ADVERTISEMENT

ನಕ್ಸಲ್‌ ಪೀಡಿತ ಪ್ರದೇಶದ ಅಭಿವೃದ್ಧಿಗೆ ಒತ್ತು: ಗೃಹ ಸಚಿವ ಆರಗ ಜ್ಞಾನೇಂದ್ರ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಅಕ್ಟೋಬರ್ 2021, 4:14 IST
Last Updated 17 ಅಕ್ಟೋಬರ್ 2021, 4:14 IST
ಹೊಸನಗರ ತಾಲ್ಲೂಕಿನ ಮೇಲುಸುಂಕಕ್ಕೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಬಂಕ್ರಿಬೀಡು ಮಂಜುನಾಥ್, ಶ್ರೀಧರ್, ಶೇಷಾದ್ರಿ, ದಿನೇಶ ಇದ್ದರು.
ಹೊಸನಗರ ತಾಲ್ಲೂಕಿನ ಮೇಲುಸುಂಕಕ್ಕೆ ಭೇಟಿ ನೀಡಿದ ಗೃಹ ಸಚಿವ ಆರಗ ಜ್ಞಾನೇಂದ್ರ ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದರು. ಬಂಕ್ರಿಬೀಡು ಮಂಜುನಾಥ್, ಶ್ರೀಧರ್, ಶೇಷಾದ್ರಿ, ದಿನೇಶ ಇದ್ದರು.   

ಹೊಸನಗರ: ತಾಲ್ಲೂಕಿನ ಯಡೂರು ಸುಳುಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಂಬ್ರಿಬೈಲು, ಮೇಲುಸುಂಕ, ಉಳ್ತಿಗಾ ಗ್ರಾಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುವುದು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಹೇಳಿದರು.

ಮೇಲುಸುಂಕದ ದುರ್ಗಾ ಪರಮೇಶ್ವರಿ ದೇಗುಲಕ್ಕೆ ಶುಕ್ರವಾರ ಭೇಟಿ ನೀಡಿ ಸ್ಥಳೀಯರೊಂದಿಗೆ ಅಭಿವೃದ್ಧಿ ಕುರಿತು ಸಮಾಲೋಚನೆ ನಡೆಸಿದರು.

‘ಹಿಂದೆ ಶಾಸಕನಾಗಿದ್ದಾಗ ಆ ಕಾಲದಲ್ಲೇ ನಕ್ಸಲ್ ಬಾಧಿತ ಪ್ರದೇಶ ಪಟ್ಟಿಯಲ್ಲಿ ಈ ಗ್ರಾಮಗಳನ್ನು ಸೇರಿಸಿ ₹ 90 ಲಕ್ಷ ಅನುದಾನ ತಂದಿದ್ದೆ. ಆದರೆ, ಚುನಾವಣೆಯಲ್ಲಿ ನಾನು ಸೋಲುತ್ತಿದ್ದಂತೆ ಅನುದಾನ ಬೇರೆ ಕಡೆ ಹೋಯಿತು. ಯಡೂರು, ಮಾಣಿ ಡ್ಯಾಂ, ಹುಲಿಕಲ್‌ವರೆಗೆ ರಸ್ತೆ ಅಭಿವೃದ್ಧಿಗೆ₹ 2 ಕೋಟಿ ಒದಗಿಸಲಾಗಿತ್ತು. ಮಾಣಿ ಡ್ಯಾಂನಿಂದ ಮೇಲುಸುಂಕದವರೆಗೆ 12 ಕಿ.ಮೀ. ರಸ್ತೆಯನ್ನು ಎಂಡಿಆರ್‌ಗೆ ಸೇರಿಸಲಾಗಿದೆ. ಮೇಲುಸುಂಕ ದೇವಸ್ಥಾನದಿಂದ ಬಳೆಗೋಡುವರೆಗೆ 1200 ಕಿ.ಮೀ. ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ’ ಎಂದರು.

ADVERTISEMENT

‘ತೀಥಹಳ್ಳಿ ಮತ್ತು ಹೊಸನಗರ ಭಾಗದಲ್ಲಿ ಎಲೆಚುಕ್ಕಿ ರೋಗ ಹೆಚ್ಚು ಕಂಡುಬಂದಿದೆ. ಆಗುಂಬೆ ಪ್ರದೇಶದಲ್ಲಿ ಈಗಾಗಲೇ ಪರಿಶೀಲನೆ ನಡೆಸಿದ್ದೇನೆ. ಈಗಾಗಲೇ ವಿಜ್ಞಾನಿಗಳು ಅಧ್ಯಯನ ನಡೆಸಿ ಮಾರ್ಗೋಪಾಯ ತಿಳಿಸಿದ್ದಾರೆ. ಈ ರೋಗ ಗಾಳಿಯಲ್ಲಿ ಹರಡುತ್ತಿರುವ ಕಾರಣ ಹೆಚ್ಚಿನ ಆತಂಕ ಸೃಷ್ಟಿ ಮಾಡಿದೆ’ ಎಂದರು.

‘ಮೇಲುಸುಂಕದ ದುರ್ಗಾ ಪರಮೇಶ್ವರಿ ದೇವಸ್ಥಾನಕ್ಕೆ ವಿಶೇಷ ಶಕ್ತಿ ಇದೆ. 1983ರಿಂದಲೂ ಇಲ್ಲಿಗೆ ಭೇಟಿ ನೀಡುತ್ತಿದ್ದೇನೆ. ಇಲ್ಲಿನ ವಾತಾವರಣದಿಂದ ಮತ್ತೆ ಮತ್ತೆ ಬರಬೇಕು ಎನಿಸುತ್ತದೆ’ ಎಂದರು.

ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಬಂಕ್ರಿಬೀಡು ಮಂಜುನಾಥ್, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಎ.ವೈ. ಶ್ರೀಧರ, ಸುಳುಗೋಡು ಗ್ರಾಮ ಪಂಚಾಯಿತಿ ಸದಸ್ಯ ಶೇಷಾದ್ರಿ, ದೇವಸ್ಥಾನ ಸಮಿತಿಯ ಅಶೋಕ ಪಟೇಲ್, ನಾಗೇಶಗೌಡ್ರು, ದಿನೇಶ, ಬಸವರಾಜ, ಗ್ರಾಮಸ್ಥರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.