ಶಿಕಾರಿಪುರ: ತಾಲ್ಲೂಕಿನ ಹುಲುಗಿನಕಟ್ಟೆ ಗ್ರಾಮದಲ್ಲಿ ಸ್ಮಶಾನ ಜಾಗ ಕುರಿತ ವಿವಾದ ಬಗೆಹರಿಸುವಲ್ಲಿ ಅಧಿಕಾರಿಗಳು ವಿಫಲವಾಗಿದ್ದಾರೆ ಎಂದು ಆರೋಪಿಸಿ ಬುಧವಾರ ರಸ್ತೆಯಲ್ಲೆ ಶವವಿಟ್ಟು ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಗ್ರಾಮದ ಗಂಗೀಬಾಯಿ ಎಂಬುವರು ಬುಧವಾರ ಮೃತಪಟ್ಟಿದ್ದು, ಸ್ಮಶಾನ ಎಂದು ಗುರುತಿಸಿದ ಜಾಗದಯಲ್ಲಿ ಶವ ಸುಡುವುದಕ್ಕೆ ಹೋಗಿದ್ದಾರೆ. ಆದರೆ, ಅರಣ್ಯ ಸಿಬ್ಬಂದಿ ಅವಕಾಶ ನೀಡಿಲ್ಲ ಎಂದು ಆರೋಪಿಸಿದ ಗ್ರಾಮಸ್ಥರು ಹೊನ್ನಾಳಿ ಶಿಕಾರಿಪುರ ಮುಖ್ಯರಸ್ತೆಯಲ್ಲೆ ಶವ ಸುಡುವುದಕ್ಕೆ ಕಟ್ಟಿಗೆ ರಾಶಿಹಾಕಿ, ರಸ್ತೆತಡೆ ನಡೆಸಿ ಪ್ರತಿಭಟನೆ ಆರಂಭಿಸಿದರು.
ತಹಸೀಲ್ದಾರ್ ಮಂಜುಳಾ ಭಜಂತ್ರಿ, ವಲಯ ಅರಣ್ಯಾಧಿಕಾರಿ ರೇವಣಸಿದ್ದಯ್ಯ ಹಿರೇಮಠ ಸ್ಥಳಕ್ಕೆ ಆಗಮಿಸಿ ಸರ್ವೆ ನಂ. 90ರಲ್ಲಿ 450 ಎಕರೆ ಇದ್ದು 50ಎಕರೆ ಒತ್ತುವರಿಯಾಗಿದೆ. ಸ್ಮಶಾನಕ್ಕೆ ಗುರುತಿಸಿದ ಸ್ಥಳ ತೋಟ, ನೀಲಗಿರಿ ಪ್ಲಾಂಟೇಷನ್ ಇದ್ದು, ಅಲ್ಲಿ ಶವ ಸುಟ್ಟರೆ ಅರಣ್ಯ ನಾಶವಾಗುತ್ತದೆ. ಈ ಕಾರಣಕ್ಕೆ ಪುನಃ ಸರ್ವೆ ನಡೆಸಿ ಜಾಗೆ ಗುರುತಿಸುತ್ತೇವೆ. ಈಗ ಪ್ಲಾಂಟೇಷನ್ ಪಕ್ಕದಲ್ಲಿ ಶವ ಸಂಸ್ಕಾರ ನಡೆಸಿ ಎಂದು ಸೂಚನೆ ನೀಡಿದರು. ಶೀಘ್ರವೆ ಸೂಕ್ತ ಜಾಗೆ ನೀಡಬೇಕು ಎನ್ನುವ ಗ್ರಾಮಸ್ಥರ ಷರತ್ತಿನೊಂದಿಗೆ ವಿವಾದ ಅಂತ್ಯಗೊಂಡಿತು.
ನೂರಾರು ಗ್ರಾಮಸ್ಥರು ಅಧಿಕಾರಿಗಳ ನಡುವಿನ ಬಿರುಸಿನ ಮಾತುಕತೆಯಿಂದ ಕೆಲಕಾಲ ಉದ್ವಿಗ್ನ ಸ್ಥಿತಿ ನಿರ್ಮಾಣಗೊಂಡು, ಕೆಲಕಾಲ ವಾಹನ ಸಂಚಾರಕ್ಕೆ ಅಡಚಣೆ ಉಂಟಾಯಿತು.
ಗ್ರಾಮ ಪಂಚಾಯತಿ ಸದಸ್ಯರು ರವಿಕುಮಾರ್, ಗೋರ್ ಸೇನಾ ಜಿಲ್ಲಾ ಘಟಕ ಅಧ್ಯಕ್ಷ ಚಂದ್ರು ಎಸ್. ನಾಯ್ಕ್ , ಗಿರೀಶ್ನಾಯ್ಕ ಮುಖಂಡರಾದ ಚನ್ನೇಶ್ನಾಯ್ಕ, ಜಯಪ್ರಕಾಶನಾಯ್ಕ್, ಪೋಮ್ಯನಾಯ್ಕ್, ಮಲ್ಲಿಕಾರ್ಜುನ ಚಂದ್ರಾನಾಯ್ಕ್ ಷಣ್ಮುಖ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.