
ಶಿವಮೊಗ್ಗ: ಸಾಧಕ ವ್ಯಕ್ತಿಯ ಸಾರ್ಥಕ ಚಿತ್ರಣವಿರುವ ಅಭಿನಂದನಾ ಗ್ರಂಥಗಳು ಮುಂದಿನ ಪೀಳಿಗೆಗೆ ಸದಾ ದಾರಿ ದೀಪವಾಗಲಿದೆ ಎಂದು ಭಾಷಣಕಾರ ಡಾ.ಕೆ.ಪಿ.ಪುತ್ತೂರಾಯ ಅಭಿಪ್ರಾಯಪಟ್ಟರು.
ಡಾ.ಪಿ.ನಾರಾಯಣ್ ಅಭಿನಂದನಾ ಸಮಿತಿ ವತಿಯಿಂದ ಮಂಗಳವಾರ ಸಂಜೆ ಅಂಬೇಡ್ಕರ್ ಭವನದಲ್ಲಿ ಏರ್ಪಡಿಸಿದ್ದ ‘ಯೋಜಕ’ ಅಭಿನಂದನಾ ಗ್ರಂಥ ಹಾಗೂ ‘ಸಂತೃಪ್ತ ಸಾಧಕ’ ಸಾಕ್ಷ್ಯಚಿತ್ರ ಬಿಡುಗಡೆ ಸಮಾರಂಭ ಉದ್ದೇಶಿಸಿ ಮಾತನಾಡಿದರು.
ಮನುಷ್ಯನ ಭವಿಷ್ಯ ಹಣೆ ಬರಹದ ಮೇಲಲ್ಲ, ಹಣೆ ಬೆವರಿನ ಆಧಾರದ ಮೇಲೆ ಅವಲಂಬಿತವಾಗಿದೆ. ಸಾಧಕರನ್ನು ಗುರುತಿಸುವುದು ಒಂದು ಸತ್ಕಾರ್ಯವಾಗಿದೆ. ಅದು ಅನೇಕ ಮನಸ್ಸುಗಳಿಗೆ ಪ್ರೇರಣೆ ನೀಡಲಿದೆ. ಲವಲವಿಕೆ ಕೊನೆಯಾದಾಗ ಮಾತ್ರ ಮುಪ್ಪು ಎಂಬುದು ನಮ್ಮಲ್ಲಿ ಗ್ರಹಿಸುತ್ತದೆ. ಶರೀರದ ಬೊಜ್ಜಿಗಿಂತ, ಮಾನಸಿಕ ಬೊಜ್ಜು ನಮ್ಮನ್ನು ಕಾಡಬಾರದು ಎಂದರು.
‘ಎಲ್ಲಾ ಸಂಸ್ಕೃತಿಯನ್ನು ಪ್ರೀತಿಸಿ, ಆದರೆ ನಿಮ್ಮ ಸಂಸ್ಕೃತಿಯಲ್ಲಿ ಜೀವಿಸಿ. ಅತ್ಯಂತ ಶ್ರೀಮಂತ ಸಂಸ್ಕೃತಿಯನ್ನು ನಮ್ಮ ಭಾರತ ಹೊಂದಿದೆ. ಮಕ್ಕಳಿಗೆ ಕಷ್ಟ ಸುಖದ ಪರಿಚಯವನ್ನು ಪೋಷಕರು ಮಾಡಿಕೊಡಬೇಕು’ ಎಂದು ಹೇಳಿದರು.
