
ಶಿವಮೊಗ್ಗ: ಇಲ್ಲಿನ ಈಡಿಗರ ಭವನದ ಆವರಣದಲ್ಲಿ ಭಾನುವಾರ ಇಡೀ ದಿನ ಸಂಭ್ರಮ ಗರಿಗೆದರಿತ್ತು. ಮಲೆನಾಡಿನ ಕಾನ ಮಕ್ಕಳ ಕಳ್ಳು–ಬಳ್ಳಿಗಳ ಅನುಬಂಧದ ಕಲರವ ದೀವರ ಸಾಂಸ್ಕೃತಿಕ ವೈಭವದ ಹೆಸರಲ್ಲಿ ಮೇಳೈಸಿತ್ತು.
ಹಿಡಕಲ್ಲು ಪೂಜೆಯೊಂದಿಗೆ ಧೀರ ದೀವರ ಸಾಂಸ್ಕೃತಿಕ ವೈಭವಕ್ಕೆ ಹೊಸನಗರ ತಾಲ್ಲೂಕಿನ ಸಾರಗನ ಜಡ್ಡು ಕಾರ್ತಿಕೇಯ ಪೀಠದ ಯೋಗೇಂದ್ರ ಅವಧೂತರು ಸಾಂಪ್ರದಾಯಿಕ ಸ್ಪರ್ಶ ನೀಡಿದರು. ಭೂಮಣ್ಣಿ ಬುಟ್ಟಿಯ ಹೊತ್ತು ಹಾಗೂ ಅಂಟಿಕೆ–ಪಿಂಟಿಕೆ ತಂಡದ ದೀಪ ಹಚ್ಚುವ ಮೂಲಕ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಸಾಂಪ್ರದಾಯಿಕ ಚಾಲನೆ ನೀಡಿದರು. ಅವರಿಗೆ ಸಾಗರದ ಶಾಸಕ ಗೋಪಾಲಕೃಷ್ಣ ಬೇಳೂರು ಸಾಥ್ ನೀಡಿದರು.
ಸಮಾಜದ ಸಾಂಸ್ಕೃತಿಕ ನಾಯಕರಾದ ನಟ ರಾಜಕುಮಾರ್, ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪ, ಮಾಜಿ ಸಚಿವ ಕಾಗೋಡು ತಿಮ್ಮಪ್ಪ ಅವರನ್ನು ನೆನಪಿಸಿಕೊಳ್ಳುವ ಜೊತೆಗೆ ಸಮಾಜದ ಸಂಘಟನೆಗೆ ಶ್ರಮಿಸಿದ ಕೆ.ಎನ್.ಗುರುಸ್ವಾಮಿ, ವೆಂಕಟಸ್ವಾಮಿ, ಮಾಜಿ ಸಚಿವರಾದ ಆರ್.ಎಲ್.ಜಾಲಪ್ಪ, ಎಚ್.ಜಿ.ರಾಮುಲು, ಜನಾರ್ಧನ ಪೂಜಾರಿ, ಸ್ವಾಮಿರಾವ್, ಜಿ.ಡಿ.ನಾರಾಯಣಪ್ಪ, ಬಿ.ಕೆ.ಹರಿಪ್ರಸಾದ್, ಸುಪ್ರೀಂಕೋರ್ಟ್ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಚ್.ಎಲ್.ದತ್ತು, ನಟ ಪುನೀತ್ ರಾಜಕುಮಾರ್ ಅವರನ್ನು ಸ್ಮರಿಸಲಾಯಿತು.
ಧೀರ ದೀವರ ಬಳಗ, ಹಳೆಪೈಕ ದೀವರ ಸಂಸ್ಕೃತಿ ಸಂವಾದ ಬಳಗ ಸೇರಿ ನಡೆಸಿದ ಈ ಊರ ಹಬ್ಬದಲ್ಲಿ ಬೆಂಗಳೂರು, ಕೋಲಾರ, ಮೈಸೂರು, ಚಿಕ್ಕಮಗಳೂರು, ದಕ್ಷಿಣ ಕನ್ನಡ, ಕಲಬುರಗಿ, ಉತ್ತರ ಕನ್ನಡ ಜಿಲ್ಲೆಗಳಿಂದ ದೀವರು ಮಾತ್ರವಲ್ಲದೇ ಈಡಿಗ ಸಮುದಾಯದ 26 ಉಪಪಂಗಡಗಳ ಪ್ರತಿನಿಧಿಗಳು ಪಾಲ್ಗೊಂಡು ದಿನವಡೀ ನಕ್ಕು, ನಲಿದು ಸಂಭ್ರಮಿಸಿದರು.
ಜಿಲ್ಲಾ ಆರ್ಯ ಈಡಿಗ ಮಹಿಳಾ ಸಂಘ, ಸಾಗರದ ದೀವರು ಯುವ ವೇದಿಕೆ, ಬೆಂಗಳೂರಿನ ಕರ್ನಾಟಕ ದೀವರು ಸಾಂಸ್ಕೃತಿಕ ಅಧ್ಯಯನ ಸಂಸ್ಥೆ, ಶಿವಮೊಗ್ಗದ ನಾರಾಯಣಗುರು ವಿಚಾರ ವೇದಿಕೆ, ಬಿಎಸ್ಎನ್ಡಿಪಿ, ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘ ಹಾಗೂ ತಾಲ್ಲೂಕು ಆರ್ಯ ಈಡಿಗರ ಸಂಘಗಳು ಕಾರ್ಯಕ್ರಮದ ಯಶಸ್ಸಿಗೆ ಕೈ ಜೋಡಿಸಿದ್ದವು.
ದೀವರು ಸೇರಿದಂತೆ ಸಮಾಜದ 26 ಪಂಗಡಗಳನ್ನು ನಾವು ಒಟ್ಟಿಗೆ ತೆಗೆದುಕೊಂಡು ಹೋಗಬೇಕಿದೆಮಧು ಬಂಗಾರಪ್ಪ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ
₹100 ಕೋಟಿ ಕೊಡಿ
ಈ ಬಾರಿಯ ಬಜೆಟ್ನಲ್ಲಿ ಈಡಿಗರ ಅಭಿವೃದ್ಧಿ ನಿಗಮಕ್ಕೆ ₹100 ಕೋಟಿ ಮೀಸಲಿಡಬೇಕು. ಸರ್ಕಾರ ಬಂದು ಎರಡು ವರ್ಷ ಆದರೂ ಒಂದು ರೂಪಾಯಿ ಕೊಟ್ಟಿಲ್ಲ. ಕೊಡದಿದ್ದರೆ ಸಮುದಾಯದ ಸಮಾವೇಶ ಮಾಡಿ ಶಕ್ತಿ ಪ್ರದರ್ಶಿಸಲಾಗುವುದು ಎಂದು ಶಾಸಕ ಬೇಳೂರು ಗೋಪಾಲಕಷ್ಣ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.