ಸೊರಬ: ತಾಲ್ಲೂಕಿನ ಚಂದ್ರಗುತ್ತಿ ಭಾಗದಲ್ಲಿ ಮಂಗಳವಾರ ದಿಢೀರ್ ಸುರಿದ ಮಳೆಗೆ ಜನ–ಜೀವನ ಅಸ್ತವ್ಯಸ್ತವಾಗಿದೆ.
ತಾಲ್ಲೂಕಿನ ಇತಿಹಾಸಿ ಪ್ರಸಿದ್ಧ ಚಂದ್ರಗುತ್ತಿ ಭಾಗದಾದ್ಯಂತ ಭಾರಿ ಮಳೆಯಾಗಿದ್ದು, ಗ್ರಾಮದಲ್ಲಿ ಸಮರ್ಪಕ ಚರಂಡಿ ವ್ಯವಸ್ಥೆ ಇಲ್ಲದೆ ರಸ್ತೆ ತುಂಬೆಲ್ಲಾ ನೀರು ಹರಿದು ಪಾದಾಚಾರಿಗಳು ಹಾಗೂ ವಾಹನ ಸವಾರರು ಸಂಚರಿಸಲು ಹರಸಾಹಸ ಪಟ್ಟರು.
ಒಂದು ವಾರ ಮಳೆ ಬಿಡುವು ನೀಡಿತ್ತು. ಈ ಮಧ್ಯೆ ದಿಢೀರ್ ಮಳೆಯಾಗಿದ್ದು, ಇದರಿಂದ ಸಂಜೆ ವೇಳೆ ವ್ಯಾಪಾರಸ್ತರಿಗೆ ತೊಂದರೆ ಉಂಟಾಗಿತ್ತು. ಶ್ರಾವಣ ಮಾಸದ ಮಂಗವಾಳರದಲ್ಲಿ ರೇಣುಕಾಂಬ ದೇವಾಲಯಕ್ಕೆ ಸಾವಿರಾರು ಸಂಖ್ಯೆಯ ಭಕ್ತಾರು ಆಗಮಿಸಿದ್ದು, ದೇವಾಲಯದಿಂದ ಬಸ್ ನಿಲ್ದಾಣಕ್ಕೆ ತೆರಳಲು ಪರದಾಡುವಂತಾಯಿತು.
‘ಭಕ್ತರು ನೂರಾರು ಕಿ.ಮೀ ದೂರದಿಂದ ಆಗಮಿಸುತ್ತಾರೆ. ಚರಂಡಿ ನೀರು ರಸ್ತೆಗೆ ಹರಿದು ಓಡುಡುವುದೇ ದುಸ್ಥರವಾಗಿದೆ. ಐತಿಹಾಸಿಕ ದೇವಾಲಯದ ಸ್ಥಳದಲ್ಲೇ ಈ ಅವ್ಯವಸ್ಥೆ ಇದ್ದು, ಈ ಬಗ್ಗೆ ಗ್ರಾಮ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ನಾಚಿಕೆಗೇಡಿನ ವಿಷಯ’ ಎಂದು ಭಕ್ತರು ಕಿಡಿಕಾರಿದರು.
ಚಂದ್ರಗುತ್ತಿಯಲ್ಲಿ 1 ಗಂಟೆಗಳ ಕಾಲ ಸುರಿದ ಮಳೆಗೆ ಚರಂಡಿ ನೀರು ರಸ್ತೆ ಮೇಲೆ ಹರಿದಿದ್ದು, ರಸ್ತೆಗಳೆಲ್ಲ ಕೆರೆಯಂತಾಗಿ ವಾಹನ ಸವಾರರು ಪರದಾಡಿದರು. ಹಲವಡೆ ವಿದ್ಯುತ್ ವ್ಯತ್ಯಯವಾಗಿ ತೊಂದರೆ ಅನುಭವಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.