ADVERTISEMENT

ಕೋವಿಡ್‌ ಗುಣಪಡಿಸುವ ಫಾರ್ಮುಲಾ ಸರ್ಕಾರಕ್ಕೆ: ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ

ಯಾವುದೇ ಪ್ರತಿಫಲವಿಲ್ಲದೇ ನೀಡುವುದಾಗಿ ಘೋಷಣೆ

​ಪ್ರಜಾವಾಣಿ ವಾರ್ತೆ
Published 29 ಜುಲೈ 2020, 16:50 IST
Last Updated 29 ಜುಲೈ 2020, 16:50 IST
ಶಿವಮೊಗ್ಗದಲ್ಲಿ ಬುಧವಾರ ಕೋವಿಡ್ ಸುರಕ್ಷಾ ಪಡೆ ಆಯೋಜಿಸಿದ್ದ ರೋಗ ನಿರೋಧಕ ಆಯುರ್ವೇದಿಕ್  ಕಿಟ್‌ಗಳ ಉಚಿತ ವಿತರಣೆ ಕಾರ್ಯಕ್ರಮವನ್ನು ಡಾ.ಗಿರಿಧರ ಕಜೆ ಉದ್ಘಾಟಿಸಿದರು.
ಶಿವಮೊಗ್ಗದಲ್ಲಿ ಬುಧವಾರ ಕೋವಿಡ್ ಸುರಕ್ಷಾ ಪಡೆ ಆಯೋಜಿಸಿದ್ದ ರೋಗ ನಿರೋಧಕ ಆಯುರ್ವೇದಿಕ್  ಕಿಟ್‌ಗಳ ಉಚಿತ ವಿತರಣೆ ಕಾರ್ಯಕ್ರಮವನ್ನು ಡಾ.ಗಿರಿಧರ ಕಜೆ ಉದ್ಘಾಟಿಸಿದರು.   

ಶಿವಮೊಗ್ಗ: ಕೋವಿಡ್‌ ಗುಣಪಡಿಸಲು ತಾವು ಸಂಯೋಜಿಸಿರುವ ಔಷಧ ಫಾರ್ಮುಲಾವನ್ನು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೇ ಸರ್ಕಾರಕ್ಕೆ ನೀಡಲು ಸಿದ್ಧ ಎಂದು ಆಯುರ್ವೇದ ತಜ್ಞ ಡಾ.ಗಿರಿಧರ ಕಜೆ ಹೇಳಿದರು.

ಶಿವಮೊಗ್ಗದ ಹೋಟೆಲ್‌ ಹರ್ಷ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಪತ್ರಕರ್ತರ ಜತೆಗಿನ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಹಲವು ವೈರಸ್‌ಗಳು ಸೃಷ್ಟಿಸುವ ಕಾಯಿಲೆಗಳಿಗೆ20 ವರ್ಷಗಳಿಂದ ಔಷಧ ನೀಡುತ್ತಾ ಬರಲಾಗಿದೆ. ಅದೇ ಫಾರ್ಮುಲಾ ಬಳಸಿ ತಾವು ರೂಪಿಸಿದ ಸಂಯೋಜನೆಯು ಕೊರೊನಾ ವೈರಸ್‌ ವಿರುದ್ಧ ಉತ್ತಮ ಫಲಿತಾಂಶ ನೀಡಿದೆ. ಈಗಾಗಲೇ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ರೋಗಿಗಳ ಮೇಲೆ ಪ್ರಯೋಗ ನಡೆಸಿದ್ದೇವೆ. ಸಂಪೂರ್ಣ ಯಶಸ್ಸು ಸಿಕ್ಕಿದೆ. ಸರ್ಕಾರ ಬಯಸಿದರೆ ಈ ಫಾರ್ಮುಲಾ ನೀಡುವೆನು. ಬೇರೆ ಕಂಪನಿಗಳಿಗೂ ಈ ಔಷಧ ತಯಾರಿಸಲು ಅದನ್ನು ಬಳಸಿಕೊಳ್ಳಬಹುದು ಎಂದರು.

