ಶಿವಮೊಗ್ಗ: ಕೊಳಗ, ಪಾವು, ಸೇರು, ಅಡಿಕೆ ಸುಲಿಯುವ ಕತ್ತಿ, ಮೆಟ್ಟುಗತ್ತಿ, ದರಗಿನ ಕೊಕ್ಕೆ, ನೊಳ್ಳಿ, ಹಲಸಿನ ಹಣ್ಣುಗಳು, ನೊಳ್ಳಿ, ಕೈ ಕೊಡಲಿ, ಗೆರ್ಸಿ, ಬಾಯಿ ಕೊಕ್ಕೆ, ಹಾಳೆ ಕೊಟ್ಟೆ, ಗೊಂಬೆಗಳು ಹೀಗೆ ಪರಂಪರಾಗತವಾಗಿ ಮಲೆನಾಡಿಗರ ಬದುಕಿನ ಭಾಗವಾಗಿದ್ದದೇಸಿ ಸಾಮಗ್ರಿಗಳ ಮೇಳ ಇಲ್ಲಿನಜೆ.ಎನ್.ಎನ್ ಎಂಜಿನಿಯರಿಂಗ್ ಕಾಲೇಜಿನ ಎಂಬಿಎ ವಿಭಾಗದಲ್ಲಿ ಅನಾವರಣಗೊಂಡಿತ್ತು.
ಆಧುನಿಕತೆಯ ಭರಾಟೆಗೆ ಸಿಲುಕಿ ಕಣ್ಮರೆಯಾಗುತ್ತಿರುವ ಕೃಷಿ ಪರಿಕರಗಳನ್ನು ಮಲೆನಾಡು ಮೇಳ - 2022 ಕಾರ್ಯಕ್ರಮದಲ್ಲಿ ಪ್ರದರ್ಶನಕ್ಕೆ ಇಡಲಾಗಿತ್ತು. ವಿದ್ಯಾರ್ಥಿಗಳು ದೇಸಿ ಉಡುಗೆ ತೊಟ್ಟು ಸಂಭ್ರಮಿಸಿದರು.
ಮಲೆನಾಡಿನ ಬದುಕು ರೂಪಾಂತರಗೊಂಡಿದೆ. ಅದರೆ ಅಲ್ಲಿನ ಸೊಗಡು ಹಾಗೆಯೇ ಉಳಿದಿದೆ. ರೂಪಾಂತರತೆ ಮೂಲಕ ಕಳೆದು ಹೋಗುತ್ತಿರುವ ಮೂಲ ಮಲೆನಾಡಿನ ಸೊಗಡನ್ನು ಉಳಿಸಿಕೊಳ್ಳಬೇಕಿದೆ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷ ಜಿ.ಎಸ್.ನಾರಾಯಣರಾವ್ ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
‘ಅಂದಿನ ದಿನಮಾನದಲ್ಲಿ ಒಮ್ಮೆಯೂ ಅವಲಕ್ಕಿ ಕೊಳ್ಳುವುದು ಗೊತ್ತಿರಲಿಲ್ಲ. ಮನೆಯಲ್ಲಿಯೇ ಒನಕೆ ಮೂಲಕ ಕುಟ್ಟಿ ಮಾಡುತ್ತಿದ್ದ ಅವಲಕ್ಕಿಯು ಅದ್ಭುತ ರುಚಿ ನೀಡುತ್ತಿತ್ತು. ಆದರೆ, ಇಂದು ಎಲ್ಲವೂ ಕೃತಕವಾಗಿದೆ. ಎಲ್ಲವನ್ನು ಕೊಳ್ಳುವ ಶಕ್ತಿ ಪಡೆದುಕೊಂಡಿರಬಹುದು. ಅದರೆ ಸಂಭ್ರಮಿಸುವ ಗುಣ ನಾವು ಕಳೆದುಕೊಂಡಿದ್ದೇವೆ’ ಎಂದು ವಿಷಾದಿಸಿದರು.
ಜೆ.ಎನ್.ಎನ್.ಸಿ.ಇ ಪ್ರಾಂಶುಪಾಲ ಡಾ.ಕೆ.ನಾಗೇಂದ್ರಪ್ರಸಾದ್ ಅಧ್ಯಕ್ಷತೆ ವಹಿಸಿದ್ದರು. ಪ್ರಗತಿಪರ ಕೃಷಿಕ ನಾಗಭೂಷಣ್ ಭಟ್, ರಾಷ್ಟ್ರೀಯ ಶಿಕ್ಷಣ ಸಮಿತಿ ಉಪಾಧ್ಯಕ್ಷ ಸಿ.ಆರ್.ನಾಗರಾಜ, ಕಾರ್ಯದರ್ಶಿ ಎಸ್.ಎನ್.ನಾಗರಾಜ, ಖಜಾಂಚಿ ಡಿ.ಜಿ.ರಮೇಶ್, ನಿರ್ದೇಶಕರಾದ ಟಿ.ಆರ್.ಅಶ್ವಥನಾರಾಯಣ ಶೆಟ್ಟಿ, ಎನ್.ಟಿ.ನಾರಾಯಣರಾವ್, ಹೆಚ್.ಸಿ.ಶಿವಕುಮಾರ್, ಎಂಬಿಎ ವಿಭಾಗದ ನಿರ್ದೇಶಕ ಡಾ.ಸಿ.ಶ್ರೀಕಾಂತ್, ಸಹ ಪ್ರಾಧ್ಯಾಪಕ ಡಾ.ಬಿ.ವಿ.ಶ್ರೀನಿವಾಸಮೂರ್ತಿ, ಪ್ರೊ.ಅನುರಾಧ, ಡಾ.ಸುಭದ್ರ, ಡಾ.ವಿಕ್ರಮ್ ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.