ADVERTISEMENT

ಬಿಜೆಪಿ ಅಧಿಕಾರಕ್ಕೆ ತರಲು ಆರ್‌ಎಸ್‌ಎಸ್‌ ಹಣ ಸಂಗ್ರಹ

ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪ

​ಪ್ರಜಾವಾಣಿ ವಾರ್ತೆ
Published 27 ಜೂನ್ 2022, 3:06 IST
Last Updated 27 ಜೂನ್ 2022, 3:06 IST
ಎಚ್.ಡಿ. ಕುಮಾರಸ್ವಾಮಿ
ಎಚ್.ಡಿ. ಕುಮಾರಸ್ವಾಮಿ   

ಶಿವಮೊಗ್ಗ: ‘ದೇಶದಲ್ಲಿ ಚುನಾಯಿತ ಸರ್ಕಾರಗಳನ್ನು ಅಸ್ಥಿರಗೊಳಿಸಿ ಬಿಜೆಪಿ ಅಧಿಕಾರಕ್ಕೆ ತರಲು ಆರ್‌ಎಸ್‌ಎಸ್‌ನಿಂದ ಹಣ ಸಂಗ್ರಹ ನಡೆಯುತ್ತಿದೆ. ಮಹಾರಾಷ್ಟ್ರದಲ್ಲಿ ಶಿವಸೇನಾ ನೇತೃತ್ವದ ಸರ್ಕಾರವನ್ನು ಅಸ್ಥಿರಗೊಳಿಸುವ ಕಾರ್ಯದ ಹಿಂದೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಇದ್ದಾರೆ’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಕರ್ನಾಟಕದಲ್ಲಿ ಜೆಡಿಎಸ್ ನೇತೃತ್ವದ ಮೈತ್ರಿ ಸರ್ಕಾರವನ್ನು ಕಾಂಗ್ರೆಸ್ ನಾಯಕರ ಸಹಕಾರದಿಂದಲೇ ಕೆಡವಲಾಯಿತು. ಆಗಲೂ ಅಮಿತ್ ಶಾ ನೇತೃತ್ವ ವಹಿಸಿದ್ದರು. ರಾಜಸ್ತಾನ, ಜಾರ್ಖಂಡ್‌ ಸರ್ಕಾರಗಳನ್ನು ಬದಲಾಯಿ ಸುವ ಕೆಲಸವೂ ನಡೆಯಲಿದೆ ಎಂದರು.

‘ಚುನಾವಣೆ ವೇಳೆಯೂ ಒಂದೊಂದು ಕ್ಷೇತ್ರಕ್ಕೆ ₹ 30 ಕೋಟಿ ತಂದು ಸುರಿದು ಜನರ ಮತ ಪಡೆಯಬೇಕಲ್ಲ. ಅದಕ್ಕೂ ಆರ್‌ಎಸ್‌ಎಸ್‌ ಹಣ ಸಂಗ್ರಹ ಮಾಡುತ್ತಿದೆ. ಇದರಲ್ಲಿ ಸಂಶಯ ಏನೂ ಇಲ್ಲ. ಬೆಂಗಳೂರಿನಲ್ಲಿ ಸಾವಿರಾರು ಕೋಟಿ ಅಭಿವೃದ್ಧಿ ಕಾಮಗಾರಿ ಘೋಷಣೆ ಮಾಡುತ್ತಾರೆ. ಅದರಲ್ಲಿ ಒಂದೊಂದು ಕ್ಷೇತ್ರಕ್ಕೆ ₹130ರಿಂದ ₹200 ಕೋಟಿ ಕೊಡುತ್ತಾರೆ. ಅದರಲ್ಲಿ ಯಾರಿಗೆ ಎಷ್ಟೆಷ್ಟು ಪಾಲು ಹೋಗುತ್ತಿದೆ ಎಂದು ಸಂಬಂಧಿಸಿದ ಮಂತ್ರಿಗಳು ಧೈರ್ಯವಿದ್ದರೆ ಹೇಳಲಿ’ ಎಂದು ಸವಾಲು ಹಾಕಿದರು.

ADVERTISEMENT

‘ಈ ಮೊದಲು ಕಾಂಗ್ರೆಸ್‌ಮುಕ್ತ ರಾಷ್ಟ್ರ ಮಾಡುತ್ತೇವೆ ಎಂದವರು ಈಗ ಪ್ರಾದೇಶಿಕ ಪಕ್ಷಗಳನ್ನು ಮುಗಿಸಲು ಹೊರಟಿದ್ದಾರೆ. ಬಿಜೆಪಿ ಹೊರತಾಗಿ ದೇಶದಲ್ಲಿ ಯಾವುದೇ ಪಕ್ಷ ಇರುವುದು ಬೇಡ ಎಂದು ಕೇಂದ್ರ ಸರ್ಕಾರವೇ ಶಾಸನ ರೂಪಿಸಿಬಿಡಲಿ’ ಎಂದು ಅವರು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.