ಶಿರಾಳಕೊಪ್ಪ: ಅಕ್ಕಮಹಾದೇವಿ, ಅಲ್ಲಮಪ್ರಭು ಸೇರಿ ಬಸವಾದಿ ಶರಣರಿಗೆ ಜಾತಿ ಪಟ್ಟ ಕಟ್ಟಬೇಡಿ ಎಂದು ಸಂಸದ ಬಿ.ವೈ. ರಾಘವೇಂದ್ರ ಮನವಿ ಮಾಡಿದರು.
ಅಲ್ಲಮಪ್ರಭುಗಳ ಜನ್ಮಸ್ಥಳವಾದ ಬಳ್ಳಿಗಾವಿಯಲ್ಲಿರುವ ಅಲ್ಲಮ್ಮಪ್ರಭುಗಳ ಪೂರ್ವಾಶ್ರಮದ ತಂದೆ, ತಾಯಿಗಳ ಗದ್ದಗೆಯ ಬಳಿ ನಿರ್ಮಿಸಲಾಗುತ್ತಿರುವ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಜಾತಿಗೊಂದು ಜಯಂತಿ ಮಾಡಿ, ಶರಣರನ್ನು ಜಾತಿಗೆ ಸಿಮೀತ ಮಾಡುತ್ತಿರುವುದು ಬೇಸರದ ಸಂಗತಿ ಎಂದರು.
‘12ನೇ ಶತಮಾನದಲ್ಲಿ ನಡೆದ ಸಾಮಾಜಿಕ ಕ್ರಾಂತಿಯಲ್ಲಿ ನ್ಯಾಯವಿತ್ತು. ಧರ್ಮವಿತ್ತು. ಹಾಗಾಗಿಯೇ 800 ವರ್ಷವಾದರೂ ಅದು ಉಳಿದಿದೆ. ರಕ್ತರಹಿತ ಕ್ರಾಂತಿಯದು. ಅಲ್ಲಿ ಎಲ್ಲಾ ಜಾತಿಯ ಶರಣರಿದ್ದರು. ಜೈನ ಮೂಲದ ಅಕ್ಕಮಹಾದೇವಿ. ಮದ್ದಳೆ ಬಾರಿಸುವ ಜನಾಂಗದ ಅಲ್ಲಮಪ್ರಭು ಸೇರಿದಂತೆ ಸಾಕಷ್ಟು ಜನ ಶರಣರಿದ್ದರು. ಅಲ್ಲಮ ಪ್ರಭುಗಳು ನಮಗೆಲ್ಲ ಗುರುಗಳು ಎಂದು ನಾವು ಹೆಮ್ಮೆಯಿಂದ ಹೇಳುತ್ತೇವೆ. ಅವರೇ ಶೂನ್ಯ ಸಿಂಹಾಸನದ ಮೊದಲ ಪೀಠಾಧ್ಯಕ್ಷ. ಜಗತ್ತಿನ ಶ್ರೇಷ್ಠ ತತ್ವಜ್ಞಾನಿ. ಶರಣರ ಮೂಲವನ್ನು ಜನರು ಹುಡುಕದೇ ಶರಣರ ಸಂದೇಶವನ್ನು ಪಾಲಿಸಬೇಕು’ ಎಂದು ಆನಂದಪುರ ಮುರುಘಾ ಮಠದ ಮಲ್ಲಿಕಾರ್ಜುನ ಮುರುಘ ರಾಜೇಂದ್ರ ಸ್ವಾಮೀಜಿ ಸಲಹೆ ನೀಡಿದರು.
ಶಿರಾಳಕೊಪ್ಪ ವಿರಕ್ತಮಠದ ಸಿದ್ದೇಶ್ವರ ಸ್ವಾಮೀಜಿ, ಬಳ್ಳಿಗಾವಿ ಅಲ್ಲಮಪ್ರಭು ಅನುಭಾವ ಪೀಠದ ಶಿವಲಿಂಗೇಶ್ವರ ಸ್ವಾಮೀಜಿ, ಜಡೆ ಮಠದ ಮಹಾಂತ ಸ್ವಾಮೀಜಿ, ಮೂಲೆಗದ್ದೆಯ ಅಭಿನವ ಚನ್ನಬಸವ ಸ್ವಾಮೀಜಿ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷ ಕೊಳಗಿ ರೇವಣಪ್ಪ, ಭೋವಿ ನಿಗಮದ ನಿರ್ದೇಶಕ ಹನುಮಂತಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷ ಮಳೂರು ಪರಮೇಶಪ್ಪ, ನಾಗರಾಜಪ್ಪ, ಮಲ್ಲಣ್ಣ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.