
ಭದ್ರಾವತಿ: ಧಾರವಾಡ ಜಿಲ್ಲೆ ಇನಾಂ ವೀರಾಪುರದಲ್ಲಿ ಮಾನ್ಯ ಎಂಬ ಹೆಣ್ಣು ಮಗಳು ದಲಿತ ಹುಡುಗನನ್ನು ಮದುವೆ ಆದಳು ಎಂಬ ಕಾರಣಕ್ಕಾಗಿ ತಂದೆಯೇ ಗರ್ಭಿಣಿ ಮಗಳನ್ನು ಬರ್ಬರವಾಗಿ ಹತ್ಯೆಗೈದಿರುವುದನ್ನು ನಗರದ ಅಂಬೇಡ್ಕರ್ ವೈಚಾರಿಕ ವೇದಿಕೆ ತೀವ್ರವಾಗಿ ಖಂಡಿಸಿದೆ.
ಈ ಸಂಬಂಧ ವೇದಿಕೆ ನೀಡಿರುವ ಪತ್ರಿಕಾ ಹೇಳಿಕೆಯಲ್ಲಿ ಲಿಂಗಾಯತ ಜಾತಿಗೆ ಸೇರಿದ ಯುವತಿ ದಲಿತ ಜಾತಿಯ ಯುವಕನನ್ನು ವಿವಾಹವಾಗಿದ್ದು, 7 ತಿಂಗಳ ಗರ್ಭಿಣಿಯನ್ನು ಹೆತ್ತ ತಂದೆಯೇ ಕೊಡಲಿಯಿಂದ ಕೊಚ್ಚಿ ಕೊಲೆಮಾಡಿರುವುದು ನೋವಿನ ವಿಚಾರವಾಗಿದೆ. ಇದೆ ರೀತಿ ವಿಜಯಪುರದಲ್ಲಿ ದೇವಸ್ಥಾನ ಕಟ್ಟೆಯ ಮೇಲೆ ಮೇಲ್ಜಾತಿಯವರ ಸಮನಾಗಿ ಒಬ್ಬ ದಲಿತ ಯುವಕ ಕುಳಿತ ಎಂದು ಆತನನ್ನು ಕೊಲೆ ಮಾಡಿರುವುದು ನಾಗರಿಕ ಸಮಾಜ ತಲೆತಗ್ಗಿಸುವ ಸಂಗತಿಯಾಗಿದ್ದು, ಈ ಕೃತ್ಯವನ್ನು ಸಹ ವೇದಿಕೆ ಖಂಡಿಸಿದೆ ಎಂದು ತಿಳಿಸಲಾಗಿದೆ.
ಸಮಾಜದಲ್ಲಿ ಜಾತಿ ತಾರತಮ್ಮ ಇನ್ನೂ ಗಾಢವಾಗಿರುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ ಎಂದು ಕಿಡಿಕಾರಲಾಗಿದೆ.
‘ಹಿಂದೂ ನಾವೆಲ್ಲ ಒಂದು’ ಎನ್ನುವ ಹಿಂದತ್ವವಾದಿಗಳು ಈ ಘಟನೆಗೂ ತಮಗೂ ಸಂಬಂಧವಿಲ್ಲ ಎನ್ನುವಂತಿದ್ದಾರೆ. ಆದರೆ ಬುದ್ಧ, ಬಸವ, ಅಂಬೇಡ್ಕರ್ ವಾದಿಗಳು ಘಟನೆ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಹೋರಾಟ ಮತ್ತಷ್ಟು ಚುರುಕುಗೊಳ್ಳಬೇಕು. ಮರ್ಯಾದಾ ಹತ್ಯೆ ನಡೆಸಿದ ಅರೋಪಿಗಳಿಗೆ ಶಿಕ್ಷೆ ನೀಡಬೇಕೆಂದು ವೇದಿಕೆಯ ಸಂಚಾಲಕರುಗಳಾದ ಪಿ. ಮೂರ್ತಿ ಮತ್ತು ಜಯರಾಮ್ ಒತ್ತಾಯಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.