ಶಿವಮೊಗ್ಗ: ‘ಜಗತ್ತಿನಲ್ಲಿ ಸನಾತನ ಹಿಂದೂ ಧರ್ಮದ ಮೇಲಾದ ಆಕ್ರಮಣ, ಬೇರೆ ಯಾವುದೇ ಧರ್ಮ, ಮತ–ಪಂಥದ ಮೇಲೆ ಆಗಿಲ್ಲ. ಆದರೂ ಇದನ್ನೆಲ್ಲ ಮೆಟ್ಟಿ ನಿಲ್ಲಲಾಗಿದೆ. ಇಲ್ಲಿ ಗೋ ಸಂರಕ್ಷಣೆಗೆ ಬಲ ತುಂಬಬೇಕು’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಹೇಳಿದರು.
ಇಲ್ಲಿನ ಅಲ್ಲಮಪ್ರಭು (ಫ್ರೀಡಂ ಪಾರ್ಕ್) ಉದ್ಯಾನದಲ್ಲಿ ಬುಧವಾರ ಆಯೋಜಿಸಿದ್ದ ಗೋ ಸಂರಕ್ಷಣೆಯ ಉದ್ದೇಶದಿಂದಲೇ ಸ್ಥಾಪಿಸಿರುವ ಗೋವರ್ಧನ ಟ್ರಸ್ಟ್ ಉದ್ಘಾಟಿಸಿ ಅವರು ಮಾತನಾಡಿದರು.
‘ಗೋ ರಕ್ಷಣೆ ಎಲ್ಲರ ಜವಾಬ್ದಾರಿ ಆಗಬೇಕು. ಧರ್ಮದ ಉದ್ಧಾರಕ್ಕೆ ಎಲ್ಲರೂ ಕೈಜೋಡಿಸಬೇಕು. ಲೌಕಿಕ ದೃಷ್ಟಿಯಿಂದ ಗೋವಿನ ಸಂತತಿಗೆ ಬೆಲೆ ನೀಡಬೇಕು. ಈ ಬಗ್ಗೆ ಎಲ್ಲರೂ ಸಂಕಲ್ಪ ಮಾಡಬೇಕು. ತಂತ್ರಜ್ಞಾನ ಎಷ್ಟೇ ಮುಂದುವರಿದಿರಲಿ, ಗೋವನ್ನು ಪರಿವಾರ ಎನ್ನುವಂತೆ ಕಾಣಬೇಕು. ಗೋಹತ್ಯೆ ಮಹಾ ಪಾಪ. ಈ ಬಗ್ಗೆ ಕಠಿಣ ಕಾನೂನು ಜಾರಿಯಾಗಬೇಕು’ ಎಂದರು.
‘ರಾಜ್ಯದಲ್ಲಿ ಗೋ ರಕ್ಷಣೆಯೇ ನಮ್ಮೆಲ್ಲರ ಹೊಣೆ ಆಗಬೇಕು. ಗೋ ಹತ್ಯೆ ಮುಂದುವರೆಸಿದರೆ ಹಿಂದೂಗಳು ಸುಮ್ಮನಿರುವುದಿಲ್ಲ, ತೊಡೆತಟ್ಟಿ ಬರಬೇಕಾಗುತ್ತದೆ. ಕೆಲವರು ಹಸುವಿನ ಕೆಚ್ಚಲನ್ನೇ ಕೊಯ್ಯುತ್ತಿದ್ದಾರೆ. ಗೋವುಗಳನ್ನು ಕಸಾಯಿ ಖಾನೆಗೆ ಹಾಕುತ್ತಿದ್ದಾರೆ. ಇದು ಪರಿವರ್ತನೆ ಆಗಲೇ ಬೇಕು ಎಂದರು.
ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಅವರು ಗೋವರ್ಧನ ಟ್ರಸ್ಟ್ ಗೆ ₹3 ಲಕ್ಷ ದೇಣಿಗೆ ನೀಡಿದರು.
ಪ್ರಮುಖರಾದ ಕೆ.ಸಿ.ನಟರಾಜ ಭಾಗವತ್, ಎಚ್.ಎಸ್.ಶಿವಶಂಕರ್, ಎಚ್.ಎಸ್.ನಾಗರಾಜ, ಸಿ.ವಿ.ರುದ್ರರಾಧ್ಯ, ಮಹಾಲಿಂಗಶಾಸ್ತ್ರಿ, ಮೋಹನ್ ಜಾಧವ್, ಬಿ.ಎ.ರಂಗನಾಥ್, ವೆಂಕಟೇಶ್ ಮೂರ್ತಿ, ರಂಗನಾಥ, ಮೋಹನ್ ಜಾದವ್, ರಾಮ್ ಸ್ವರೂಪ್,ಎಸ್.ಕೆ.ಶೇಷಾಚಲ, ಇ.ವಿಶ್ವಾಸ್ ಇದ್ದರು.