ಪರಿಸರ ತಜ್ಞ ಬಿ.ಎಂ.ಕುಮಾರಸ್ವಾಮಿ ಮಾತನಾಡಿ, ‘ನಾರಾಯಣ್ ಸೃಜನಶೀಲತೆಯ ಅಪ್ರತಿಮ ಯೋಜಕ. 1966ರಲ್ಲಿ ವೈದ್ಯಕೀಯ ವೃತ್ತಿಯನ್ನು ಪ್ರಾರಂಭಿಸಿದ ನಾರಾಯಣ್ ಅವರು ಶಿವಮೊಗ್ಗದಲ್ಲಿ ಪ್ರಥಮ ನರ್ಸಿಂಗ್ ಹೋಂ ಪ್ರಾರಂಭಿಸಿದ ಕೀರ್ತಿ ಹೊಂದಿದ್ದಾರೆ. ಐಎಂಎ ಮೂಲಕ ನೂರಾರು ಆರೋಗ್ಯ ಸಂಬಂಧ ಕಾರ್ಯಯೋಜನೆಗಳನ್ನು ರೂಪಿಸಿ ಸಂಘಟಿಸಿದ್ದಾರೆ’ ಎಂದರು.
ನಾರಾಯಣ್ ನೇತೃತ್ವದ ಪ್ರತಿಯೊಂದು ಕಾರ್ಯಕ್ರಮವು ಯಶಸ್ಸಿನ ಪಥ ಸೇರಿರುವುದಕ್ಕೆ ನಾವೆಲ್ಲ ಸಾಕ್ಷಿಯಾಗಿದ್ದೇವೆ. ರೋಟರಿ ಮೂಲಕ ನೂರಾರು ಗ್ರಾಮೀಣ ಶಾಲೆಗಳನ್ನು ಉನ್ನತೀಕರಣಗೊಳಿಸಿದ ಕೀರ್ತಿ ಅವರದ್ದು. ದೇಶವನ್ನು ಪೋಲಿಯೊ ಮುಕ್ತಗೊಳಿಸುವ ಕಾರ್ಯದಲ್ಲಿ ಅಪ್ರತಿಮ ಯೋಧರಂತೆ ಶ್ರಮಿಸಿದ್ದಾರೆ ಎಂದು ಹೇಳಿದರು.
ಅಭಿನಂದನಾ ಸಮಿತಿ ಕಾರ್ಯದರ್ಶಿ ಎಚ್.ಎಸ್.ನಾಗಭೂಷಣ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಇಂದಿರಾ ಮುರಳೀಧರ ಪ್ರಾರ್ಥಿಸಿ, ವೈದ್ಯೆ ಡಾ.ಮೈಥಿಲಿ ಸ್ವಾಗತಿಸಿ ನೃತ್ಯ ಪ್ರಸ್ತುತ ಪಡಿಸಿದರು. ಪ್ರೊ.ಮಮತಾ ವಂದಿಸಿ, ಸಿ.ಎಂ.ನೃಪತುಂಗ ನಿರೂಪಿಸಿದರು.
ರೋಟರಿ ಪಲ್ಸ್ ಪೋಲಿಯೊ ಫಂಡ್ಗೆ ಹಣ 431 ಪುಟಗಳ ಯೋಜಕ ಅಭಿನಂದನಾ ಗ್ರಂಥಕ್ಕೆ 500 ರೂಪಾಯಿ ದರ ನಿಗದಿಪಡಿಸಲಾಗಿದ್ದು ಮಾರಾಟದಿಂದ ಬಂದ ಹಣವನ್ನು ಅಂತರಾಷ್ಟ್ರೀಯ ರೋಟರಿ ಪಲ್ಸ್ ಪೋಲಿಯೊ ಫಂಡ್ ಗೆ ಅರ್ಪಿಸಲಾಗುವುದು ಎಂದು ಗ್ರಂಥದ ಸಂಪಾದಕ ವೈದ್ಯ ತಿಳಿಸಿದರು. ಅಧ್ಯಕ್ಷತೆ ವಹಿಸಿದ್ದ ಅಭಿನಂದನಾ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ ಈ ಜಗತ್ತಿಗೆ ಬಂದ ಮೇಲೆ ಹೇಗೋ ಬದುಕಿದರಾಯಿತು ಎನ್ನುವ ಭಾವಕ್ಕಿಂತ ಹೀಗೆ ಬದುಕಬೇಕು ಎನ್ನುವ ಆತ್ಮಸ್ಥೈರ್ಯದ ಪ್ರತೀಕ ನಾರಾಯಣ್ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.