ಬಿಚಗೋಡು ಗ್ರಾಮದಲ್ಲಿರುವ ಕಲುಷಿತ ನೀರಿನ ಗುಂಡಿ
ತುಮರಿ: ಸರ್ಕಾರ ಗ್ರಾಮೀಣ ಪ್ರದೇಶದಲ್ಲಿನ ಕುಡಿಯುವ ನೀರಿನ ಸಮಸ್ಯೆ ನಿವಾರಣೆಗೆ ಪ್ರತಿ ವರ್ಷ ಕೋಟ್ಯಂತರ ರೂಪಾಯಿ ಮೀಸಲಿಡುತ್ತಿದ್ದರೂ ಯೋಜನೆಗಳ ಸಮರ್ಪಕ ಅನುಷ್ಠಾನ ಆಗುತ್ತಿಲ್ಲ. ಇದರಿಂದಾಗಿ ಜನರ ಶುದ್ಧ ಕುಡಿಯುವ ನೀರಿನ ಕನಸು ಸಾಕಾರಗೊಂಡಿಲ್ಲ.
ಸಮೀಪದ ಬಿಚಗೋಡು ಗ್ರಾಮಸ್ಥರು ನಿತ್ಯ ಕುಡಿಯುವುದಕ್ಕೆ ಕಲುಷಿತ ನೀರನ್ನೇ ಬಳಕೆ ಮಾಡುತ್ತಿದ್ದಾರೆ. ಕರೂರು ಹೋಬಳಿಯ ಕುದರೂರು ಗ್ರಾಮ ಪಂಚಾಯಿತಿ ಕಾರ್ಯಾಲಯದಿಂದ ಕೇವಲ 3 ಕಿಲೋ ಮೀಟರ್ ಅಂತರದಲ್ಲಿರುವ ಗ್ರಾಮ ಬಿಚಗೋಡು. ಇಲ್ಲಿ 11 ಕುಟುಂಬಗಳು ನೆಲೆಸಿವೆ. ಮೂರು ದಶಕಗಳು ಉರುಳಿದರೂ ಈ ಗ್ರಾಮಕ್ಕೆ ಶುದ್ಧ ನೀರು ಪೂರೈಕೆಯಾಗಿಲ್ಲ.
‘ಚುನಾವಣೆ ಬಂದಾಗ ಸಮಸ್ಯೆ ಪರಿಹರಿಸುವ ಭರವಸೆ ನೀಡುವ ಜನಪ್ರತಿನಿಧಿಗಳು, ಚುನಾವಣೆ ಮುಗಿದ ಬಳಿಕ ಗ್ರಾಮದತ್ತ ತಿರುಗಿಯೂ ನೋಡುವುದಿಲ್ಲ. ಅಧಿಕಾರಿಗಳೂ ಸಮಸ್ಯೆ ಪರಿಹರಿಸಲು ಕ್ರಮ ಕೈಗೊಂಡಿಲ್ಲ’ ಎಂದು ಗ್ರಾಮಸ್ಥರು ಆರೋಪಿಸುತ್ತಾರೆ.
‘ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿರುವುದರಿಂದ ತೋಟದ ಜೌಗು ಪ್ರದೇಶದಲ್ಲಿ ಹರಿಯುತ್ತಿರುವ ಕಲುಷಿತ ನೀರು ತಂದು, ಅದನ್ನೇ ಬಸಿದು ಬಳಕೆ ಮಾಡುತ್ತಿದ್ದಾರೆ. ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ, ಬಿಂದಿಗೆಗೆ ಬಟ್ಟೆ ಕಟ್ಟಿ, ಕಲುಷಿತ ನೀರನ್ನೇ ಸೋಸಿ ಕುಡಿಯುವಂತಹ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ. ಗ್ರಾಮ ಪಂಚಾಯಿತಿ ಆಡಳಿತವು ಇದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನ ಮಾಡಬೇಕು’ ಎಂಬುದು ಸ್ಥಳೀಯರಾದ ರಾಜೀವ್ ಬಿ.ಎನ್. ಅವರ ಆಗ್ರಹ.
‘ಗ್ರಾಮದಲ್ಲಿ ಬಳಸುತ್ತಿರುವ ಕೆರೆಯ ನೀರು ಕುಡಿಯುವುದಕ್ಕೆ ಯೋಗ್ಯವಾಗಿಲ್ಲ. ಇಂತಹ ನೀರನ್ನು ಸೇವಿಸಬಾರದು ಎಂದು ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಸಲಹೆ ನೀಡಿದ್ದಾರೆ. ಸಮೀಪದ ಸಸಿಗೊಳ್ಳಿ ವೃತ್ತದಲ್ಲಿರುವ ಬೋರ್ವೆಲ್ ಮೂಲಕ ದೂರದ ಹಳ್ಳಿಗಳಿಗೆ ನೀರು ಪೂರೈಕೆ ಆಗುತ್ತಿದೆ. ಆದರೆ ಮಧ್ಯೆ ಇರುವ ನಮ್ಮ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ನಿರ್ಲಕ್ಷ್ಯ ವಹಿಸಿದ್ದಾರೆ’ ಎಂದು ಗ್ರಾಮಸ್ಥರು ದೂರಿದ್ದಾರೆ.
