ADVERTISEMENT

ಅಪರೂಪದ ಸಂಶೋಧಕ ಗುಂಡಾ ಜೋಯಿಸ್

ಶಿವಮೊಗ್ಗ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರ ಪರಿಚಯ

ವಿಲಿಯಂ
Published 30 ಮಾರ್ಚ್ 2022, 1:43 IST
Last Updated 30 ಮಾರ್ಚ್ 2022, 1:43 IST
ಡಾ.ಕೆಳದಿ ಗುಂಡಾ ಜೋಯಿಸ್
ಡಾ.ಕೆಳದಿ ಗುಂಡಾ ಜೋಯಿಸ್   

ಸಾಗರ: ಸಂಶೋಧನೆಗಳ ಮೂಲಕ ಇತಿಹಾಸವನ್ನು ಕಟ್ಟುವವರು, ಕಟ್ಟಿರುವ ಇತಿಹಾಸದ ಮೇಲೆ ಹೊಸ ಬೆಳಕನ್ನು ಚೆಲ್ಲುವವರು ಎಂದೂ ಜನಪ್ರಿಯತೆಯ ಬೆಳಕಿನಲ್ಲಿರಲು ಸಾಧ್ಯವಿಲ್ಲ. ಸಂಶೋಧನಾ ಪ್ರಕ್ರಿಯೆಯ ಗುಣವೇ ಹಾಗೆ. ನಾವು ನಿಂತಿರುವ ನೆಲದ ಇತಿಹಾಸಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಬದುಕುವ ಪ್ರವೃತ್ತಿ ಹೆಚ್ಚಿರುವಾಗ ಇತಿಹಾಸ ಸಂಶೋಧಕರು ನಮ್ಮ ಕಣ್ಣಿಗೆ ಬೀಳುವುದಿಲ್ಲ.

ಕೆಳದಿ ಗುಂಡಾ ಜೋಯಿಸರು ಕೆಳದಿಯ ಇತಿಹಾಸದ ಬಗ್ಗೆ ಸಮಗ್ರ ಸಂಶೋಧನೆ ಮಾಡಿರುವ ಅಪರೂಪದ ಸಂಶೋಧಕ. ಈ ಕಾರ್ಯದಲ್ಲೇ ತಮ್ಮ ಬದುಕನ್ನು ಸವೆಸಿರುವ ಅವರ ಸೃಜನಶೀಲತೆಯ ವಿವಿಧ ಅಭಿವ್ಯಕ್ತಿಗಳು ನಮ್ಮ ಪಂಚೇಂದ್ರಿಯಗಳಿಗೆ ನೇರವಾಗಿ ತಟ್ಟುವ ರೀತಿಯಲ್ಲಿವೆ.

ಇತಿಹಾಸಕ್ಕೆ ಸಂಬಂಧಪಟ್ಟಂತೆ ಸಂಶೋಧನೆ, ಪುಸ್ತಕ ಪ್ರಕಟಣೆ, ಹಸ್ತಪ್ರತಿಗಳ ಸಂಗ್ರಹಣೆ, ಶಿಲಾಶಾಸನಗಳ ಶೋಧನೆ ಹಾಗೂ ಜೋಡಣೆ, ಸರ್ಕಾರದ ಗೆಜೆಟಿಯರ್ ಹಾಗೂ ವಿದೇಶಿ ಪ್ರವಾಸಿಗರ ಬರಹಗಳನ್ನು ಒಂದೆಡೆ ತರುವಂತಹ ಕ್ಲಿಷ್ಟ ಕೆಲಸಗಳನ್ನು ಗುಂಡಾ ಜೋಯಿಸರು ಈವರೆಗೆ ನಿಷ್ಠೆಯಿಂದ ನಡೆಸಿಕೊಂಡು ಬಂದಿದ್ದಾರೆ. ಈ ಮೂಲಕ ಕೆಳದಿ ಇತಿಹಾಸಕ್ಕೆ ಭದ್ರ ಬುನಾದಿ ಹಾಗೂ ಚೌಕಟ್ಟನ್ನು ಒದಗಿಸಿದ್ದಾರೆ.

