ತ್ಯಾಗರ್ತಿ: ಸಮೀಪದ ಗೌತಮಪುರದಲ್ಲಿ ಗೋಪೂಜೆ ಮತ್ತು ಹಗಲು ದುರ್ಗಿ ಉತ್ಸವ ಶ್ರದ್ಧಾ, ಭಕ್ತಿಯಿಂದ ಈಚೆಗೆ ನಡೆಯಿತು.
ಬಲಿಪಾಡ್ಯಮಿ ಹಬ್ಬದ ದಿನ ಸಂಜೆ ಗೋಕಲ್ಲಿನ ದೇವರಾದ ಹಗಲು ದುರ್ಗಿಗೆ ಬಲಿ ಪೂಜೆ ನಡೆಸಿ ಅನ್ನದಲ್ಲಿ ಮಿಶ್ರಣ ಮಾಡಿ ಜಾನುವಾರಿಗೆ ಪ್ರೋಕ್ಷಣೆ ಮಾಡುವ ವಿಶಿಷ್ಟ ಹಬ್ಬ ಇದು.
ತ್ಯಾಗರ್ತಿ ರಸ್ತೆಯಲ್ಲಿ ಹಗಲು ದುರ್ಗಿ ದೇವರು, ಗೋಕಲ್ಲು, ಮಾರಿಕಲ್ಲು ಮತ್ತು ಭೂತರಾಯನ ನೆಲೆಯಿದೆ. ಹಗಲು ದುರ್ಗಿ ದೇವರಿಗೆ ತೆಂಗಿನ ಕಾಯಿ ಮತ್ತು ಹಣ್ಣಿನ ನೈವೇದ್ಯ ಸಮರ್ಪಣೆಯಾಗುತ್ತದೆ. ಬಲಿಪೂಜೆ ಬಳಿಕ ಉರುಸಲು (ಹಗಲುದುರ್ಗಿ ಪ್ರಸಾದ) ಸಿದ್ಧ ಮಾಡಲಾಗುತ್ತದೆ. ಬಲಿ ಪೂಜೆ ನಡೆಯುತ್ತಿದ್ದಂತೆ ಗ್ರಾಮಸ್ಥರೆಲ್ಲ ದೇವಿಗೆ ಹಣ್ಣು ಕಾಯಿ ನೈವೇದ್ಯ ಸಮರ್ಪಿಸಿದರು.
ಸಂಜೆ ಗ್ರಾಮದ ಮಾರಿಕಾಂಬಾ ದೇವಾಲಯದ ಮುಂಭಾಗದಿಂದ ಗ್ರಾಮದ ಎಲ್ಲ ಜಾನುವಾರನ್ನು ಕರೆತಂದರು. ಹಸು, ಕರು ಮತ್ತು ಎತ್ತುಗಳಿಗೆ ಮಾತ್ರ ಪ್ರವೇಶವಿದ್ದು, ಕೋಣಗಳಿಗೆ ಪ್ರವೇಶ ಇಲ್ಲ. ಹೀಗೆ ಸಾಲಾಗಿ ಸಾಗಿ ಬಂದ ಹಸು-ಕರು ಎತ್ತುಗಳಿಗೆ ಮಾರಿಕಲ್ಲು ಭೂತರಾಯನ ಕಟ್ಟೆಯ ಮುಂಭಾಗದಲ್ಲಿ ಉರುಸಲನ್ನು ಮೈ ಮೇಲೆ ಎರಚಲಾಯಿತು. ಹೀಗೆ ಮಾಡುವುದರಿಂದ ಜಾನುವಾರಿಗೆ ಬರುವ ರೋಗಗಳು ದೂರವಾಗುತ್ತದೆ ಎಂಬ ನಂಬಿಕೆ ಗ್ರಾಮಸ್ಥರದ್ದು.
ಉರುಸಲು ಎರಚುವಾಗ ಡೋಲು ಬಾರಿಸಿ, ಪಟಾಕಿ ಸಿಡಿಸಿ ಜಾನುವಾರನ್ನು ಜೋರಾಗಿ ಓಡಿಸಿದರು. ಜಾನುವಾರು ಬಹುಬೇಗ ಮನೆಗೆ ತಲುಪಿದರೆ ಆ ಕುಟುಂಬಸ್ಥರಿಗೆ ಒಳಿತಾಗುತ್ತದೆ ಎಂಬ ನಂಬಿಕೆಯೂ ಇದೆ.
ಉತ್ಸವ ವೀಕ್ಷಿಸಲು ಗ್ರಾಮದ ಮಹಿಳೆಯರು, ಮಕ್ಕಳು, ವೃದ್ಧರು ಗುಂಪು ಗುಂಪಾಗಿ ಸೇರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.