ಶಿವಮೊಗ್ಗ: ಆನ್ಲೈನ್ ಪಾಠ 7ನೇ ತರಗತಿಯವರೆಗೂ ನಿಷೇಧಿಸಬೇಕು. ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಯುವ ದಿನಗಳಲ್ಲಿ ರಾಜ್ಯದ ಎಲ್ಲೆಡೆ ಲಾಕ್ಡೌನ್ ಜಾರಿಗೊಳಿಸಬೇಕು ಎಂದು ಮಾಜಿ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ ಆಗ್ರಹಿಸಿದರು.
ಶಿವಮೊಗ್ಗ ಪ್ರೆಸ್ಕ್ಲಬ್ನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪರೀಕ್ಷೆ ನಡೆಸುವುದು ಸರಿಯಾದ ನಿರ್ಧಾರ.ಸರ್ಕಾರ ಈಗಾಗಲೇ ಸಾಕಷ್ಟು ಸಿದ್ಧತೆ ಮಾಡಿಕೊಂಡಿದೆ. ಹಾಗೆಯೇ, ಪರೀಕ್ಷೆಗಳು ನಡೆಯುವ ದಿನ ಲಾಕ್ಡೌನ್ ಜಾರಿ ಮಾಡಿದರೆ ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಅಂದು ಪರೀಕ್ಷಾ ಕೇಂದ್ರಗಳಿಗೆ ತೆರಳಲು ವಾಹನಗಳ ವ್ಯವಸ್ಥೆ ಮಾಡಬೇಕು. ಆ ಮಾರ್ಗದಲ್ಲಿ ಒಬ್ಬ ವಿದ್ಯಾರ್ಥಿ ಇದ್ದರೂ, ವಾಹನಸೌಲಭ್ಯ ಇರಬೇಕುಎಂದು ಸಲಹೆ ನೀಡಿದರು.
ಮಲೆನಾಡಿನ ಗ್ರಾಮಗಳಲ್ಲಿ ಶೇ 80ರಷ್ಟು ಭಾಗಗಳಲ್ಲಿ ನೆಟ್ವರ್ಕ್ ಸಮಸ್ಯೆ ಇದೆ. ಎಷ್ಟೋ ಮನೆಗಳಲ್ಲಿ ಮೊಬೈಲ್ ಇಲ್ಲ. ವಿದ್ಯುತ್ ಸಂಪರ್ಕವಿಲ್ಲ. ಇಂತಹ ಸಮಸ್ಯೆ ಎದುರಿಸುತ್ತಿರುವ ವಿದ್ಯಾರ್ಥಿಗಳಿಗೆ ಆನ್ಲೂನ್ ಪಾಠಗಳಿಂದ ಅನ್ಯಾಯವಾಗುತ್ತದೆ. ನಗರ ಪ್ರದೇಶ ಹಾಗೂ ಉಳ್ಳವರ ಮಕ್ಕಳಿಗಷ್ಟೇ ಅನುಕೂಲವಾಗುತ್ತದೆ ಎಂದರು.
ಇಡೀ ದೇಶದಲ್ಲಿ ಪ್ರೌಢಶಿಕ್ಷಣದವರೆಗೆ ಏಕರೀತಿಯ ಪಠ್ಯ ಜಾರಿಯಾಗಬೇಕು. ಎಲ್ಲ ವಿದ್ಯಾರ್ಥಿಗಳಿಗೂ ಸಮಾನ ಜ್ಞಾನ ದೊರಕಬೇಕು. ಮಕ್ಕಳ ಸಂಖ್ಯೆ ಕಡಿಮೆಯಾದ ಗ್ರಾಮ ಪಂಚಾಯಿತಿ ವ್ಯಾಪ್ತಿ ಒಳಗಿನ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಬೇಕು. ಅಂಥ ಶಾಲೆಗಳಿಗೆ ತೆರಳುವ ಮಕ್ಕಳಿಗೆ ಸರ್ಕಾರವೇ ವಾಹನದ ವ್ಯವಸ್ಥೆ ಕಲ್ಪಿಸಬೇಕು. ಅದಕ್ಕಾಗಿ ವರ್ಷ 10 ತಿಂಗಳು ಟೆಂಡರ್ ಕರೆಯಬೇಕು. ಶಾಲೆಗಳ ಮೂಲ ಸೌಕರ್ಯಕ್ಕೆ ಹೆಚ್ಚಿನ ಅನುದಾನ ಒದಗಿಸಬೇಕು ಎಂದು ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.