ಶಿವಮೊಗ್ಗ: ‘ನಾವು ದೀವರು ಅಭಿಯಾನ ಬಳಗದಿಂದ ರಿಪ್ಪನ್ ಪೇಟೆ ಎಸ್ಆರ್ ಕನ್ವೆನ್ಸನ್ ಹಾಲ್ನಲ್ಲಿ ಸೆ.21 ರಂದು ಬೆಳಿಗ್ಗೆ 10 ಗಂಟೆಗೆ ‘ದೀವರ ದಿಕ್ಕು ದೆಸೆ’ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಅಭಿಯಾನ ಬಳಗದ ಸಂಚಾಲಕ ಶ್ರೀಧರ್ ಈಡೂರು ತಿಳಿಸಿದರು.
ಸಾರಗನ ಜಡ್ಡು ಪೀಠದ ಯೋಗೇಂದ್ರ ಅವಧೂತರು, ಸಿಗಂದೂರು ಕ್ಷೇತ್ರದ ಧರ್ಮದರ್ಶಿ ರಾಮಪ್ಪ ಅವರ ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ. ಒಂದು ಶ್ರೀಮಂತ ಸಂಸ್ಕೃತಿ ಹೊಂದಿರುವ ದೀವರು ಸಮುದಾಯದ ನಿಖರ ಲೆಕ್ಕ ಗಣತಿಯಲ್ಲಿ ಸಿಗಬೇಕು. ಈ ಕಾರಣದಿಂದ ಕಾಲಂ ನಂ.9 ರಲ್ಲಿ ಮುಖ್ಯ ಜಾತಿಯಾಗಿ ದೀವರು (ಕೋಡ್ 0302) ಎಂದೇ ನಮೂದಿಸಬೇಕು ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.
ಜಿಲ್ಲೆಯಲ್ಲಿ ಅಭಿಯಾನ ವ್ಯಾಪಕವಾಗಿ ನಡೆಯುತ್ತಿದೆ. ಮಲೆನಾಡಿನಲ್ಲಿ ಬಹು ಸಂಖ್ಯಾತರಾದ ದೀವರು ಸಮುದಾಯದ ಸಂಖ್ಯೆಯನ್ನು ಕಾಂತರಾಜ ಆಯೋಗ ವರದಿಯಲ್ಲಿ ಕೇವಲ 63 ಸಾವಿರ ಎಂದು ತೋರಿಸಲಾಗಿದೆ. ಜಿಲ್ಲೆಯಲ್ಲಿ 4 ಲಕ್ಷಕ್ಕೂ ಅಧಿಕ ಸಂಖ್ಯೆಯಲ್ಲಿ ನಮ್ಮ ಸಮುದಾಯವಿದೆ. ಈ ಜಾತಿ ಗಣತಿಯಲ್ಲಿ ನಿಖರವಾದ ಮಾಹಿತಿ ಸಿಗಲಿದೆ. ಈಚೆಗೆ ಆರ್ಯ ಈಡಿಗ ಜಿಲ್ಲಾ ಸಂಘದ ಅಧ್ಯಕ್ಷ ಶ್ರೀಧರ್ ಆರ್. ಹುಲ್ತಿಕೊಪ್ಪ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನಮ್ಮ ಜಾತಿಯನ್ನು ದೀವರು ಎಂದೇ ಬರೆಸಲು ನಿರ್ಣಯ ಕೈಗೊಳ್ಳಲಾಗಿದೆ ಎಂದರು.
ಜಾತಿ ಗಣತಿಗೂ ಸರ್ಕಾರಿ ದಾಖಲೆ ಮತ್ತು ಸಿಂಧುತ್ವ ಪ್ರಮಾಣ ಪತ್ರಗಳಿಗೆ ಯಾವುದೇ ಸಂಬಂಧವಿಲ್ಲ. ಇದು ರಾಜ್ಯದಲ್ಲಿರುವ ಎಲ್ಲ ಜಾತಿಗಳ ಸಾಮಾಜಿಕ ಶೈಕ್ಷಣಿಕ ಸ್ಥಿತಿಗತಿಯನ್ನು ಅಧ್ಯಯನ ಮಾಡುವುದಾಗಿದೆ. ರಾಜ್ಯ ಈಡಿಗ ಸಂಘವು ಮುಖ್ಯ ಜಾತಿಯಲ್ಲಿ ಈಡಿಗರು ಎಂದು ಬರೆಸಬೇಕೆಂದು ಕರೆ ನೀಡಿದೆ. ಆದರೆ, ಶಿವಮೊಗ್ಗ ಜಿಲ್ಲೆಯಲ್ಲಿರುವ ದೀವರು ಮುಖ್ಯ ಜಾತಿ ಕಾಲಂನಲ್ಲಿ ದೀವರು ಎಂದೇ ನಮೂದಿಸುವಂತೆ ಕರೆ ನೀಡಿದರು.
ಅದೇ ದಿನ ಸಂಜೆ 4 ಗಂಟೆಗೆ ಸಾಗರ ತಾಲ್ಲೂಕಿನ ಸಿಗಂದೂರು ರಸ್ತೆಯ ಆವಿನಹಳ್ಳಿಯ ಬಿ.ಆರ್.ಅಂಬೇಡ್ಕರ್ ಭವನದಲ್ಲಿಯೂ ದೀವರ ದಿಕ್ಕು ದೆಸೆ’ ಸಮಾವೇಶ ನಡೆಸಿ ಅರಿವು ಮೂಡಿಸಲಾಗುವುದು. ಹಳೆಪೈಕ ದೀವರು ಸಂಸ್ಕೃತಿ ಸಂವಾದ ಬಳಗ, ಧೀರ ದೀವರ ಬಳಗ, ದೀವರ ಯುವ ವೇದಿಕೆ ಸಮಾವೇಶಕ್ಕೆ ಸಹಕಾರ ನೀಡಿವೆ ಎಂದು ಸಹ ಕಾರ್ಯದರ್ಶಿ ತೇಕ್ಲೆ ರಾಜಪ್ಪ ತಿಳಿಸಿದರು.
ಅಭಿಯಾನ ಬಳಗದ ಎನ್.ಡಿ.ನಾಗೇಶ್ ಸೊರಬ, ವೆಂಕಟೇಶ್ ನಾಯ್ಕ್ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.