ಶಿವಮೊಗ್ಗ: ಕಲ್ಲಹಳ್ಳಿ ಪ್ರಿಯದರ್ಶಿನಿ ಆಂಗ್ಲ ಮಾಧ್ಯಮ ಶಾಲೆಯ 151 ಮಕ್ಕಳು ಬುಧವಾರ ಮಹಾತ್ಮ ಗಾಂಧೀಜಿ ವೇಷ ಧರಿಸಿ ‘ಗಾಂಧಿ ನಡಿಗೆ’ಯಲ್ಲಿ ಭಾಗವಹಿಸಿದ್ದರು.
ಲಕ್ಷ್ಮಿ ಚಿತ್ರಮಂದಿರದಿಂದ ಗಾಂಧಿ ಪಾರ್ಕ್ವರೆಗೆ ನಡೆದ ಈ ನಡಿಗೆ ನಾಗರಿಕರ ಮೆಚ್ಚುಗೆ ಗಳಿಸಿತು. ಗಾಂಧೀಜಿ ರೀತಿ ಅರ್ಧಪಂಚೆ, ತೊಟ್ಟು, ಕನ್ನಡಕ ಧರಿಸಿದ ಮಕ್ಕಳು ಕೈಯಲ್ಲಿ ಕೋಲು ಹಿಡಿದು ನಡೆದ ರೀತಿ ‘ದಂಡಿ ಸತ್ಯಾಗ್ರಹ’ ನೆನಪಿಸುವಂತಿತ್ತು. ನಡಿಕೆಯ ಜತೆ ಬ್ಯಾಂಡ್, ಭೂಸೇನೆ, ನೌಕಾದಳ, ವಾಯುಸೇನೆಯ ಛದ್ಮವೇಷಗಳನ್ನು ಧರಿಸಿದ್ದ ಮಕ್ಕಳು ಗಾಂಧಿ ನಡಿಗೆಗೆ ಸಾಥ್ ನೀಡಿದರು.
ರೈತ ಮುಖಂಡ ಡಾ.ಚಿಕ್ಕಸ್ವಾಮಿ ನಡಿಗೆಗೆ ಚಾಲನೆ ನೀಡಿದರು. ಗಾಂಧಿ ಪಾರ್ಕ್ ತಲುಪಿದ ನಂತರ ಅಲ್ಲಿನ ಜನರಿಗೆ ಕಡಲೆಕಾಯಿ, ಪಾನಕ ಹಂಚಲಾಯಿತು. ಈ ಸಮಯದಲ್ಲಿ ಮಾತನಾಡಿದ ಸಂಸ್ಥೆಯ ಕಾರ್ಯದರ್ಶಿ ಎನ್.ರಮೇಶ್, ಗಾಂಧೀಜಿ ವಿಶ್ವ ಕಂಡ ಮಹಾನ್ ನಾಯಕ. ಅವರು ಅನುಸರಿಸಿದ ಸತ್ಯ, ಅಹಿಂಸೆ ವಿಶ್ವಕ್ಕೇ ಮಾದರಿ. ಇಂದಿಗೂ ಅವರ ಮೌಲ್ಯಗಳು ಪ್ರಸ್ತುತ. ಮಕ್ಕಳಿಗೆ ಗಾಂಧಿ ವೇಷವನ್ನು ಹಾಕುವುದರ ಮೂಲಕ ಅವರ ಮೌಲ್ಯಗಳನ್ನು ಕಲಿಸಲು ಪ್ರೋತ್ಸಾಹ ನೀಡಲಾಗಿದೆ. ರಾಷ್ಟ್ರಪ್ರೇಮ ವಿಸ್ತರಿಸುವ ಕೆಲಸ ಶಾಲೆ ಮಾಡಿದೆ ಎಂದರು.
ಪ್ರಾಂಶುಪಾಲರಾದ ಸುನಿತಾ ದೇವಿ, ಶಿಕ್ಷಕ ಪ್ರವೀಣ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.