ADVERTISEMENT

ನೀತಿ ಸಂಹಿತೆ: ಸಿಎಂ ವಿರುದ್ಧ ದೂರು

​ಪ್ರಜಾವಾಣಿ ವಾರ್ತೆ
Published 2 ನವೆಂಬರ್ 2018, 12:26 IST
Last Updated 2 ನವೆಂಬರ್ 2018, 12:26 IST
ಎಚ್‌.ಡಿ. ಕುಮಾರಸ್ವಾಮಿ
ಎಚ್‌.ಡಿ. ಕುಮಾರಸ್ವಾಮಿ   

ಶಿವಮೊಗ್ಗ: ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವಿರುದ್ಧ ಶಿಕಾರಿಪುರ ತಾಲ್ಲೂಕು ಶಿರಾಳಕೊಪ್ಪ ಠಾಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣ ದಾಖಲಾಗಿದೆ.

ಕಾಂಗ್ರೆಸ್, ಜೆಡಿಎಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಪರ ಶಿರಾಳಕೊಪ್ಪದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಉಪಚುನಾವಣೆ ಬಹಿರಂಗ ಪ್ರಚಾರ ಸಭೆಯಲ್ಲಿ ಭಾಗವಹಿಸಿದ್ದ ಅವರು ನೀರಾವರಿ ಯೋಜನೆ ಜಾರಿಗೊಳಿಸುವ ಆಮಿಷ ಒಡ್ಡಿದ್ದರು ಎಂದು ಬಿಜೆಪಿ ದೂರು ಸಲ್ಲಿಸಿತ್ತು.

ಮದ್ಯದಂಗಡಿಗೆ ನೋಟಿಸ್: ಮುಖ್ಯಮಂತ್ರಿ ಬಂದು ಹೋದ ನಂತರ ಶಿಕಾರಿಪುರ ತಾಲ್ಲೂಕಿನ ಮದ್ಯದ ಅಂಗಡಿಯೊಂದರಲ್ಲಿ ಒಂದೇ ದಿನ 2 ಸಾವಿರ ಬಾಟಲಿ ಮದ್ಯ ಮಾರಾಟ ಮಾಡಲಾಗಿದೆ. ವಿವರಣೆ ಕೇಳಿ ನೋಟಿಸ್‌ ನೀಡಲಾಗಿದೆ ಎಂದು ಜಿಲ್ಲಾ ಚುನಾವಣಾಧಿಕಾರಿ ಕೆ.ಎ. ದಯಾನಂದ ಮಾಹಿತಿ ನೀಡಿದರು.

ರೈಲ್ವೆ ಇಲಾಖೆಗೆ ಪತ್ರ: ಜಿಲ್ಲೆಗೆ ಬರುವ ಮತ್ತು ಜಿಲ್ಲೆಯಿಂದ ಹೊರ ಹೋಗುವ ಕೆಲವು ರೈಲು ಬೋಗಿಗಳ ಮೇಲೆ ರಾಜ್ಯ ಸರ್ಕಾರದ ಯೋಜನೆಗಳ ಪ್ರಚಾರ ಜಾಹೀರಾತು ಇದ್ದು, ಅವುಗಳನ್ನು ತೆರವುಗೊಳಿಸುವಂತೆ ಜಿಲ್ಲಾ ಚುನಾವಣಾಧಿಕಾರಿಗಳು ರೈಲ್ವೆ ಇಲಾಖೆಗೆ ಪತ್ರ ಬರೆದಿದ್ದಾರೆ.

ಮತದಾರರಿಗೆ ಹಣ ಹಂಚಿಕೆ: ಇಲ್ಲಿನ ವಿನೋಬನಗರದಲ್ಲಿ ಶುಕ್ರವಾರ ಮತದಾರರಿಗೆ ಹಣ ಹಂಚುತ್ತಿದ್ದ ವ್ಯಕ್ತಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

ADVERTISEMENT

ಬಿಜೆಪಿ ಪರವಾಗಿ ಮತ ಹಾಕುವಂತೆ ಪ್ರತಿಯೊಬ್ಬರಿಗೂ ₹500 ವಿತರಿಸುತ್ತಿದ್ದ ವೇಳೆಯಲ್ಲಿ ವಶಕ್ಕೆ ಪಡೆದಿದ್ದಾರೆ.

ಭದ್ರಾವತಿಯಲ್ಲಿ ಪ್ರಚಾರ ಫಲಕಗಳನ್ನು ವಿದ್ಯುತ್ ಕಂಬಗಳಿಗೆ ಕಟ್ಟಿದ್ದರ ವಿರುದ್ಧ, ಚುನಾವಣಾ ಪ್ರಚಾರಕ್ಕೆ ಅನುಮತಿ ಪಡೆಯದೆ ಬಸ್ ಬಳಕೆ ಮಾಡಿರುವ ಕುರಿತೂ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.