
ಭದ್ರಾವತಿ: ‘ಟಿಆರ್ಪಿ ಹೆಚ್ಚಿಸಿಕೊಳ್ಳುವ ಸ್ಪರ್ಧೆಯಲ್ಲಿ ಇಂದು ಅನೇಕ ಸುದ್ದಿ ವಾಹಿನಿಗಳು ಸಮಾಜದ ಮೂಲ ಮೌಲ್ಯಗಳನ್ನು ಮರೆತು ಸಂವೇದನಾರಹಿತ ಸುದ್ದಿಗಳ ಬೆನ್ನಟ್ಟುತ್ತಿವೆ’ ಎಂದು ಸರ್ಕಾರಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ ಆತಂಕ ವ್ಯಕ್ತಪಡಿಸಿದರು.
ಇಲ್ಲಿನ ವಿಐಎಸ್ಎಲ್ ಮೈದಾನದಲ್ಲಿ ನಡೆಯುತ್ತಿರುವ ತರಳಬಾಳು ಹುಣ್ಣಿಮೆ ಮಹೋತ್ಸವದ 7ನೇ ದಿನದ ಕಾರ್ಯಕ್ರಮದಲ್ಲಿ ಶುಕ್ರವಾರ ಮಾತನಾಡಿದರು. ‘ಸಮೂಹ ಮಾಧ್ಯಮಗಳು ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸುವ ಜವಾಬ್ದಾರಿ ಹೊಂದಿವೆ. ಆದರೆ ಟಿಆರ್ಪಿ ಕೇಂದ್ರಿತ ವರದಿಗಳಿಂದ ಸಮಾಜದಲ್ಲಿ ತಪ್ಪು ಸಂದೇಶಗಳು ಹರಡುತ್ತಿರುವುದು ಕಳವಳಕಾರಿ ಬೆಳವಣಿಗೆ. ಮಾಧ್ಯಮಗಳು ಸತ್ಯ, ಸಂಯಮ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಆದ್ಯತೆಯಾಗಿಸಿಕೊಳ್ಳಬೇಕು’ ಎಂದರು.
‘ಸಮೂಹ ಮಾಧ್ಯಮಗಳು ಸಮಾಜದ ಕನ್ನಡಿ ಇದ್ದಂತೆ. ಆರೋಗ್ಯಕರ ಸಮಾಜ ನಿರ್ಮಾಣದಲ್ಲಿ ಮಹತ್ವದ ಜವಾಬ್ದಾರಿ ವಹಿಸಬೇಕಾಗಿದೆ. ರೇಡಿಯೊ, ವಾಟ್ಸ್ಆ್ಯಪ್, ಫೇಸ್ಬುಕ್ ಸೇರಿದಂತೆ ವಿವಿಧ ಸಾಮಾಜಿಕ ಜಾಲತಾಣಗಳು ಇಂದು ಸಂಸ್ಕೃತಿ, ಆಚರಣೆ ಹಾಗೂ ವಿಚಾರಧಾರೆಗಳ ಮೇಲೆ ಗಂಭೀರ ಪ್ರಭಾವ ಬೀರುತ್ತಿವೆ’ ಎಂದು ಹೇಳಿದರು.
‘ಹಿಂದಿನ ಕಾಲದಲ್ಲಿ ಜಾನಪದ ಹಾಡುಗಳು ಹಾಗೂ ತತ್ವ–ಸಿದ್ಧಾಂತಗಳು ಸಮಾಜವನ್ನು ರೂಪಿಸುತ್ತಿದ್ದವು. ಆದರೆ ಇಂದು ಸಮೂಹ ಮಾಧ್ಯಮಗಳು ಸಮಾಜದ ಚಿಂತನೆ, ನಡವಳಿಕೆ ಮತ್ತು ದಿಕ್ಕನ್ನು ನಿರ್ಧರಿಸುತ್ತಿವೆ. ರೈತರು ಬೆಳೆದ ಬೆಳೆಗೆ ನ್ಯಾಯಯುತ ಬೆಲೆ ಸಿಗುವಂತೆ ಮಾಡುವ ಜವಾಬ್ದಾರಿಯನ್ನು ಮಾಧ್ಯಮಗಳು ನಿರ್ವಹಿಸಬೇಕು’ ಎಂದು ರಾಣೇಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ತಿಳಿಸಿದರು.
