ಸಾಗರ: ಸಮೀಪದ ಸೂರನಗದ್ದೆ ಗ್ರಾಮದಲ್ಲಿ ಐದು ವರ್ಷಗಳಿಗೊಮ್ಮೆ ಆಚರಿಸುವ ಬೀರಪ್ಪ ದೇವರ ಉತ್ಸವಕ್ಕೆ ಸೋಮವಾರ ಸಂಭ್ರಮದ ಆರಂಭ ದೊರೆತಿದೆ.
ಆರಿದ್ರಾ ಮಳೆ ಸುರಿಯುವ ಹೊತ್ತಿನಲ್ಲಿ ಮಳೆಯನ್ನು ಪೂಜಿಸುತ್ತ ಕೃಷಿಕರಲ್ಲಿ ಹೊಸ ಚೈತನ್ಯ, ಉತ್ಸಾಹ ಮೂಡಿಸುವ ದೃಷ್ಟಿಯಿಂದ ಆಚರಿಸಲಾಗುವ ಈ ಹಬ್ಬದ ಸಂಭ್ರಮ ಗ್ರಾಮದ ಎಲ್ಲೆಡೆ ಕಾಣುತ್ತಿದೆ.
ಮಲೆನಾಡಿನ ಬುಡಕಟ್ಟು ಸಮುದಾಯಗಳಲ್ಲಿ ಒಂದಾಗಿರುವ ದೀವರು ಸಮುದಾಯದವರಲ್ಲಿ ಪ್ರತಿ ಗ್ರಾಮದಲ್ಲೂ ಗ್ರಾಮ ದೇವತೆಯನ್ನು ಪೂಜಿಸುವ ಸಂಪ್ರದಾಯವಿದೆ. ಕೆಲವು ಗ್ರಾಮದವರು ಕುಮಾರ ರಾಮನ ಪಂಥಕ್ಕೆ ಸೇರಿದ್ದರೆ, ಮತ್ತೆ ಕೆಲವು ಗ್ರಾಮದವರು ಬೀರಪ್ಪ ಸ್ವಾಮಿಯ ಪಂಥಕ್ಕೆ ಸೇರಿದವರಾಗಿದ್ದಾರೆ.
ಪ್ರಕೃತಿ ಆರಾಧಕರಾಗಿರುವ ದೀವರ ಸಮುದಾಯದವರು ಬೀರಪ್ಪ ದೇವರ ಉತ್ಸವದ ಮೂಲಕ ವರ್ಷಪೂರ್ತಿ ನಡೆಸುವ ಕೃಷಿ ಚಟುವಟಿಕೆಗಳಿಗೆ ಮುನ್ನುಡಿ ಬರೆಯುತ್ತಾರೆ. ಅಲ್ಲದೆ ಮಳೆಯನ್ನು ಎದುರಿಸುವ ಚೈತನ್ಯವನ್ನೂ ಪಡೆದುಕೊಳ್ಳುತ್ತಾರೆ. ಸೂರನಗದ್ದೆ ಗ್ರಾಮದಲ್ಲಿ ಖಡ್ಗ ಮತ್ತು ಇತರ ಆಭರಣಗಳಿಂದ ಸಿಂಗರಿಸಿದ ಬೀರಪ್ಪ ದೇವರ ಮೂರ್ತಿಗೆ ಪೂಜೆ ಸಲ್ಲಿಸುವ ಜೊತೆಗೆ ಭೂತಪ್ಪ, ಚೌಡಮ್ಮನಿಗೂ ಪೂಜೆ ಸಂದಿರುತ್ತದೆ.
ಸೋಮವಾರ ಬೆಳಗಿನ ಜಾವ ಆರಂಭಗೊಂಡ ದೇವರ ಉತ್ಸವ ಮೂರ್ತಿಯ ಮೆರವಣಿಗೆಗೆ ಈ ನೆಲದ ಗಂಡು ಕಲೆಯೆಂದೆ ಪ್ರಸಿದ್ಧಿ ಪಡೆದಿರುವ ಡೊಳ್ಳು ಕುಣಿತ ಕಳೆ ನೀಡಿತ್ತು.
ಇದೇ ಸಂದರ್ಭದಲ್ಲಿ ಭಂಗಿ ಸೊಪ್ಪು, ಜೋನಿ ಬೆಲ್ಲ, ದ್ರಾಕ್ಷಿ, ಗೋಡಂಬಿ ಮೊದಲಾದ ಪದಾರ್ಥಗಳಿಂದ ದೇವರಿಗೆ ನೇವೈದ್ಯ ಅರ್ಪಿಸಲಾಯಿತು.
ಬೀರಪ್ಪ ಸ್ವಾಮಿ ದೇವಸ್ಥಾನ ಸಮಿತಿ ಅಧ್ಯಕ್ಷ ಗಲ್ಲಿ ವೆಂಕಟೇಶ್, ಕಾರ್ಯದರ್ಶಿ ಈಶ್ವರ್, ಖಜಾಂಚಿ ಮೈಲಪ್ಪ, ಮಂಜಪ್ಪ, ಕನ್ನಪ್ಪ, ರಾಮಪ್ಪ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.