ADVERTISEMENT

ಆತ್ಮಹತ್ಯೆಯಿಂದ ಕನಸುಗಳು ಕಮರದಿರಲಿ: ಡಾ.ತಿಮ್ಮಪ್ಪ ಹೆಗಡೆ ಅಭಿಮತ

ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದಲ್ಲಿ ಡಾ.ತಿಮ್ಮಪ್ಪ ಹೆಗಡೆ ಅಭಿಮತ

​ಪ್ರಜಾವಾಣಿ ವಾರ್ತೆ
Published 29 ಮಾರ್ಚ್ 2023, 6:24 IST
Last Updated 29 ಮಾರ್ಚ್ 2023, 6:24 IST
ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಮಂಗಳವಾರ ನರ ರೋಗ ತಜ್ಞ ಡಾ.ತಿಮ್ಮಪ್ಪ ಹೆಗಡೆ ಅವರು ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.
ಶಿವಮೊಗ್ಗದ ಕುವೆಂಪು ರಂಗ ಮಂದಿರದಲ್ಲಿ ಮಂಗಳವಾರ ನರ ರೋಗ ತಜ್ಞ ಡಾ.ತಿಮ್ಮಪ್ಪ ಹೆಗಡೆ ಅವರು ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿದರು.   

ಶಿವಮೊಗ್ಗ: ಜೀವನವನ್ನು ಸಮರ್ಪಕವಾಗಿ ಬಳಸಿಕೊಳ್ಳಿ. ಕನಸುಗಳು ಆತ್ಮಹತ್ಯೆಯಿಂದ ವ್ಯರ್ಥ ಆಗಬಾರದು. ಯಾರಲ್ಲಿ ನಿರ್ದಿಷ್ಟ ಗುರಿ ಇರುವುದಿಲ್ಲವೊ ಅವರೇ ಆತ್ಮಹತ್ಯೆಯ ಆಲೋಚನೆ ಮಾಡುವುದು ಎಂದು ನರ ರೋಗ ತಜ್ಞ ಡಾ.ತಿಮ್ಮಪ್ಪ ಹೆಗಡೆ ಹೇಳಿದರು.

ಇಲ್ಲಿನ ಕುವೆಂಪು ರಂಗ ಮಂದಿರದಲ್ಲಿ ಮಂಗಳವಾರ ರಾಷ್ಟ್ರೀಯ ಶಿಕ್ಷಣ ಸಮಿತಿಯ ಅಮೃತಮಹೋತ್ಸವದ ನಿಮಿತ್ತ ಆಯೋಜಿಸಿದ್ದ ‘ಉಪನ್ಯಾಸ ಸರಣಿಗಳ 11 ನೇ ಮಾಲಿಕೆಯಲ್ಲಿ ‘ಜೀವನ - ಒಂದು ಉಡುಗೊರೆ’ ಕುರಿತು ಉಪನ್ಯಾಸ ನೀಡಿದ ಅವರು, ‘ಬದುಕಿನಲ್ಲಿ ಬರುವ ಪ್ರತಿ ಸಂದರ್ಭಗಳನ್ನೂ ಸ್ವೀಕರಿಸಿ. ಸವಾಲಿನ ಸಂದರ್ಭವಾದರೆ ಪರಿಹಾರ ಹುಡುಕಿ ಸಾವಿನ ಮಾರ್ಗ ಅಲ್ಲ. ಜೀವನವೆಂಬುದು ನಮಗೆ ಸಿಕ್ಕ ಅಮೂಲ್ಯ ಕೊಡುಗೆ. ಅಂತಹ ಬದುಕನ್ನು ಸಮರ್ಪಕವಾಗಿ ಸಾರ್ಥಕಗೊಳಿಸಿಕೊಳ್ಳಿ’ ಎಂದು ಹೇಳಿದರು.

