ಬಂಧನ
(ಪ್ರಾತಿನಿಧಿಕ ಚಿತ್ರ)
ಶಿವಮೊಗ್ಗ: ಸರಗಳವು ಹಾಗೂ ಒಂಟಿ ಮನೆಗಳನ್ನು ಗುರುತಿಸಿ ದರೋಡೆ ಮಾಡುತ್ತಿದ್ದ ನಾಲ್ವರು ಕುಖ್ಯಾತ ಅಂತರರಾಜ್ಯ ದರೋಡೆಕೋರರನ್ನು ಇಲ್ಲಿನ ವಿನೋಬನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ ಚಿನ್ನಾಭರಣ, ನಗದು ಹಾಗೂ ಬೈಕ್ ಸೇರಿದಂತೆ ₹25 ಲಕ್ಷ ಮೊತ್ತದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ.
ತಮಿಳುನಾಡಿನ ತಿರುವಣ್ಣಾಮಲೈ ತಾಲ್ಲೂಕು ಸೋಮಾಸಿಪಡಿ ಗ್ರಾಮದ ಅರಸು ಅಲಿಯಾಸ್ ಆರ್.ವಲ್ಲರಸು (25), ಸೇಲಂ ನಿವಾಸಿ ಕೇಶವನ್ (40), ಹೊಸೂರು ತಾಲ್ಲೂಕು ಬತ್ತಲಪಲ್ಲಿ ನಿವಾಸಿ, ಡ್ರೈವರ್ ಸತೀಶ್ಕುಮಾರ್ (40) ಹಾಗೂ ಬೆಂಗಳೂರಿನ ಪಾದರಾಯನಪುರ ಜೆ.ಜೆ.ಆರ್ ನಗರದ ಒಂದನೇ ಕ್ರಾಸ್ ನಿವಾಸಿ ಕಾಲು ಅಲಿಯಾಸ್ ಇಬ್ರಾಹಿಂ ಪಾಶಾ (43) ಬಂಧಿತರು.
ಕಳೆದ ನ. 18ರಂದು ವಿನೋಬನಗರದ 16ನೇ ಅಡ್ಡ ರಸ್ತೆಯಲ್ಲಿ ಹಿಂಬದಿಯಿಂದ ನಡೆದುಕೊಂಡು ಬಂದ ವ್ಯಕ್ತಿಯೊಬ್ಬ ಪಾದಚಾರಿ ಮಹಿಳೆಯ ಕೊರಳಿನಿಂದ ಚಿನ್ನದ ಸರ ಕಿತ್ತುಕೊಂಡು ಬೈಕ್ ಹತ್ತಿಕೊಂಡು ಸಹಚರನೊಂದಿಗೆ ಪರಾರಿಯಾಗಿದ್ದನು. ಈ ಬಗ್ಗೆ ಸರ ಕಳೆದುಕೊಂಡ ಮಹಿಳೆ ಹೊನ್ನಮ್ಮ ವಿನೋಬನಗರ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಆರೋಪಿಗಳ ಪತ್ತೆಗೆ ಇನ್ಸ್ಪೆಕ್ಟರ್ ಸಂತೋಷ್ಕುಮಾರ್ ಹಾಗೂ ಪಿಎಸ್ಐ ಜಿ.ತಿರುಮಲೇಶ್ ನೇತೃತ್ವದಲ್ಲಿ ಎಸ್ಪಿ ಬಿ.ನಿಖಿಲ್ ವಿಶೇಷ ತಂಡ ರಚಿಸಿದ್ದರು.
ತನಿಖೆ ನಡೆಸಿದ ಪೊಲೀಸರ ತಂಡ ವಲ್ಲರಸು ಮತ್ತು ಇಬ್ರಾಹಿಂ ಪಾಶಾ ಅವರನ್ನು ಬಂಧಿಸಿ ₹ 4.80 ಲಕ್ಷ ಮೌಲ್ಯದ 40 ಗ್ರಾಂ ತೂಕದ ಬಂಗಾರದ ಗಟ್ಟಿ ಹಾಗೂ ₹1.50 ಲಕ್ಷ ಮೌಲ್ಯದ ಬಜಾಜ್ ಪಲ್ಸರ್ ಬೈಕ್ ವಶಪಡಿಸಿಕೊಂಡಿದ್ದಾರೆ.
ಅವರು ನೀಡಿದ ಮಾಹಿತಿ ಆಧರಿಸಿ ಕೇಶವನ್ ಹಾಗೂ ಸತೀಶ್ ಕುಮಾರ್ ಅವರನ್ನು ಬಂಧಿಸಿ ₹8.50 ಲಕ್ಷ ಮೌಲ್ಯದ 70 ಗ್ರಾಂ ತೂಕದ ಮಾಂಗಲ್ಯ ಹಾಗೂ ಮೈಸೂರು ಜಿಲ್ಲೆ ಪಿರಿಯಾಪಟ್ಟಣ ಠಾಣೆ ವ್ಯಾಪ್ತಿಯಲ್ಲಿ ನಡೆಸಿದ್ದ ಕಳ್ಳತನಕ್ಕೆ ಸಂಬಂಧಿಸಿದಂತೆ ₹10.20 ಲಕ್ಷ ಮೌಲ್ಯದ 60 ಗ್ರಾಂ ತೂಕದ ಬಂಗಾರದ ಆಭರಣ ಸೇರಿದಂತೆ ಅಂದಾಜು ಮೌಲ್ಯ ₹25 ಲಕ್ಷ ಮೌಲ್ಯದ ಸ್ವತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.