ಪದ ಪಿ–1305 ಸಂಖ್ಯೆಯ ರೋಗಿ ಎಲ್ಲೂ ಪ್ರಯಾಣ ಮಾಡಿದ ಮಾಹಿತಿ ಇಲ್ಲ. ಆದರೂ, ಕೊರೊನಾ ಪಾಸಿಟಿವ್ ಬಂದಿದೆ. ಅವರ ಪುತ್ರ ಶಿವಮೊಗ್ಗದ ಮೋರ್ನಲ್ಲಿ ಕೆಲಸ ಮಾಡುತ್ತಿದ್ದ. ಅವನನ್ನೂ ಕ್ವಾರಂಟೈನ್ಗೆ ಒಳಪಡಿಸಲಾಗಿದೆ. ಮೋರ್ಗೆ ಸಾಮಗ್ರಿ ಖರೀದಿಸಲು ತೆರಳಿದ್ದ ಎಲ್ಲರಿಗೂ ಕರೆ ಮಾಡಿ ವಿಷಯ ತಿಳಿಸಲಾಗಿದೆ. 14 ದಿನ ಮನೆಯಲ್ಲೇ ಕ್ವಾರಂಟೈನ್ನಲ್ಲಿ ಇರುವಂತೆ ಮನವಿ ಮಾಡಲಾಗಿದೆ. ಕುಂಸಿ ಸಮೀಪದ ಬಾಳೆಕೊಪ್ಪದ ಈ ಪ್ರಕರಣ ನಗರದ ಜನರಲ್ಲೂ ನಡುಕ ಹುಟ್ಟಿಸಿದೆ.
ಇದೇ ಮೊದಲ ಬಾರಿ ನಗರಕ್ಕೂ ಸೋಂಕು:ನಗರ ಪಾಲಿಕೆ ವ್ಯಾಪ್ತಿಯ ಊರುಗಡೂರಿನ ಇಬ್ಬರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಅವರು ಮುಂಬೈನಿಂದ ನಗರಕ್ಕೆ ಬಂದಿದ್ದು ಕ್ವಾರಂಟೈನ್ಗೆ ಒಳಪಡಿಸಲಾಗಿತ್ತು. ತಾಲ್ಲೂಕಿನತಮ್ಮಡಿಹಳ್ಳಿ ಸಮೀಪದ ಕೂಡಿಗ್ರಾಮದ ಒಬ್ಬರಿಗೆ ಪಾಸಿಟಿವ್ ಬಂದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.