‘ಸಾಮಾಜಿಕ ಜಾಲತಾಣಗಳು ಯುವಜನತೆಯನ್ನು ದಾರಿ ತಪ್ಪಿಸುತ್ತಿರುವುದು ಕಳವಳಕಾರಿ ಸಂಗತಿ. ಪ್ರತಿಯೊಬ್ಬರೂ ಪ್ರಬುದ್ಧ ನಾಗರಿಕರಾಗಿ ಸಕಾರಾತ್ಮಕ ಸುದ್ದಿಗಳಿಗೆ ಮಹತ್ವ ನೀಡಬೇಕು’ ಎಂದರು.
ಸಿರಿಗೆರೆ ತರಳಬಾಳು ಮಠದ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪತ್ರಕರ್ತರಾದ ಎಸ್.ರಶ್ಮಿ, ಕೀರ್ತಿ ಕೋಲ್ಗಾರ ಉಪನ್ಯಾಸ ನೀಡಿದರು. ವಿಧಾನಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ, ಮಾಜಿ ಸಚಿವ ಎಚ್.ಎಸ್.ಮಾಧುಸ್ವಾಮಿ, ಸಿರಿಗೆರೆಯ ಸಾಧು ಸದ್ಧರ್ಮ ಸಂಘದ ಅಧ್ಯಕ್ಷ ಎಚ್.ಆರ್.ಬಸವರಾಜಪ್ಪ, ಭದ್ರಾವತಿ ನಗರಸಭೆ ಅಧ್ಯಕ್ಷೆ ಗೀತಾ ರಾಜಕುಮಾರ್, ವಿಜ್ಞಾನಿಗಳಾದ ಬಿ.ಜಿ.ಗಿರೀಶ್, ಪಿ.ಎಂ.ಕುಮಾರಸ್ವಾಮಿ, ಹೇಮಂತ್ಕುಮಾರ್, ಎಚ್.ಜಿ.ಮಲ್ಲಯ್ಯ, ಕುಬೇಂದ್ರಪ್ಪ ಹಾಜರಿದ್ದರು.
ಯಾರು ಏನೆಂದರು?
ವೈಮನಸ್ಸಿನಿಂದ ದೂರವಾಗುತ್ತಿದ್ದ ಹಲವು ದಂಪತಿಗಳನ್ನು ಸಿರಿಗೆರೆ ಮಠದ ಸದ್ಧರ್ಮ ನ್ಯಾಯಪೀಠ ಒಂದುಗೂಡಿಸಿದೆ. ‘ಮನೆಯಲ್ಲಿ ನೀನಿರಬೇಕು ಇಲ್ಲ ನಾನಿರಬೇಕು’ ಅಂದುಕೊಂಡು ಬರುವ ದಂಪತಿ ಶ್ರೀಗಳ ಬುದ್ಧಿಮಾತು ಕೇಳಿ ಮನಃಪರಿವರ್ತನೆಯಾಗಿ ‘ನೀನಿರದೆ ನಾನಿಲ್ಲ’ ಎಂಬ ಸಮರಸ ಭಾವದಲ್ಲಿ ಒಂದಾಗಿದ್ದಾರೆ.