ADVERTISEMENT

ಸುತ್ತುಪಂಚೆ, ಕರಿಕೋಟು, ಕೈಯಲ್ಲೊಂದು ಚೀಲ, ಕಿವಿಗೆ ಅಳವಡಿಸಿರುವ ಒಂದು ಚಿಕ್ಕ ಯಂತ್ರ, ತುಸು ಬೋಳು ತಲೆಯ ಚುರುಕುಗಣ್ಣಿನ ಮಧ್ಯಮ ಎತ್ತರದ ಗುಂಡಾ ಜೋಯಿಸರಿಗೆ ಈಗ 92 ವರ್ಷ. ಆದಾಗ್ಯೂ ಅವರ ಉತ್ಸಾಹ, ಜೀವನ ಪ್ರೀತಿ, ಹುಡುಕಾಟ ಇನ್ನೂ ಹಸಿರಾಗಿಯೇ ಇದೆ.

1948ರಿಂದಲೇ ಜೋಯಿಸರು ಕೆಳದಿ ಇತಿಹಾಸದ ಕುರಿತು ಅಧ್ಯಯನದಲ್ಲಿ ತೊಡಗಿಕೊಂಡಿದ್ದಾರೆ. ವಿಜಯನಗರ ಸಾಮ್ರಾಜ್ಯದ ಇತಿಹಾಸಕ್ಕೆ ದೊರಕಿರುವಷ್ಟು ಮನ್ನಣೆ ಕೆಳದಿ ಇತಿಹಾಸಕ್ಕೆ ದೊರಕಿಲ್ಲ ಎಂಬ ಕೊರಗು ಈಗಲೂ ಅವರನ್ನು ಕಾಡುತ್ತಿದೆ. ಕೆಳದಿ ಅರಸರಾದ ಸದಾಶಿವಪ್ಪ ನಾಯಕನ ಸಾಹಿತ್ಯ ಸೃಷ್ಟಿ, ವೀರಮ್ಮಳ ದಿಟ್ಟ ಹೋರಾಟ, ಚೆನ್ನಮ್ಮಳ ಔದಾರ್ಯ, ಕೆಚ್ಚೆದೆಯ ಮನೋಭಾವ, ಶಿವಪ್ಪನಾಯಕನ ಆಡಳಿತ ಸುಧಾರಣೆ ಹೀಗೆ ಹತ್ತು ಹಲವು ಪ್ರಮುಖ ಸಂಗತಿಗಳನ್ನು ಗುಂಡಾ ಜೋಯಿಸರು ತಮ್ಮ ಸಂಶೋಧನೆಯಲ್ಲಿ ಗುರುತಿಸುವ ಮೂಲಕ ಕೆಳದಿ ಇತಿಹಾಸದ ಮೇಲೆ ಹೊಸ ಬೆಳಕು ಚೆಲ್ಲಿದ್ದಾರೆ.

ಕೆಳದಿ ಇತಿಹಾಸದ ಕುರಿತ ದಾಖಲೆಗಳು, ಶಿಲಾ ಶಾಸನಗಳು, ಸ್ವರ್ಣಶಾಸನಗಳು, ಕಡತಗಳು, ನಾಣ್ಯಗಳು, ಅಖೈರುಗಳು ಹೀಗೆ ಹತ್ತು ಹಲವು ಸಾಮಗ್ರಿಗಳನ್ನು ಸಂಗ್ರಹಿಸಿರುವ ಜೋಯಿಸರು ಕೆಳದಿ ಪ್ರಾಚ್ಯವಸ್ತು ಸಂಗ್ರಹಾಲಯದ ಮೆರುಗನ್ನು ಹೆಚ್ಚಿಸಿದ್ದಾರೆ.