ಬಿಡಾಡಿ ದನ–ಕರುಗಳು ಗೋ ಕಳ್ಳರಿಂದ ರಕ್ಷಿಸಲ್ಪಟ್ಟ ಗೋವು ಅಪಘಾತದಲ್ಲಿ ಗಾಯಗೊಂಡ ಗೋವುಗಳು ಸೇರಿಂದಂತೆ ವಿವಿಧ ರೀತಿಯಲ್ಲಿ ಗೋವುಗಳನ್ನು ಸಂರಕ್ಷಿಸಲು ಟ್ರಸ್ಟ್ ರಚಿಸಲಾಗಿದೆ.– ಕೆ.ಇ.ಕಾಂತೇಶ್, ಟ್ರಸ್ಟ್ ಅಧ್ಯಕ್ಷ
‘ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಿ’
‘ರಾಜ್ಯದಲ್ಲಿ ಗೋ ಹತ್ಯೆ ನಿಲ್ಲಬೇಕು. ಗೋವಿಗೆ ರಾಷ್ಟ್ರೀಯ ಸ್ಥಾನ ಸಿಗಬೇಕು. ತಾಯಿಯ ಸ್ವರೂಪವಾಗಿ ಗೋವನ್ನು ರಾಷ್ಟ್ರೀಯ ಪ್ರಾಣಿಯಾಗಿ ಘೋಷಿಸಬೇಕು’ ಎಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತಿ ಸ್ವಾಮೀಜಿ ಒತ್ತಾಯಿಸಿದರು.
‘ದೇಶದಲ್ಲಿ ಗೋಹತ್ಯೆ ನಡೆಯುತ್ತಿದ್ದರೂ ಪ್ರಾಣಿ ಪ್ರಿಯರು ತುಟಿ ಬಿಚ್ಚದೆ ಇರುವುದು ಕಳವಳ ಮೂಡಿಸುತ್ತದೆ. ಇವರು ನಾಯಿಗಳಿಗೆ ತೊಂದರೆ ಆಗುತ್ತಿದೆ ಎಂದಾಗ ಬೀದಿಗೆ ಇಳಿಯುತ್ತಾರೆ. ಆದರೆ ಗೋಹತ್ಯೆ ನಡೆಯುತ್ತಿದ್ದರೂ ಇವರಿಗೆ ಏನೂ ಅನಿಸದೆ ಇರುವುದು ಅಚ್ಚರಿ ಮೂಡಿಸುತ್ತದೆ. ಇವರು ಕೇವಲ ಶ್ವಾನ ಪ್ರಿಯರೇ ವಿನಃ ಪ್ರಾಣಿ ಪ್ರಿಯರಾಗಲು ಸಾಧ್ಯವಿಲ್ಲ’ ಎಂದರು.
ಗೋ ಶಾಲೆಗೆ ಮೇವು ಪೂರೈಕೆ
ನಗರದಲ್ಲಿ ಸುರಭಿ ಮಹಾವೀರ್ ಮತ್ತು ಜ್ಞಾನೇಶ್ವರಿ ಎಂಬ ಮೂರು ಗೋಶಾಲೆಗಳಿವೆ. ಇಲ್ಲಿ ಮೇವಿನ ಕೊರತೆ ಇದ್ದು ಈ ಗೋಶಾಲೆಗಳಿಗೆ ಮೇವು ಒದಗಿಸುವ ವ್ಯವಸ್ಥೆ ಮಾಡಲಾಗುತ್ತಿದೆ. ಅದೇ ರೀತಿ ಅಪಘಾತಕ್ಕೆ ಒಳಗಾದ ಗೋವುಗಳನ್ನು ಆಸ್ಪತ್ರೆಗೆ ಸೇರಿಸಲು ಅನುಕೂಲವಾಗುವಂತೆ ಹೈಡ್ರಾಲಿಕ್ ವ್ಯವಸ್ಥೆಯ ಆ್ಯಂಬುಲೆನ್ಸ್ ವಾಹನ ಖರೀದಿಸಲಾಗಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.