ಹೊಸನಗರ: ಪಟ್ಟಣದ ಹಿಂದೂ ಮಹಾಸಭಾ ವತಿಯಿಂದ ಪ್ರತಿಷ್ಠಾಪಿಸಿದ್ದ ಗಣೇಶೋತ್ಸವ ಸಮಾರಂಭ 15 ದಿನಗಳ ಕಾಲ ಅದ್ದೂರಿಯಾಗಿ ನಡೆಯಿತು. ಬುಧವಾರ ಮಧ್ಯಾಹ್ನ ಗಣಪತಿ ಮೂರ್ತಿ ವಿಸರ್ಜನಾ ಶೋಭಾಯಾತ್ರೆ ವಿಜೃಂಭಣೆಯಿಂದ ನಡೆಯಿತು.
ಮೂಲೆಗದ್ದೆ ಸದಾನಂದ ಶಿವಯೋಗಾಶ್ರಮದ ಅಭಿನವ ಚನ್ನಬಸವ ಸ್ವಾಮೀಜಿ ಮೆರವಣಿಗೆಗೆ ಚಾಲನೆ ನೀಡಿದರು.
ಇಲ್ಲಿನ ಅಂಚೆ ಕಚೇರಿ ಪಕ್ಕದ ವೀರ ಸಾವರ್ಕರ್ ಮಂಟಪದಿಂದ ಹೊರಟ ವಿಸರ್ಜನಾ ಪೂರ್ವ ಮೆರವಣಿಗೆ ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ಗಣಪತಿ ದೇವಸ್ಥಾನದ ಪಕ್ಕದ ಪುಷ್ಕರಣಿಯಲ್ಲಿ ಗುರುವಾರ ಬೆಳಿಗ್ಗೆ ವಿಸರ್ಜನೆ ನಡೆಯಲಿದೆ.
ಮೆರವಣಿಗೆಯಲ್ಲಿ ಕಲಾತಂಡಗಳು ಕಲಾ ಪ್ರಕಾರಗಳನ್ನು ಪ್ರದರ್ಶಿಸಿದವು. ನಾಸಿಕ್ ಡೋಲು, ತಟ್ಟಿರಾಯ ಕುಣಿತ, ಜಾನಪದ ಕುಣಿತ ಪ್ರೇಕ್ಷಕರನ್ನು ರಂಜಿಸಿದವು. ಸುತ್ತಮುತ್ತಲಿನ ಹಳ್ಳಿಗಳಿಂದಲೂ ಸಾವಿರಾರು ಸಂಖ್ಯೆಯಲ್ಲಿ ಬಂದ ಭಕ್ತರು ಹಾಡು ಕುಣಿತಕ್ಕೆ ಕುಣಿದುಕುಪ್ಪಳಿಸಿದರು. ಯುವ ಸಮೂಹ ಮೆರವಣಿಗೆ ಉದ್ದಕ್ಕೂ ಕುಣಿದು ಸೊಬಗು ಹೆಚ್ಚಿಸಿತು.
ಶೋಭಾಯಾತ್ರೆಯಲ್ಲಿ ನಿರೀಕ್ಷೆಗೂ ಮೀರಿದ ಜನರು ಭಾಗವಹಿಸಿದ್ದರು. ಪಟ್ಟಣವನ್ನು ಕೇಸರಿಮಯವಾಗಿ ಶೃಂಗರಿಸಲಾಗಿತ್ತು. ಇಲ್ಲಿನ ಹಳೇ ಕೋರ್ಟ್ ಸರ್ಕಲ್, ಬಸ್ ನಿಲ್ದಾಣ, ಎಸ್.ಎನ್. ರಸ್ತೆಯಲ್ಲಿ ಜನ ಸಾಗರವೇ ಸೇರಿತ್ತು.
ಮೆರವಣಿಗೆಯಲ್ಲಿ ಮಾಜಿ ಶಾಸಕ ಬೇಳೂರು ಗೋಪಾಲಕೃಷ್ಣ, ಮಹಾಸಭಾದ ಸಂಚಾಲಕ ಎಂ.ಎನ್. ರಾಜು, ಸಹ ಸಂಚಾಲಕ ಸಂತೋಷ್ ನಂದಿ, ಗೌರವ ಸಂಚಾಲಕ ರಾಧಾಕೃಷ್ಣ ಪೂಜಾರಿ, ಪಟ್ಟಣ ಪಂಚಾಯಿತಿ ಸದಸ್ಯ ಸುರೇಂದ್ರ ಕೋಟ್ಯಾನ್, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸುರೇಶ್ ಸ್ವಾಮಿರಾವ್, ಪ್ರಮುಖರಾದ ಉಮೇಶ ಕಂಚುಗಾರ್, ವಿಜೇಂದ್ರ ಶೇಟ್, ಎಂ.ಎನ್. ಸುಧಾಕರ್, ಗಣಪತಿ ಬೆಳಗೋಡು. ಎನ್.ಆರ್.ದೇವಾನಂದ್, ಬಿ.ಎಸ್. ಸುರೇಶ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.