ADVERTISEMENT

ಅಲೋಪತಿಗಿಂತ ಆಯುರ್ವೇದದಲ್ಲಿ ಕೊರೊನಾ ವೈರಸ್‌ ಸೇರಿದಂತೆ ವಿವಿಧ ಸಾಂಕ್ರಾಮಿಕ ರೋಗಗಳನ್ನುಗುಣಪಡಿಸುವಅಂಶಗಳು ಇವೆ. ಕೋವಿಡ್‌ ರೋಗಿಗಳಲ್ಲಿ ಶೇ 80ರಷ್ಟು ರೋಗ ಲಕ್ಷಣಗಳೇ ಇಲ್ಲ. ರೋಗ ಲಕ್ಷಣಗಳು ಇದ್ದವರಲ್ಲೂ ಅಪಾಯ ಎದುರಿಸವವರು ಶೇ 2ರಿಂದ 3ರಷ್ಟು ಜನರು ಮಾತ್ರ. ಹಾಗಾಗಿ, ಕೊರೊನಾ ಒಂದು ನಿಶ್ಯಕ್ತ ವೈರಸ್‌. ಹಾಗಂತ ನಿರ್ಲಕ್ಷಿಸಲು ಆಗದು. ರೋಗ ಬರುವ ಮುನ್ನವೇ ರೋಗ ನಿರೋಧಕ ಔಷಧ ತೆಗೆದುಕೊಂಡರೆ ಉತ್ತಮ ಎಂದು ಸಲಹೆ ನೀಡಿದರು.

ವಿಶ್ವದಲ್ಲೇ ಅತಿ ಹೆಚ್ಚು ರೋಗ ನಿರೋಧಕ ಶಕ್ತಿ ಹೊಂದಿದವರು ಭಾರತೀಯರು. ಹಾಗಾಗಿಯೇ ಭಾರತದಲ್ಲಿ ಸಾವಿನ ಪ್ರಮಾಣ ಅತ್ಯಂತ ಕಡಿಮೆ ಇದೆ. ಮಲೆರಿಯಾ, ಡೆಂಗೆ, ಚಿಕುನ್‌ಗುನ್ಯಾ, ಕ್ಷಯ ಮತ್ತಿತರ ಕಾಯಿಲೆಗಳಿಗೆ ಹೋಲಿಸಿದರೆ ಕೊರೊನಾದಿಂದ ಅಪಾಯ ಕಡಿಮೆ. ವಿಶ್ವದಲ್ಲಿ ಪ್ರತಿ ವರ್ಷ 15 ಲಕ್ಷ ಜನರು ಕ್ಷಯದಿಂದ ಮೃತರಾಗುತ್ತಾರೆ. ಇದುವರೆಗೂ ಅಲೋಪತಿಯಲ್ಲಿ ಖಚಿತ ಔಷಧ ಸಿದ್ಧಪಡಿಸಲು ಸಾಧ್ಯವಾಗಿಲ್ಲ ಎಂದು ವಿವರ ನೀಡಿದರು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್.ಈಶ್ವರಪ್ಪ ಮಾತನಾಡಿ, ಕಜೆ ಅವರ ಪ್ರಯತ್ನ ಕೊರೊನಾ ರೋಗಿಗಳಿಗೆ ವರದಾನವಾಗಿದೆ. ರೋಗದ ವಿರುದ್ಧ ಅವರು ಸಿದ್ಧಪಡಿಸಿರುವ ಔಷಧಗಳಿಗೆ ಸರ್ಕಾರದ ಅನುಮತಿ ದೊರಕಿಸಲು ಪ್ರಯತ್ನಿಸಲಾಗುವುದು ಎಂದರು.

ಸಂವಾದಕ್ಕೂ ಮೊದಲು ಕೋಟೆ ರಸ್ತೆಯ ಆರ್‌ಎಸ್‌ಎಸ್‌ ಹಿರಿಯ ಸ್ವಯಂ ಸೇವಕ ನಾಗಭೂಷಣ ಭಟ್ಟರ ಕುಟುಂಬಕ್ಕೆ ಆಯುರ್ವೇದ ಕಿಟ್‌ ವಿತರಿಸುವ ಮೂಲಕ ಉಚಿತ ವಿತರಣಾ ಅಭಿಯಾನಕ್ಕೆ ಸಚಿವ ಈಶ್ವರಪ್ಪ ಚಾಲನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.