ತ್ಯಾಗರ್ತಿ: ದೀರ್ಘಾವಧಿ ಬೆಳೆಯೊಂದಿಗೆ ಮಿಶ್ರ ಬೆಳೆಯಾಗಿ ಔಷಧ ಸಸ್ಯಗಳನ್ನು ಬೆಳೆದರೆ ರೈತರು ಹೆಚ್ಚಿನ ಆದಾಯ ಪಡೆಯಬಹುದು ಎಂಬುದನ್ನು ಪ್ರಕಾಶ್ ಮಂಚಾಲೆ ಪ್ರಾಯೋಗಿಕವಾಗಿ ತೋರಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ಔಷಧ ಗಿಡಮೂಲಿಕಾ ಪ್ರಾಧಿಕಾರದ ಸಂಚಾಲಕ ಡಾ. ಪ್ರಭು ಹೇಳಿದರು.
ಸಾಗರ ತಾಲ್ಲೂಕಿನ ಮಂಚಾಲೆ ಗ್ರಾಮದಲ್ಲಿ ಪ್ರಕಾಶ್ ಮಂಚಾಲೆ ಅವರ ಅಡಿಕೆ ತೋಟದಲ್ಲಿ ಉಪಬೆಳೆಯಾಗಿ ಬೆಳೆದ ಔಷಧ ಸಸ್ಯಗಳು ಹಾಗೂ ಕಾಡು ಕೃಷಿಯನ್ನು ವೀಕ್ಷಿಸಿ ಮಾತನಾಡಿದರು.
ಆದಾಯ ನಿರೀಕ್ಷಿಸದೇ ಹಲವಾರು ಸಂಕಷ್ಟಗಳ ಮಧ್ಯೆಯೂ ಪ್ರಾಯೋಗಿಕವಾಗಿ ಇಂತಹ ಕೃಷಿಯಲ್ಲಿ ತೊಡಗಿಕೊಂಡಿರುವ ಪ್ರಕಾಶ್ ಅವರು ಪ್ರತಿಯೊಬ್ಬರಿಗೂ ಮಾದರಿಯಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಅರಣ್ಯ ಇಲಾಖೆಯಿಂದ ಸಾಗಾಣೆ ಮತ್ತು ಮಾರಾಟಕ್ಕೆ ಅವಕಾಶವಿಲ್ಲದರ ಬಗ್ಗೆ ಬೇಸರ ವ್ಯಕ್ತಪಡಿಸಿದ ಪ್ರಕಾಶ್ ಮಂಚಾಲೆ ರೈತರಿಗೆ ಸಮರ್ಪಕ ಮಾಹಿತಿ, ಹವಾಮಾನ ಆಧಾರಿತ ಬೆಳೆಗಳ ಅಭಿವೃದ್ಧಿ, ಗಿಡಗಳ ಕೊರತೆ, ಪಹಣಿಯಲ್ಲಿ ಬೆಳೆದ ಬೆಳೆಯ ನಮೂದೀಕರಣ, ಖರೀದಿ ಕೇಂದ್ರ ಹಾಗೂ ಸಂಸ್ಕರಣಾ ಘಟಕಗಳನ್ನು ನಿರ್ಮಿಸಿದರೆ ರೈತರು ಆದಾಯವನ್ನು ಹೆಚ್ಚಿಸಿಕೊಳ್ಳಬಹುದು. ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ರೈತರಿಗೆ ಇಂತಹ ಅಂಶಗಳನ್ನು ದೊರಕಿಸಿಕೊಡುವಲ್ಲಿ ಪ್ರಾಮಾಣಿಕ ಪ್ರಯತ್ನ ನೆಡೆಸಿದರೆ ಮಾತ್ರ ಮಿಶ್ರ ಬೆಳೆಯಾಗಿ ಔಷಧ ಸಸ್ಯಗಳನ್ನು ಬೆಳೆಯಲು ಸಹಕಾರಿಯಾಗುತ್ತದೆ ಎಂದರು.
ಪ್ರಾಧಿಕಾರದಕಾರ್ಯನಿರ್ವಾಹಕ ಅಧಿಕಾರಿಸುದರ್ಶನ್ ಜಿ. ಮಾತನಾಡಿ,‘ರೈತರಸಮಸ್ಯೆಗಳು ಕೇವಲ ಒಂದು ಇಲಾಖೆಗೆ ಸಂಬಂಧಿಸಿದ್ದಲ್ಲ.ಹೀಗಾಗಿ ಎಲ್ಲಾ ಇಲಾಖೆಗಳೊಂದಿಗೆ ಚರ್ಚಿಸಿ ಸಮಸ್ಯೆಗೆ ಪರಿಹಾರ ದೊರಕಿಸಿ ಕೊಡುವಲ್ಲಿ ಪ್ರಾಮಾಣಿಕವಾಗಿಪ್ರಯತ್ನಿಸುತ್ತೇವೆ’ ಎಂದು ಅವರು ಹೇಳಿದರು.
ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಸೈಯದ್ ಹುಸೇನಿ, ಎನ್.ಎ. ದತ್ತಮೂರ್ತಿ ನೀಚಡಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.