ADVERTISEMENT

ಶಿವಮೊಗ್ಗ: ಬಸವೇಶ್ವರರ ಪುತ್ಥಳಿ ಸ್ಥಾಪನೆಗೆ ಸಂಪುಟ ಅಸ್ತು

​ಪ್ರಜಾವಾಣಿ ವಾರ್ತೆ
Published 16 ಜುಲೈ 2021, 4:38 IST
Last Updated 16 ಜುಲೈ 2021, 4:38 IST
ಶಿವಮೊಗ್ಗ ನಗರದಲ್ಲಿ ಸ್ಥಾಪಿಸಲಿರುವ ಬಸವೇಶ್ವರ ಪುತ್ಥಳಿ
ಶಿವಮೊಗ್ಗ ನಗರದಲ್ಲಿ ಸ್ಥಾಪಿಸಲಿರುವ ಬಸವೇಶ್ವರ ಪುತ್ಥಳಿ   

ಶಿವಮೊಗ್ಗ: ನಗರದ ಡಿವಿಎಸ್‌ ವೃತ್ತದ ಬಳಿ ಗಾಂಧಿ ಪಾರ್ಕ್‌ ಮುಂದೆ ಬಸವೇಶ್ವರರ ಪುತ್ಥಳಿ ಸ್ಥಾಪಿಸಲು ಸಚಿವ ಸಂಪುಟ ಅನುಮೋದನೆ ನೀಡಿದೆ.

ಲಂಡನ್‌ನ ಲ್ಯಾಂಬೆತ್ ಬಸವೇಶ್ವರ ಫೌಂಡೇಷನ್ ₹ 30 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ಬಸವೇಶ್ವರ ಪುತ್ಥಳಿಯನ್ನು ಫೌಂಡೇಷನ್‌ ಅಧ್ಯಕ್ಷ ಡಾ.ನೀರಜ್ ಪಾಟೀಲ್ ಅವರು ಮೂರು ವರ್ಷಗಳ ಹಿಂದೆ ಶಿವಮೊಗ್ಗ ಮಹಾನಗರ ಪಾಲಿಕೆ ಮೇಯರ್ ಏಳುಮಲೈ, ಪಾಲಿಕೆ ಸದಸ್ಯ ಎಚ್.ಸಿ. ಯೋಗೀಶ್ ಅವರಿಗೆ ಹಸ್ತಾಂತರಿಸಿದ್ದರು. ಶಿವಮೊಗ್ಗ ಬಸವೇಶ್ವರ ವೃತ್ತದ ಸಮೀಪ ಗಾಂಧಿ ಪಾರ್ಕ್‌ ಆವರಣದಲ್ಲಿ 3 ಅಡಿ ಎತ್ತರದ ಈ ಬಸವೇಶ್ವರರ ಕಂಚಿನ ಪುತ್ಥಳಿ ಸ್ಥಾಪಿಸಲು ಸಿದ್ಧತೆ ನಡೆದಿತ್ತು. ಆದರೆ, ಕಾನೂನು ತೊಡಕುಗಳ ಕಾರಣ ಸ್ಥಾಪನೆ ಕಾರ್ಯ ನನೆಗುದಿಗೆ ಬಿದ್ದಿತ್ತು.

ಲಂಡನ್‌ನಿಂದ ತಂದಿದ್ದ ಪ್ರತಿಮೆ ಗೋದಾಮಿನಲ್ಲೇ ಮಲಗಿತ್ತು. ಈ ಕುರಿತು ಹಲವು ಪ್ರತಿಭಟನೆಗಳು ನಡೆದಿದ್ದವು. ಬಸವಕೇಂದ್ರ, ವೀರಶೈವ ಮಹಾಸಭಾ,ಶರಣ ಸಾಹಿತ್ಯ ಪರಿಷತ್ತು ಮೊದಲಾದ ಸಂಘಟನೆಗಳು, ನಿರಂತರ ಮನವಿ ಸಲ್ಲಿದ್ದವು.ಪಾಲಿಕೆ ಸಾಮಾನ್ಯ ಸಭೆಯಲ್ಲೂ ಚರ್ಚೆಗಳು ನಡೆದು ಆಕ್ರೋಶ ವ್ಯಕ್ತವಾಗಿತ್ತು. ಕೊನೆಗೂಪುತ್ಥಳಿ ಸ್ಥಾಪನೆಗೆ ಇದ್ದ ಕಾನೂನು ತೊಡಕುಗಳು ನಿವಾರಣೆ
ಯಾಗಿವೆ. ಸರ್ಕಾರದ ಅನುಮತಿ ದೊರೆತಿದೆ.

ADVERTISEMENT

‘ಬಸವ ಜಯಂತಿ ಆಚರಣೆಯ ಸಮಯದಲ್ಲಿ ಕೇವಲ ಚರ್ಚೆಗೆ ಸೀಮಿತವಾಗಿದ್ದಂತಹ ಬಸವ ಪುತ್ಥಳಿಯ ಸ್ಥಾಪನೆ ವಿಚಾರ ತಾರ್ಕಿಕ ಅಂತ್ಯ ಕಂಡಿರುವುದು ಸಂತೋಷದ ಸಂಗತಿ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಚಿವ ಸಂಪುಟದಲ್ಲಿ ಅನುಮೋದನೆ ನೀಡಿದ್ದಾರೆ. ಅವರಿಗೆ ಶಿವಮೊಗ್ಗದ ಸರ್ವ ನಾಗರಿಕರ ಪರವಾಗಿ ಅಭಿನಂದನೆ ಸಲ್ಲಿಸುತ್ತೇವೆ. ಆನಂದಪುರ ಜಗದ್ಗುರುಗಳು ಮತ್ತು ನಮ್ಮ ಬಹಳ ದಿನಗಳ ಅಭೀಪ್ಸೆ ಹಾಗೂ ಸಮಾಜದವರ ಅಪೇಕ್ಷೆ ಇಂದು ಈಡೇರಿದೆ. ಈ ಕಾರ್ಯ ಆಗುವಲ್ಲಿ ಸಹಕರಿಸಿದ ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಕೆ.ಎಸ್.ಈಶ್ವರಪ್ಪ ಹಾಗೂ ವಿಶೇಷ ಪ್ರಯತ್ನ ಮಾಡಿದ ಸಂಸದರಾದ ಬಿ.ವೈ.ರಾಘವೇಂದ್ರ, ರಾಜ್ಯ
ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ, ಪಾಲಿಕೆ ಸದಸ್ಯ ಎಚ್.ಸಿ.ಯೋಗೀಶ್ ಹಾಗೂ ಪಾಲಿಕೆಯ ಎಲ್ಲ ಸದಸ್ಯರಿಗೆ, ಅಧಿಕಾರಿಗಳಿಗೆ ನಮ್ಮ ಅಭಿನಂದನೆ’ ಎಂದು ಬಸವ ಕೇಂದ್ರದ ಡಾ. ಬಸವ ಮರುಳಸಿದ್ಧ ಸ್ವಾಮೀಜಿಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.