ಹುಬ್ಬಳ್ಳಿಯ ಮೂರು ಸಾವಿರ ಮಠದ ವತಿಯಿಂದ ಪ್ರಕಟವಾಗಿರುವ ಪ್ರಾಚೀನ ಓಲೆಗರಿ ಹಸ್ತಸೂಚಿಯಂತೂ ಜೋಯಿಸರ ಪರಿಶ್ರಮಕ್ಕೊಂದು ಗಟ್ಟಿ ಸಾಕ್ಷಿಯಾಗಿದೆ. ಮಠದಲ್ಲಿಯೆ ಹಗಲಿರುಳು ಕುಳಿತು ಹಸ್ತಪ್ರತಿಗಳನ್ನು ಅಧ್ಯಯನ ಮಾಡಿ, ಸಂಸ್ಕರಿಸಿ ಸಿದ್ಧಪಡಿಸುವಲ್ಲಿ ಅವರು ವಹಿಸಿರುವ ಪಾತ್ರವನ್ನು ಮರೆಯುವಂತಿಲ್ಲ.

ತಾಳಗರಿಯೊಳಗೆ ಸಂಗ್ರಹವಾಗಿದ್ದ ‘ಶ್ರೀರಾಮ ಕರ್ಣಾಮೃತ’ ಎಂಬ 27 ಶ್ಲೋಕಗಳ ಕೃತಿಯನ್ನು ಸಂಪಾದಿಸಿ ಅದರ ಕನ್ನಡ ಭಾವಾನುವಾದವನ್ನು ಜೋಯಿಸರು ನೀಡಿದ್ದಾರೆ. ‘ಪಾರ್ವತಿ ವಲ್ಲಭ ಶತಕ’, ‘ಕೆಳದಿ ಸಂಕ್ಷಿಪ್ತ ಇತಿಹಾಸ’, ‘ಕೆಳದಿ ಸಂಸ್ಥಾನ ಇಕ್ಕೇರಿ ಅರಸರು’, ‘ಬಿದನೂರಿನ ಕೆಳದಿ ನಾಯಕರು’, ‘ಕೆಳದಿ ವೆಂಕಟಣ್ಣನ ಕೀರ್ತನೆಗಳು’ ಸೇರಿ 18 ಪುಸ್ತಕಗಳನ್ನು ಅವರು ಈವರೆಗೆ ಹೊರತಂದಿದ್ದಾರೆ.

ಕೆಳದಿ ಎಂದ ಕೂಡಲೇ ಅದರ ಜೊತೆಗೆ ನೆನಪಾಗುವ ಮತ್ತೊಂದು ಹೆಸರು ಗುಂಡಾ ಜೋಯಿಸರು ಎಂಬುದರಲ್ಲಿ ಅನುಮಾನವೇ ಇಲ್ಲ. ಕೆಳದಿ ಇತಿಹಾಸದ ಎತ್ತರವನ್ನು ಕಾಪಿಡುವಲ್ಲಿ ಅವರು ವಹಿಸುತ್ತಿರುವ ಪಾತ್ರವನ್ನು ಮರೆಯಲು ಸಾಧ್ಯವೇ ಇಲ್ಲ.

‘ಗುಂಡ’ನಾದ ಲಕ್ಷ್ಮೀನಾರಾಯಣ

ಗುಂಡಾ ಜೋಯಿಸರ ನಿಜನಾಮ ಲಕ್ಷ್ಮೀನಾರಾಯಣ. ಆದರೆ ಅವರು ಜನಿಸುವ ಪೂರ್ವದಲ್ಲಿ ಅವರ ತಾಯಿಗೆ ಹುಟ್ಟಿದ್ದ ಇಬ್ಬರು ಮಕ್ಕಳು ತೀರಿಕೊಂಡಿದ್ದರು. ಈ ಮಗುವಾದರೂ ಗುಂಡುಕಲ್ಲಿನಂತೆ ಬದುಕಲಿ ಎಂದು ‘ಗುಂಡ’ನೆಂದು ಕರೆಯತೊಡಗಿದರಂತೆ. ಈ ಹೆಸರೇ ಮುಂದೆ ಗುಂಡಾ ಜೋಯಿಸ್ ಎಂದು ಪ್ರಚಲಿತಕ್ಕೆ ಬಂದಿತು.

(ಲೇಖಕರು ನಿವೃತ್ತ ಶಿಕ್ಷಕರು ಹಾಗೂ ಕವಿ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.