ಹೊಸನಗರ: ಕಾರ್ತಿಕ ಮಾಸದ ಅಂಗವಾಗಿ ಪಟ್ಟಣದ ಗಣಪತಿ ದೇವಸ್ಥಾನದ ಪುಷ್ಕರಣಿಯಲ್ಲಿ ಕರ್ನಾಟಕ ರತ್ನ ಪುನೀತ್ ರಾಜ್ಕುಮಾರ್ ಕನ್ನಡ ಸಂಘ ಹಾಗೂ ವಿವಿಧ ಸಂಘಗಳ ಆಶ್ರಯದಲ್ಲಿ ಅದ್ಧೂರಿ ಗಂಗಾರತಿ ಕಾರ್ಯಕ್ರಮ ನೆರವೇರಿತು.
ಶತಮಾನದ ಇತಿಹಾಸ ಹೊಂದಿರುವ ಇಲ್ಲಿನ ಗಣಪತಿ ದೇವಸ್ಥಾನದ ಪುಷ್ಕರಣಿಯನ್ನು ಅಭಿವೃದ್ಧಿಪಡಿಸುವ ಸಂಕಲ್ಪದೊಂದಿಗೆ ಹಮ್ಮಿಕೊಂಡಿದ್ದ ಅದ್ಧೂರಿ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ಭಾಗವಹಿಸಿದ್ದರು.
ವಿದ್ಯುತ್ ದೀಪಾಲಂಕಾರ ದೊಂದಿಗೆ ಕಂಗೊಳಿಸುತ್ತಿದ್ದ ಪುಷ್ಕರಣಿಯಲ್ಲಿ ಪ್ರತಿಯೊಬ್ಬರೂ ದೀಪ ಹಚ್ಚಿ ಗಂಗಾಮಾತೆಗೆ ಭಕ್ತಿ ಸಮರ್ಪಿಸಿದರು.
ಪಟ್ಟಣದ ಪ್ರಮುಖ ಪುರೋಹಿತರಾದ ಕೃಷ್ಣಮೂರ್ತಿ ಭಟ್, ರಾಘವೇಂದ್ರ ಭಟ್, ವೇಣುಗೋಪಾಲ್ ಹಾಗೂ ಶೇಷಾದ್ರಿ ಭಟ್ ನೇತೃತ್ವದಲ್ಲಿ ಪೂಜಾ ಕೈಂಕರ್ಯಗಳು ನೇರವೇರಿದವು. ನೂರಾರು ಜನರು ಸರದಿ ಸಾಲಿನಲ್ಲಿ ನಿಂತು ಗಂಗಾರತಿಯ ದೃಶ್ಯವನ್ನು ಕಣ್ತುಂಬಿಕೊಂಡರು.
ಕುವೆಂಪು ಹಾಗೂ ಮೂರಾರ್ಜಿ ವಸತಿ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಶೇಷ ಮೆರುಗು ನೀಡಿದರು. ಪಟ್ಟಣದ ಹಿರಿಯ ಪುರೋಹಿತ ವರ್ಗಕ್ಕೆ ಸಂಘದ ವತಿಯಿಂದ ಗೌರವಿಸಲಾಯಿತು.
ರಾಜ್ಯ ಅಂಬೇಡ್ಕರ್ ಅಭಿವೃದ್ಧಿ ನಿಗಮದ ನಿರ್ದೇಶಕ ಎನ್.ಆರ್.ದೇವಾನಂದ್, ಪುನೀತ್ ರಾಜ್ಕುಮಾರ್ ಕನ್ನಡ ಸಂಘದ ಪ್ರಶಾಂತ್ ಕೆಇಬಿ, ವಿನಯ್ಕುಮಾರ್, ರಾಜೇಶಗೌಡ, ಕೃಷ್ಣವೇಣಿ, ಸದಸ್ಯರಾದ ಶ್ರೀಪತಿರಾವ್, ಗಾಯತ್ರಿ ನಾಗರಾಜ್, ಸಂತೋಷ್ ಶೇಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.