‘ಜಗತ್ತನ್ನು ಬದಲಾಯಿಸುತ್ತೇನೆ ಎಂಬ ಭ್ರಮೆ ಬೇಡ. ಪ್ರತಿ ಹೆಜ್ಜೆಯಲ್ಲಿ ನನ್ನನ್ನು ನಾನು ಬದಲಾಯಿಸಿಕೊಳ್ಳುತ್ತೇನೆ ಎಂಬ ಮುಕ್ತತೆ ಇರಲಿ. ಜಗತ್ತಿನಲ್ಲಿ ಯಾರೂ ಮುಖ್ಯರಲ್ಲ, ಯಾರು ಅಮುಖ್ಯರಲ್ಲ. ಅವರವರ ಜೀವನ ತನ್ನದೇ ಪ್ರಾಮುಖ್ಯತೆ ಪಡೆದಿದೆ‌. ಜೀವನದಲ್ಲಿ ಎಲ್ಲರಿಗೂ ಪಿತೃ ಋಣ, ಲೋಕ ಋಣ, ಆಚಾರ್ಯ ಋಣಗಳಿವೆ. ಮಕ್ಕಳಾಗಿ ಹೆಮ್ಮೆಪಡುವ ಕೆಲಸದಿಂದ ಪೋಷಕರ ಋಣ ತೀರಿಸಬಹುದು. ಪಡೆಯುವ ಮನೋಭಾವದಿಂದ ಹೊರಬಂದು ಇತರರಿಗೆ ಕೊಡುಗೆದಾರರಾಗಿ ಬದಲಾಗುವುದರ ಮೂಲಕ ಲೋಕದ ಋಣ ತೀರಿಸಬಹುದು’ ಎಂದು ಹೇಳಿದರು.

ADVERTISEMENT

‘ಧನಾತ್ಮಕ ಮಾನಸಿಕ ಶಕ್ತಿಯನ್ನು ಹೊಂದಿರುವ ವ್ಯಕ್ತಿ ದೈಹಿಕವಾಗಿ ಬಲವಾಗಿರದಿದ್ದರೂ ಯಾವುದೇ ಪರಿಸ್ಥಿತಿಯನ್ನು ಎದುರಿಸುವ ಶಕ್ತಿಯನ್ನು ಹೊಂದಿರುತ್ತಾನೆ. ಮಾನವನ ಮೆದುಳು ಮಾತಿಗಿಂತ ಅನುಭವಾಧಾರಿತ ವಿಚಾರಗಳನ್ನು ಹೆಚ್ಚು ನೆನಪಿನಲ್ಲಿಟ್ಟುಕೊಳ್ಳುತ್ತದೆ. ಎಂತಹ ಅದ್ಭುತತೆಯನ್ನು ನಿರ್ಮಿಸುವ ಶಕ್ತಿ ಮಾನವನ ಮೆದುಳಿಗಿದೆ. ಬದುಕಿನ ಪ್ರತಿ ಸನ್ನಿವೇಶಗಳನ್ನು ಅನುಭವಿಸಬೇಕಿದೆ. ಅದು ಸೋಲೆಂಬ ಹೊಸತನದ ಕಲಿಕೆಗೆ ಅವಕಾಶ ಮಾಡಬಹುದು, ಅಥವಾ ಯಶಸ್ಸಿನ ಸಂಭ್ರಮ ಆಚರಿಸಲು ಅವಕಾಶ ಮಾಡಿಕೊಡುತ್ತದೆ. ಮೌಡ್ಯತೆಗಳನ್ನು ಎಂದಿಗೂ ಬದಲಾಯಿಸಲಾಗದು. ಮೌಡ್ಯತೆಯಾಗಲಿ, ಬದುಕಾಗಲಿ ವಿಶ್ವಾಸದಿಂದ ಕೂಡಿರುತ್ತದೆ. ಬದುಕನ್ನು ಕೇವಲ ನಂಬಿಕೆಗಳಿಂದ ಮುನ್ನಡೆಸಬೇಡಿ ವಿಶ್ವಾಸದಿಂದ ಮುನ್ನಡೆಸಿ ಎಂದರು.

ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣ ರಾವ್, ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ. ಶಿವಕುಮಾರ್, ಮಧುರಾವ್, ಎನ್.ಟಿ.ನಾರಾಯಣರಾವ್, ನ್ಯಾಷನಲ್ ಫಾರ್ಮಸಿ ಕಾಲೇಜಿನ ಪ್ರಾಂಶುಲ ಡಾ.ಜಿ.ನಾರಾಯಣಮೂರ್ತಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.