-ಗೀತಾ ರಾಜಕುಮಾರ್ ಭದ್ರಾವತಿ ನಗರಸಭೆ ಅಧ್ಯಕ್ಷೆ
ಸಾಮಾಜಿಕ ಜಾಲತಾಣಗಳು ಇಂದು ಯುವಜನತೆಯನ್ನು ದಾರಿತಪ್ಪಿಸುತ್ತಿರುವುದು ಆತಂಕಕಾರಿ ಬೆಳವಣಿಗೆ. ಪ್ರಬುದ್ಧ ನಾಗರಿಕರಾಗಿ ಪ್ರತಿಯೊಬ್ಬರೂ ಸಕಾರಾತ್ಮಕ ಸುದ್ದಿಗಳಿಗೆ ಮಹತ್ವ ಕೊಡಬೇಕು
- ಪ್ರಕಾಶ್ ಕೋಳಿವಾಡ ರಾಣೆಬೆನ್ನೂರು ಶಾಸಕ
ಇಂದಿನ ದಿನಮಾನಗಳಲ್ಲಿ ಮಾಧ್ಯಮಗಳು ಕೇವಲ ಸುದ್ದಿ ಕೊಡುವ ಸಾಧನವಾಗಿರದೇ ಜನರ ಮನೋಭಾವ ನಡವಳಿಕೆ ಹಾಗೂ ಆದ್ಯತೆಗಳನ್ನು ನಿರ್ಧರಿಸುವ ಶಕ್ತಿಶಾಲಿ ವೇದಿಕೆಯಾಗಿ ರೂಪುಗೊಂಡಿವೆ. -ಚಕ್ರವರ್ತಿ ಸೂಲಿಬೆಲೆ ಯುವ ಬ್ರಿಗೇಡ್ ಸಂಸ್ಥಾಪಕ
ರೋಬೋಟ್ ಟೀಚರ್ ‘ಐರಿಸ್’ ಕೊಡುಗೆ
ವಿಭೂತಿ ಧರಿಸಿದ ರೇಷ್ಮೆ ಸೀರೆ ಉಟ್ಟ ದೇಸಿ ಅವತಾರದ ‘ಐರಿಸ್’ ಹೆಸರಿನ ರೋಬೋಟ್ ಶಿಕ್ಷಕಿಯನ್ನು ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ತರಳಬಾಳು ಶಿಕ್ಷಣ ಸಂಸ್ಥೆಗೆ ಕೊಡುಗೆಯಾಗಿ ನೀಡಿದರು. ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಆಧಾರಿತ ಈ ರೋಬೋಟ್ ಅನ್ನು ಸಂಸ್ಥೆಯ ಶಾಲಾ ಕಾಲೇಜುಗಳಲ್ಲಿ ಶೈಕ್ಷಣಿಕ ಉದ್ದೇಶಗಳಿಗೆ ಬಳಸಿಕೊಳ್ಳಲಾಗುತ್ತದೆ ಎಂದು ತಿಳಿದುಬಂದಿದೆ.
ತರಳಬಾಳು ಹುಣ್ಣಿಮೆ
ಮಹೋತ್ಸವದಲ್ಲಿ ಇಂದು ಸಂಜೆ 6.30ಕ್ಕೆ ನ್ಯಾಯಾಂಗ ಮತ್ತು ಸಮಾಜ ಗೋಷ್ಠಿ ಮುಖ್ಯ ಅತಿಥಿಗಳು: ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ.ಪಾಟೀಲ ನವದೆಹಲಿಯ ಲೋಕಪಾಲ್ನ ನ್ಯಾಯಾಂಗ ಸದಸ್ಯ ಲಿಂಗಪ್ಪ ನಾರಾಯಣಸ್ವಾಮಿ ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ಎಚ್.ಬಿಲ್ಲಪ್ಪ ಹೈಕೋರ್ಟ್ ನ್ಯಾಯಮೂರ್ತಿ ವಿ.ಶ್ರೀಶಾನಂದ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಸ್.ಸಂತೋಷ್. ಉಪನ್ಯಾಸ: ಹೈಕೋರ್ಟ್ ವಕೀಲರಾದ ಸಂದೀಪ್ ಪಾಟೀಲ್ ಅರುಣ್ ಶ್ಯಾಮ್ ಕೆ.ಬಿ.ವಾಣಿ ಗೌಡ ಕೆ.ಆರ್.ರೂಪ. ಸಾಂಸ್ಕೃತಿಕ ಕಾರ್ಯಕ್ರಮ: ವಚನ ಗೀತೆ: ಭೂಮಿಕಾ ಮತ್ತು ದೀಪಿಕಾ ಕುಂದಗೋಳ ಸಹೋದರಿಯರು ನೃತ್ಯ ರೂಪಕ: ಶಿವಶರಣ ಹರಳಯ್ಯ- ತರಳಬಾಳು ಕಲಾಸಂಘ ಸಿರಿಗೆರೆ ಶ್ರೀನಿವಾಸ ಕಲ್ಯಾಣ: ಅನುಭವ ಮಂಟಪ ದಾವಣಗೆರೆ ನೃತ್ಯ ರೂಪಕ: ಗೋವಿನ ಹಾಡು -ತರಳಬಾಳು ಕಲಾ ಸಂಘ ಸಿರಿಗೆರೆ. ನೃತ್ಯ ಝೇಂಕಾರ: ಯೋಗೇಶ್ ಮತ್ತು ಸ್ನೇಹ ನಾರಾಯಣ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.