
ಸಾಗರ: ಈ ಭಾಗದಲ್ಲಿ ಶಾಸ್ತ್ರೀಯ ನೃತ್ಯ ತರಬೇತಿ ಸಂಸ್ಥೆಯನ್ನು ಸಕ್ರಿಯವಾಗಿ ನಡೆಸುವ ಮೂಲಕ ಗುರು ಶಿಷ್ಯ ಪರಂಪರೆಯನ್ನು ಪುನರುತ್ಥಾನಗೊಳಿಸುವಲ್ಲಿ ನಾಟ್ಯತರಂಗ ಸಂಸ್ಥೆ ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಟಿ.ಡಿ. ಮೇಘರಾಜ್ ಹೇಳಿದರು.
ಇಲ್ಲಿನ ಶ್ರೀನಗರ ಬಡಾವಣೆಯ ನೃತ್ಯಭಾಸ್ಕರ ಸಭಾಂಗಣದಲ್ಲಿ ನಾಟ್ಯತರಂಗ ಸಂಸ್ಥೆ ಈಚೆಗೆ ಏರ್ಪಡಿಸಿದ್ದ ರಾಷ್ಟ್ರೀಯ ಸಂಸ್ಕೃತಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಸಂಸ್ಥೆಯ ಸ್ಥಾಪಕರಾದ ವಿದ್ವಾನ್ ಜಿ.ಬಿ.ಜನಾರ್ಧನ್ ದಂಪತಿಯನ್ನು ಸನ್ಮಾನಿಸಿ ಮಾತನಾಡಿದರು.
ನಾಟ್ಯತರಂಗ ಸಂಸ್ಥೆಯಲ್ಲಿ ತರಬೇತಿ ಪಡೆದಿರುವ ವಿದ್ಯಾರ್ಥಿಗಳ ದೇಹಭಾಷೆಯಲ್ಲಿ ಗುರು–ಶಿಷ್ಯ ಪರಂಪರೆಯ ಚಹರೆ ಇರುವುದನ್ನು ಮೇಲ್ನೋಟಕ್ಕೆ ಗುರುತಿಸಬಹುದು. ಈ ಮೂಲಕ ಇಲ್ಲಿನ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಸಮೃದ್ಧಗೊಳಿಸುವ ಕಾರ್ಯದಲ್ಲಿ ನಾಟ್ಯತರಂಗ ಸಂಸ್ಥೆ ಭಾಗಿಯಾಗಿರುವುದು ಗಮನಾರ್ಹ ಸಂಗತಿಯಾಗಿದೆ ಎಂದರು.
1992ರಿಂದ ನೃತ್ಯ ತರಬೇತಿ ಶಾಲೆಯನ್ನು ನಿರಂತರವಾಗಿ ನಡೆಸುತ್ತಿರುವ ನೃತ್ಯಗುರು ವಿದ್ವಾನ್ ಜಿ.ಬಿ.ಜನಾರ್ಧನ್ ಅವರ ಸಾಧನೆಯನ್ನು ಗುರುತಿಸಿ ರಾಜ್ಯೋತ್ಸವ ಪ್ರಶಸ್ತಿ ನೀಡುವ ಸಂಬಂಧ ಈ ಭಾಗದ ಜನರು ಸರ್ಕಾರದ ಮೇಲೆ ಒತ್ತಡ ತರಬೇಕು ಎಂದು ಹೋಟೆಲ್ ಮಾಲಿಕರ ಸಂಘದ ಪ್ರಮುಖರಾದ ಎಚ್.ಎನ್. ಉಮೇಶ್ ಹೇಳಿದರು.
ಕಲಾ ಪೋಷಕಿ ಶ್ಯಾಮಲಾ ರವಿಹೆಗಡೆ, ಐ.ವಿ.ಹೆಗಡೆ, ಜಯಂತಿ ಸುಬ್ಬಣ್ಣ ಇದ್ದರು. ಪ್ರಣೀತ್ ಪ್ರಾರ್ಥಿಸಿದರು. ಆರಭಿ ಐತುಮನೆ ಸ್ವಾಗತಿಸಿದರು. ವಿದುಷಿ ರಾಜಲಕ್ಷ್ಮಿ ಕಾನುಗೋಡು ಅವರಿಂದ ಭರತನಾಟ್ಯ, ಜನಾರ್ಧನ್ ಸಂಗಡಿಗರಿಂದ ‘ನಳ ದಮಯಂತಿ’ ನೃತ್ಯರೂಪಕ ಪ್ರದರ್ಶನಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.