‘ಜನರ ಅನುಕೂಲಕ್ಕಾಗಿ ಟ್ಯಾಂಕ್ ನಿರ್ಮಿಸಿ, ಪೈಪ್ಲೈನ್ ಮೂಲಕ ಅದಕ್ಕೆ ನೀರು ತುಂಬಿಸಬೇಕು. ಅಥವಾ ಜಲಜೀವನ್ ಮಿಷನ್ ಯೋಜನೆಯನ್ನು ನಮ್ಮ ಗ್ರಾಮದಲ್ಲೂ ಅನುಷ್ಠಾನಗೊಳಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು. ಶಾಸಕರು ಈ ಬಗ್ಗೆ ಗಮನ ಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ’ ಎನ್ನುತ್ತಾರೆ ಗ್ರಾಮಸ್ಥರಾದ ರಾಜು ಹಾಗೂ ರವಿ ಬಿಚಗೋಡು.
‘ಪಂಚಾಯಿತಿಯವರು ತೆರಿಗೆ ಕಟ್ಟಿಸಿಕೊಳ್ಳುವುಕ್ಕೆ ತೋರಿಸುವಷ್ಟು ಕಾಳಜಿಯನ್ನು ಜನರಿಗೆ ಕುಡಿಯುವ ನೀರು ಪೂರೈಸುವುಕ್ಕೆ ತೋರಿಸುತ್ತಿಲ್ಲ. 30 ವರ್ಷಗಳಿಂದ ಮನೆಯ ಕರ ಪಾವತಿ ಮಾಡುತ್ತಿದ್ದೇವೆ. ಇಷ್ಟು ವರ್ಷ ಕಂದಾಯ ಕಟ್ಟಿದ್ದರೂ ಯಾವ ಜನೋಪಯೋಗಿ ಕೆಲಸವೂ ಆಗಿಲ್ಲ. ಕಂದಾಯ ಕಟ್ಟಿದವರಿಗೆ ಅದರಿಂದ ಉಪಯೋಗವೂ ಆಗಿಲ್ಲ’ ಎಂದು ಗ್ರಾಮದ ನಿವಾಸಿಗಳಾದ ಸರೋಜಾ, ಶಶಿಕಲಾ ‘ಪ್ರಜಾವಾಣಿ’ ಎದುರು ಅಳಲು ತೋಡಿಕೊಂಡರು.
‘ಹೊಸದಾಗಿ ನೀರಿನ ಸಂಪರ್ಕ ಕಲ್ಪಿಸಲು ಹೆಚ್ಚಿನ ಅನುದಾನ ಬೇಕಿದೆ. ಕೊಳವೆಬಾವಿ ಕೊರೆಯಿಸಿ ರೈಸಿಂಗ್ ಪೈಪ್ಲೈನ್ ಹಾಕಬೇಕಾಗಿರುತ್ತದೆ. ಜೊತೆಗೆ ನೀರನ್ನು ಟ್ಯಾಂಕ್ಗೆ ಪಂಪ್ ಮಾಡಬೇಕಿದೆ. ಅದಕ್ಕಾಗಿ ಅಂದಾಜು ಪಟ್ಟಿ ತಯಾರಿಸಿ ಕಳುಹಿಸುವ ಬಗ್ಗೆ ಗ್ರಾಮ ಪಂಚಾಯಿತಿ ಸದಸ್ಯರ ಜೊತೆ ಚರ್ಚಿಸಲಾಗುವುದು’ ಎನ್ನುತ್ತಾರೆ ಕುದರೂರು ಗ್ರಾಮ ಪಂಚಾಯಿತಿ ಪಿಡಿಒ ವಿಶ್ವನಾಥ್ ಪಟ್ಟಣ ಶೆಟ್ಟಿ.
ಗ್ರಾಮದಲ್ಲಿರುವ ಕುಡಿಯುವ ನೀರಿನ ಸಮಸ್ಯೆ ಪರಿಹರಿಸಲು ಶಾಸಕರು ಮುಂದಾಗಬೇಕು. ಅಗತ್ಯ ಕ್ರಮ ಕೈಗೊಂಡು ನಿವಾಸಿಗಳ ಸಂಕಷ್ಟ ನಿವಾರಿಸಬೇಕುಸರೋಜಾ, ಸ್ಥಳೀಯರು
ಕಲುಷಿತ ನೀರು ಕುಡಿದು ಹಲವು ಬಾರಿ ಆಸ್ಪತ್ರೆ ಸೇರಿದ್ದೇವೆ. ಸ್ನಾನ, ಬಟ್ಟೆ, ಮನೆ ಸ್ವಚ್ಛತೆ, ಶೌಚಾಲಯ ಸೇರಿದಂತೆ ದಿನನಿತ್ಯದ ಬಳಕೆಗೆ ಬೇಕಾಗುವಷ್ಟು ನೀರು ಸಿಗುವುದೇ ಇಲ್ಲಶಶಿಕಲಾ, ಸ್ಥಳೀಯರು
ಬಿಚಗೋಡು ಗ್ರಾಮಕ್ಕೆ ಕುಡಿಯುವ ನೀರು ಪೂರೈಸಲು ಶಾಶ್ವತ ಕಾಮಗಾರಿ ಕೈಗೊಳ್ಳಬೇಕು. ಇದಕ್ಕೆ ಸಾಕಷ್ಟು ಅನುದಾನ ಬೇಕಿದೆ. ಗ್ರಾಮ ಪಾಥ ಪಟ್ಟಣಶೆಟ್ಟಿ, ಪಿಡಿಒ, ಕುದರೂರುಂಚಾಯಿತಿಯಲ್ಲಿ ಅಷ್ಟೊಂದು ಹಣ ಇಲ್ಲ ವಿಶ್ವನ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.